ಟೋಕಿಯೊ ಒಲಿಂಪಿಕ್ಸ್: ನಾವು ಬಿಟ್ಟುಕೊಟ್ಟಿಲ್ಲ – ಹೋರಾಡಿದ್ದೇವೆ – ಗೆದ್ದಿದ್ದೇವೆ; ಈ ಪದಕವನ್ನು ಕೋವಿಡ್ ಯೋಧರಿಗೆ ಅರ್ಪಿಸುತ್ತೇವೆ: ಮನ್ ಪ್ರೀತ್ ಸಿಂಗ್
ಭಾರತದ ಹಾಕಿ ತಂಡವು 41 ವರ್ಷಗಳ ನಂತರ ಒಲಿಂಪಿಕ್ನಲ್ಲಿ ಕಂಚಿನ ಪದಕವನ್ನು ಗೆದ್ದಿದೆ. ಈ ಗೆಲುವನ್ನು ಮತ್ತು ಪದಕವನ್ನು ಕೊರೊನಾ ವಿರುದ್ದ ಹೋರಾಟದಲ್ಲಿ ಮುನ್ನೆಲೆಯಲ್ಲಿರುವ ದೇಶದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಅರ್ಪಿಸುತ್ತೇವೆ. ಅವರೆಲ್ಲರೂ ಕೊರೊನಾ ಸೋಂಕಿನ ಸಮಯದಲ್ಲಿ ಜೀವಗಳನ್ನು ಉಳಿಸಲು ಅವಿರತವಾಗಿ ಶ್ರಮಿಸಿದ್ದಾರೆ ಎಂದು ಭಾರತ ತಂಡದ ನಾಯಕ ನಾಯಕ ಮನ್ ಪ್ರೀತ್ ಸಿಂಗ್ ಹೇಳಿದ್ದಾರೆ.
ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಭಾರತ ತಂಡ 5-4 ಅಂತರದಲ್ಲಿ ಜರ್ಮನಿಯ ವಿರುದ್ದ ಗೆಲುವು ಸಾಧಿಸಿದೆ. ಇದು ಹಾಕಿಯ್ಲಿ ಭಾರತಕ್ಕೆ ಸಂದ 12ನೇ ಪದಕವಾಗಿದೆ. ಆದರೆ, ನಾಲ್ಕ ದಶಕಗಳ ನಂತರ ದೊರೆತ ಮೊದಲ ಪದಕವಾಗಿದೆ.
ಭಾರತ 1980ರಲ್ಲಿ ನಡೆದ ಮಾಸ್ಕೋ ಕ್ರೀಡಾಕೂಟದಲ್ಲಿ ಕೊನೆಯ ಬಾರಿಗೆ ವೇದಿಕೆಯಲ್ಲಿ ನಿಂತು ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಇದೂವರೆಗೂ ಎಲ್ಲಾ ಕ್ರೀಡಾಕೂಟಗಳಲ್ಲಿ ದೇಶದ ಹಾಕಿ ತಂಡು ಎಂಟು ಚಿನ್ನದ ಪದಕಗಳನ್ನು ಗೆದ್ದಿದೆ.
“ಈಗ ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ. ಈ ಸಮುಯ ಅದ್ಭುತವಾಗಿದೆ. ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇವೆ, ಕಳೆದ 15 ತಿಂಗಳುಗಳು ನಮಗೆ ಕಷ್ಟಕರವಾಗಿತ್ತು, ನಾವು ಬೆಂಗಳೂರಿನಲ್ಲಿದ್ದೆವು ಮತ್ತು ನಮ್ಮಲ್ಲಿ ಕೆಲವರಿಗೆ ಕೋವಿಡ್ ಕೂಡ ಬಂದಿತ್ತು. ಇದೆಲ್ಲರ ಮಧ್ಯೆ ಇಂದು ಪದಕ ಗೆದ್ದಿದ್ದೇವೆ. ಇದನ್ನು ನಮ್ಮ ದೇಶದ ಕೊರೊನಾ ವಾರಿಯರ್ಸ್ಗೆ ಅರ್ಪಿಸುತ್ತೇವೆ” ಎಂದು ಮನ್ ಪ್ರೀತ್ ಭಾವುಕರಾಗಿ ಹೇಳಿದ್ದಾರೆ.
“ನಮಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಇದು ಭಾರತೀಯ ಹಾಕಿಯಲ್ಲಿ ಮತ್ತರವಾದ ಆರಂಭವಾಗಿದೆ. ‘ಭಾರತದಲ್ಲಿ ಜನರು ಹಾಕಿಯನ್ನು ಮರೆಯುತ್ತಿದ್ದಾರೆ. ಮೊದಲು ಅವರು ಹಾಕಿಯನ್ನು ಪ್ರೀತಿಸುತ್ತಿದ್ದರು. ಆದರೆ ನಾವು ಗೆಲ್ಲಬಹುದೆಂಬ ಭರವಸೆಯನ್ನು ಅವರು ಕಳೆದುಕೊಂಡರು.’ ಇದೀಗ ನಾವು ಗೆದ್ದಿದ್ದೇವೆ. ಭವಿಷ್ಯದಲ್ಲಿ ಭಾರತೀಯ ಜನರು ನಮ್ಮಿಂದ ಹೆಚ್ಚಿನದನ್ನು ನಿರೀಕ್ಷಿಸಬಹುದು. ನಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ” ಎಂದು ತಂಡದ ಆಟಗಾರ ಡ್ರ್ಯಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: 41 ವರ್ಷಗಳ ನಂತರ ಫಲ; ಭಾರತೀಯ ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ!