ಕುಂಭಮೇಳ ನಕಲಿ ಕೊರೊನಾ ಪರೀಕ್ಷಾ ಹಗರಣ: ಉತ್ತರಾಖಂಡದ ಇಬ್ಬರು ಅಧಿಕಾರಿಗಳ ಅಮಾನತು!
ಹರಿದ್ವಾರದಲ್ಲಿ ನಡೆದ ಕುಂಭಮೇಳದ ವೇಳೆ ನಕಲಿ ಕೊರೊನಾ ಪರೀಕ್ಷಾ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಉತ್ತರಾಖಂಡದಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಹರಿದ್ವಾರದ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ ಅರ್ಜುನ್ ಸಿಂಗ್ ಸೆಂಗಾರ್ ಮತ್ತು ಉಸ್ತುವಾರಿ ಅಧಿಕಾರಿ (ವೈದ್ಯಕೀಯ ಮತ್ತು ಆರೋಗ್ಯ) ಡಾ ಎನ್ ಕೆ ತ್ಯಾಗಿ ಅವರನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿಯವರ ಆದೇಶದ ಮೇರೆಗೆ ಗುರುವಾರ ರಾತ್ರಿ ಅಮಾನತುಗೊಳಿಸಲಾಗಿದೆ.
ನಕಲಿ ಪರೀಕ್ಷಾ ಹಗರಣದ ಕುರಿತು ತನಿಖೆ ನಡೆಸಲು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ರಚಿಸಿದ ತನಿಖಾ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕ್ರಮ ಕೈಕೊಳ್ಳಲಾಗಿದೆ ಎಂದು ಹೇಳಲಾಗಿದೆ.
“ಯಾವುದೇ ಹಂತದಲ್ಲಿ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ. ಹಗರಣಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಧಮಿ ಹೇಳಿದ್ದಾರೆ.
ಹರಿದ್ವಾರದಲ್ಲಿ ನಡೆದ ಕುಂಭಮೇಳದ ಸಮಯದಲ್ಲಿ ನಕಲಿ ಕ್ಷಿಪ್ರ ಕೊರೊನಾ ಪರೀಕ್ಷೆಗಳನ್ನು ನಡೆಸುವಲ್ಲಿ ಕಂಪನಿಗಳು ಕೈಜೋಡಿಸಿರುವುದನ್ನು ತನಿಖಾ ಸಮಿತಿಯು ಕಂಡುಕೊಂಡಿದೆ.
ಅಜಾಗರೂಕತೆ ಮತ್ತು ಸರ್ಕಾರಕ್ಕೆ ಹಣಕಾಸಿನ ನಷ್ಟವನ್ನು ಉಂಟುಮಾಡಿದ್ದಕ್ಕಾಗಿ ಸಮಿತಿಯು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು.
ಹರಿದ್ವಾರದ ಮುಖ್ಯ ಅಭಿವೃದ್ಧಿ ಅಧಿಕಾರಿಯ ನೇತೃತ್ವದ ತನಿಖಾ ಸಮಿತಿಯು ತನ್ನ ವರದಿಯನ್ನು ಆಗಸ್ಟ್ 16 ರಂದು ಸರ್ಕಾರಕ್ಕೆ ಸಲ್ಲಿಸಿತ್ತು.
ನಕಲಿ ಪರೀಕ್ಷಾ ಹಗರಣದಲ್ಲಿ ಭಾಗಿಯಾಗಿರುವ ಕಂಪನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹರಿದ್ವಾರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸೆಂಥಿಲ್ ಆವೊದೈ ಕೃಷ್ಣ.ರಾಜ್.ಎಸ್ ಅವರ ನೇತೃತ್ವದ ಎಸ್ಐಟಿ ತನಿಖೆ ಹೇಳಿದೆ.
ಇದನ್ನೂ ಓದಿ: ಪಂಜಾಬ್ ಮಾಜಿ ಸಚಿವ, ಅಕಾಲಿ ನಾಯಕ ಸೇವಾ ಸಿಂಗ್ ಸೇಖ್ವಾನ್ ಎಎಪಿಗೆ ಸೇರ್ಪಡೆ!