ತಮಿಳುನಾಡಿನಲ್ಲಿ ಡಿಎಂಕೆ ಜಯ : ನಾಲಿಗೆ ಕತ್ತರಿಸಿ ದೇವರಿಗೆ ಹರಕೆ ತೀರಿಸಿದ ಮಹಿಳೆ…!
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಜಯ ಸಾಧಿಸಿದರೆ ನಾಲಿಗೆ ನೀಡುವುದಾಗಿ ದೇವರಿಗೆ ಹರಕೆ ಹೊತ್ತಿದ್ದ ಮಹಿಳೆಯೊಬ್ಬಳು ನಾಲಿಗೆ ಕತ್ತರಿಸಿ ಹರಕೆ ತೀರಿಸಿದ ವಿಚಿತ್ರದ ಘಟನೆ ನಡೆದಿದೆ.
2021 ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಗೆಲುವು ಸಾಧಿಸಲು 32 ವರ್ಷದ ವನಿತಾ ದೇವರಿಗೆ ಹರಕೆ ಹೊತ್ತಿದ್ದರು. ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಡಿಎಂಕೆ ಮೈತ್ರಿಕೂಟ ಭಾರಿ ಮುನ್ನಡೆಯೊಂದಿಗೆ ಜಯ ಸಾಧಿಸಿದೆ. ಹರಕೆಯಂತೆ ವನಿತಾ ಇಂದು ಬೆಳಿಗ್ಗೆ ಮುತಲಮ್ಮನ್ ದೇವಸ್ಥಾನಕ್ಕೆ ನಾಲಿಗೆ ನೀಡಿದ್ದಾರೆ.
ಆದರೆ ಪೂಜಾ ಸ್ಥಳಗಳಲ್ಲಿ ಕೋವಿಡ್ ಸಂಬಂಧಿತ ನಿರ್ಬಂಧಗಳಿಂದಾಗಿ ದೇವಸ್ಥಾನದ ಒಳಗಡೆ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ ವನಿತಾ ಕತ್ತರಿಸಿದ ನಾಲಿಗೆಯನ್ನು ದೇವಾಲಯದ ದ್ವಾರಗಳಲ್ಲಿ ಬಿಟ್ಟು ಕುಸಿದು ಬಿದ್ದಿದ್ದಾಳೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಒಂದು ದಶಕದ ವಿರೋಧದ ನಂತರ, ಡಿಎಂಕೆ ತಮಿಳುನಾಡಿನಲ್ಲಿ ಪ್ರತಿಸ್ಪರ್ಧಿ ಎಐಎಡಿಎಂಕೆ ವಿರುದ್ಧ ಜಯ ಸಾಧಿಸಿದೆ. ಮೇ.6 ರಂದು ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಮುಖ್ಯಮಂತ್ರಿಯಾಗಿ ಸ್ಟಾಲಿನ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.