‘ಹಿರಿಯರು ಗೌರವ ಕೊಟ್ಟು ಗೌರವ ತೆಗೆದುಕೊಳ್ಳಲಿ’ ಸಚಿವ ವಿ.ಸೋಮಣ್ಣಗೆ ಪ್ರೀತಂಗೌಡ ತಿರುಗೇಟು..!
‘ಹಿರಿಯರು ಗೌರವ ಕೊಟ್ಟು ಗೌರವ ತೆಗೆದುಕೊಳ್ಳಲಿ’ ಎಂದು ಸಚಿವ ವಿ ಸೋಮಣ್ಣಗೆ ಪ್ರೀತಂಗೌಡ ಟಾಂಗ್ ಕೊಟ್ಟಿದ್ದಾರೆ.
ವಿಧಾನಸೌಧದ ಬಳಿ ಮಾತನಾಡಿದ ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಸಚಿವ ವಿ ಸೋಮಣ್ಣಗೆ ತಿರುಗೇಟು ಕೊಟ್ಟಿದ್ದಾರೆ. ‘ ಹಿರಿಯರು ಗೌರವ ಕೊಟ್ಟು ಗೌರವ ತೆಗೆದುಕೊಳ್ಳಲಿ. ನಾನು ರಾಜಕಾರಣ ಮಾಡಲಿಕ್ಕೆ ಬಂದಿದ್ದೇನೆ. ಕಬ್ಬನ್ ಬಪಾರ್ಕ್, ಲಾಲ್ ಬಾಗ್ ನೋಡಲು ಬಂದಿಲ್ಲ. 1 ಸಲ ಗೆದ್ದವರಿಗೆ 7 ಸಲ ಗೆದ್ದವರಿಗೂ ಒಂದೇ ಓಟು. 6-7 ಸಲ ಗೆದ್ದರೆ 7-8 ಓಟು ಇರುವುದಿಲ್ಲ. ಅವರವರ ಸಾಮಾರ್ಥ ಅವರಿಗೆ ಗೊತ್ತಿರುತ್ತದೆ ಎಂದು ಹೇಳಿದ್ದಾರೆ. ಹಿರಿಯರು ಏನ್ ಇದ್ದರೂ ಫೋನ್ ಮಾಡಿ ಹೇಳುತ್ತಾರೆ. ರಾಜಕೀಯ ನಡೆ ನನಗೂ ಗೊತ್ತಿದೆ. ಮತ್ತೆ ಅವರು ಮಾತನಾಡಿದರೆ ನಾನೂ ಮಾತನಾಡುತ್ತೇನೆ’ ಎಂದು ನೇರವಾಗಿ ವಾರ್ನಿಂಗ್ ಕೊಟ್ಟು ಮಾತನಾಡಿದ್ದಾರೆ.
ಶಾಸಕ ಪ್ರೀತಂ ಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಮೇಲೆ ಎಚ್.ಡಿ.ದೇವೇಗೌಡ ಅವರನ್ನು ಹೋಗಿ ಭೇಟಿಯಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ‘‘ಹೊಂದಾಣಿಕೆ ರಾಜಕೀಯ ಮಾಡುವುದಕ್ಕೆ ನಾನು ಬಿಡುವುದಿಲ್ಲ. ಆದರೂ ಹೊಂದಾಣಿಕೆ ರಾಜಕೀಯ ಮಾಡಿದರೆ ನಾನು ಮತದಾರನಾಗಿ ಮನೆಯಲ್ಲಿಯೇ ಇದ್ದುಬಿಡುತ್ತೇನೆ. ಇಲ್ಲವೇ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಇದ್ದುಬಿಡುತ್ತೇನೆ. ಸಿಎಂ ನಡೆಯಿಂದ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ’’ ಎಂದು ಪ್ರೀತಂಗೌಡ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ, ಪ್ರೀತಂಗೌಡ ಒಮ್ಮೆ ಶಾಸಕರಾದ ತಕ್ಷಣವೇ ದೇವರಲ್ಲ ಎಂದು ತಿರುಗೇಟು ನೀಡಿದ್ದರು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ‘‘ನಾನು ಮೊದಲ ಬಾರಿಗೆ ಸಚಿವನಾದಾಗ ಪ್ರೀತಂ ಹುಟ್ಟಿರಲಿಲ್ಲ. ಎಚ್.ಡಿ.ದೇವೇಗೌಡ ಕುಟುಂಬಕ್ಕೆ 50 ವರ್ಷದ ರಾಜಕೀಯ ಇತಿಹಾಸವಿದೆ. ನಾನು ಕೂಡ ಹೆಚ್.ಡಿ.ದೇವೇಗೌಡರ ಮನೆಗೆ ಹೋಗಿದ್ದೆ. ರಾಷ್ಟ್ರದ ಪ್ರಧಾನಿಗಳಾಗಿದ್ದವರು ಅವರು. ಶಾಸಕ ಪ್ರೀತಂಗೌಡ ಇತಿಮಿತಿಯಲ್ಲಿ ಇರಬೇಕು. ಒಂದು ಸಾರಿ ಎಂಎಲ್ಎ ಆದ ತಕ್ಷಣ ದೇವರಲ್ಲ’’ ಎಂದು ಹೇಳಿದ್ದರು.
ಇದಕ್ಕೆ ಗರಂ ಆದ ಶಾಸಕ ಪ್ರೀತಂಗೌಡ ವಿ. ಸೋಮಣ್ಣ ವಿರುದ್ಧ ತಿರುಗಿಬಿದ್ದಿದ್ದಾರೆ.