ದೇಶಕ್ಕೆ ಸರಿಯಾದ ದಿಕ್ಕು ತೋರುವುದು ಗಾಂಧಿ ವಿಚಾರಧಾರೆಗಳು ಮಾತ್ರ: ತಮಿಳು ಸಿಎಂ ಸ್ಟ್ಯಾಲಿನ್
ದೇಶದಲ್ಲಿ ಜಾತಿ, ಮತ, ಪಂಥಗಳು ರಾರಾಜಿಸುತ್ತಿವೆ. ಇಂತಹ ಸಂದರ್ಭದಲ್ಲಿ ದೇಶವನ್ನು ಸಹಬಾಳ್ವೆಯತ್ತ ಕೊಂಡೊಯ್ಯಲು ದೇಶಕ್ಕೆ ಸರಿಯಾದ ಮಾರ್ಗವನ್ನು ತೋರುವುದು ಗಾಂಧಿ ವಿಚಾರಧಾರೆಗಳು ಮಾತ್ರ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟ್ಯಾಲಿನ್ ಹೇಳಿದ್ದಾರೆ.
ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದಿನ ಯುವಕರ ತಲೆಯಲ್ಲಿ ಜಾತಿ, ಮತ, ಪಂಥಗಳ ಹೆಸರಿನಲ್ಲಿ ವಿಷಬೀಜಗಳನ್ನು ಬಿತ್ತಲಾಗುತ್ತಿದೆ. ಇದನ್ನು ತೊಡೆದುಹಾಕುವ ನಿಟ್ಟಿನಲ್ಲಿ ನಾವು ಮಹಾತ್ಮಾ ಗಾಂಧೀಜಿ ಅವರ ವಿಚಾರಧಾರೆಗಳನ್ನು ಅವರ ತಲೆಯಲ್ಲಿ ಬಿತ್ತಬೇಕು ಎಂದು ಹೇಳಿದ್ದಾರೆ.
ಗಾಂಧಿ ತಮ್ಮ ಜೀವಿತಾವಧಿಯಲ್ಲಿ ತಮಿಳುನಾಡಿಗೆ 20 ಸಾರಿ ಭೇಟಿ ನೀಡಿದ್ದರು. ಅವರು ಒಂದು ಸಾರಿ ಮಧುರೈಗೆ ಭೇಟಿ ನೀಡಿದ್ದಾಗ ಅಲ್ಲಿನ ಬಟ್ಟೆ ಇಲ್ಲದ ಬಡವರನ್ನು ಕಂಡು ತಾವು ಕೂಡ ಸರಳತೆ ಅನುಸರಿಸಿದರು. ಅವರ ನೆನಪಿಗಾಗಿ ಮುಂಬರುವ ದಿನಗಳಲ್ಲಿ ಮಧುರೈನಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ವಸ್ತು ಸಂಗ್ರಾಹಲಯ ಸ್ಥಾಪಿಸಲು ಯೋಜಿಸಲಾಗಿದೆ’ ಎಂದು ಹೇಳಿದರು.
ಅಲ್ಲದೇ ಇದೇ ವೇಳೆ ಸ್ಟ್ಯಾಲಿನ್ ಅವರು, ‘ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿದ್ದ ಪಿಂಚಣಿಯನ್ನು ₹17,000 ದಿಂದ ₹18,000 ಕ್ಕೆ ಹೆಚ್ಚಿಸಿದ್ದೇವೆ. ಒಂದು ವೇಳೆ ಅವರು ಮೃತರಾದಲ್ಲಿ ಅವರ ಕುಟುಂಬಗಳಿಗೆ ನೀಡುತ್ತಿದ್ದ ಪಿಂಚಣಿಯನ್ನು ₹8,500 ರಿಂದ ₹9,000 ಕ್ಕೆ ಹೆಚ್ಚಿಸಲಾಗಿದೆ’ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ಆಗಸ್ಟ್ 15ರಂದು ಗೋವಾದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದಿಲ್ಲ; ಕಾರಣವೇನು ಗೊತ್ತೇ?