‘ಸಂಸದೆ ಸುಮಲತಾ ಸುತ್ತಾ ಗೂಂಡಾಗಳೇ ಇದ್ದಾರೆ’ – ರವೀಂದ್ರ ಶ್ರೀಕಂಠಯ್ಯ ಗಂಭೀರ ಆರೋಪ!
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸುತ್ತ ಮುತ್ತಾ ಗೂಂಡಾಗಳು, ಫ್ರಾಡ್ ಗಳೇ ಇದ್ದಾರೆ ಎಂದು ಮಂಡ್ಯದಲ್ಲಿ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ , “ಸಂಸದೆ ಸುಮಲತಾ ಸುತ್ತ ಮುತ್ತಾ ಗೂಂಡಾಗಳು, ಫ್ರಾಡ್ ಗಳೇ ಇದ್ದಾರೆ. ಹಣಕ್ಕಾಗಿ ಮಂಡ್ಯ ಜಿಲ್ಲೆಯ ಅಧಿಕಾರಿಗಳಿಗೆ ಕಿರುಕುಳ ಕೊಡುತ್ತಿದ್ದಾರೆ. ಸುಮಲತಾ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ಮೆಡಿಕಲ್ ಶೀಟ್ ಕೊಡಿಸುವುದಾಗಿ ಜನರಿಗೆ ವಂಚಿಸಿದ್ದಾನೆ. ಸುಮಲತಾ ಸುತ್ತ ಇರುವವರು ಅಧಿಕಾರಿಗಳಿಗೆ ಧಮ್ಕಿ ಕೊಡುತ್ತಿದ್ದಾರೆ. ಮನಸ್ಸೋಯಿಚ್ಚೆ ನಡೆಸಿಕೊಂಡು ಮಾನಸಿಕ ಒತ್ತಡ ಹೇರುತ್ತಿದ್ದಾರೆ. ಇದನ್ನು ನೋಡಿಕೊಂಡು ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ಮಂಡ್ಯವನ್ನು ಅವರಿಗೆ ಬರೆದು ಕೊಟ್ಟಿಲ್ಲ. ನಾವು ಜನ ಸೇವೆ ಮಾಡುತ್ತಿದ್ದೇವೆ. ಅವರಿಗೆ ನೋವಾದ್ರೆ ಸಹಿಸುವುದಿಲ್ಲ” ಎಂದಿದ್ದಾರೆ.
ಜೊತೆಗೆ ‘ ಸಂಸದೆ ಸುಮಲತಾ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ. ಆತನನ್ನು ಅರೆಸ್ಟ್ ಮಾಡ್ಬೇಕು. ಕಳೆದ 2 ತಿಂಗಳಿಂದ ಯಾರಿಗೆಲ್ಲಾ ಕರೆ ಮಾಡಿದ್ದಾನೆ. ಯಾರಿಗೆ ತೊಂದರೆ ಕೊಟ್ಟಿದ್ದಾನೆ ಬಯಲಾಗಬೇಕು. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಇದರ ವಿರುದ್ಧ ಕ್ರಮ ಆಗಬೇಕು’ ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, “ ಈ ರೀತಿಯ ಮಾತುಗಳು ಅವರಿಗೆ ಹೊಸದೇನು ಅಲ್ಲ. ಅಕ್ರಮ ಗಣಿಗಾರಿಕೆ ನಿಲ್ಲಿಸುತ್ತಿದ್ದಂತೆ ಅವರಿಗೆ ಸಮಸ್ಯೆ ಆಗುತ್ತಿದೆ. ಕೊರೊನಾ ಬಗ್ಗೆ ಯೋಚನೆ ಮಾಡುವುದನ್ನ ಬಿಟ್ಟು ಈ ರೀತಿ ಮಾತನಾಡಿಕೊಂಡು ಕುಳಿತಿದ್ದಾರೆ. ಅವರಿಗೆ ಮಾನಸಿಕ ತೊಂದರೆಯಾಗಿರಬೇಕು. ಅವರು ಚಿಕಿತ್ಸೆ ಗೊಳಗಾಗಬೇಕು” ಎಂದು ವಾಗ್ದಾಳಿ ಮಾಡಿದ್ದಾರೆ.
‘ಅಂಬರೀಶ್ ಹೇಗೆ ಆಡಳಿತ ಮಾಡಿಕೊಂಡು ಬಂದರು ನಾನೂ ಕೂಡ ಅದೇ ರೀತಿ ಆಡಳಿತ ಮಾಡಿಕೊಂಡು ಬರುತ್ತಿದ್ದೇನೆ. ಭ್ರಷ್ಟಾಚಾರಕ್ಕೆ ಆಡಳಿತ ಮಾಡುವುದರಲ್ಲಿ ಇವರು ಎತ್ತಿದ ಕೈ. ನಿನ್ನೆ 8 ಸಭೆ ಮಾಡಿಕೊಂಡು ಬಂದಿದ್ದೇ. ಒಂದು ಸಭೆಗೂ ಇವರು ಬಂದಿಲ್ಲ. 8ನೇ ಸಭೆಗೆ ಬಂದಿದ್ರು. ಅಕ್ರಮ ಗಣಿಗಾರಿಕೆ ಬಗ್ಗೆ ನಾನು ಮಾತನಾಡಿದ್ರೆ ಅವರಿಗೆ ಸಮಸ್ಯೆ ಆಗಿ ಹೀಗೆ ಮಾತನಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವವರ ಮಾತನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದೇ ಅವರಿಗೆ ಸಮಸ್ಯೆ ಆಗಿದೆ. ನಾವು ಇದನ್ನ ಜನ ಸೇವೆ ಅಂತ ಮಾಡುತ್ತಿದ್ದೇವೆ ಹೊರತು ಅವರ ರೀತಿ ಹಣಕ್ಕಾಗಿ ಮಾಡುತ್ತಿಲ್ಲ. ನಾನು ಕ್ರಿಮಿನಲ್ಸ್ ಗಳಿಗೆ ಹೆದರುವುದಿಲ್ಲ. ತಪ್ಪು ಕಂಡು ಬಂದಿದ್ದರೆ ದಾಖಲೆ ಸಮೇತ ದೂರು ಕೊಡಲಿ’ ಎಂದು ಸುಮಲತಾ ಸವಾಲು ಹಾಕಿದ್ದಾರೆ.