ಕೆಸರುಗದ್ದೆಯಂತಾದ ರಸ್ತೆಗಳು : ತೆಪ್ಪಗಿರುವ ಅಧಿಕಾರಿಗಳಿಗೆ ತೆಪ್ಪದಲ್ಲಿ ಸಾಗಿ ಆಂಜನಾಪುರ ಸ್ಥಳೀಯರಿಂದ ಎಚ್ಚರಿಕೆ..!
ಕೆಸರುಗದ್ದೆಯಂತಾದ ರಸ್ತೆಗಳಿಂದ ಬೇಸತ್ತ ಜನ ನೀರು ತುಂಬಿದ ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡಿ ಪ್ರತಿಭಟಿಸಿದ್ದಾರೆ.
ಬೆಂಗಳೂರಿನ ಆಂಜನಾಪುರ ರಸ್ತೆಗಳಲ್ಲಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದು ಮಳೆ ನೀರು ತುಂಬಿದ್ದರಿಂದ ಜನ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಕಳೆದ 12 ವರ್ಷದಿಂದ ಆಂಜನಾಪುರ ರಸ್ತೆಗಳು ರಸ್ತೆಗಳಾಗೇ ಇಲ್ಲ. ಗುಂಡಿಯಲ್ಲಿ ತುಂಬಿದ ನೀರಿನಲ್ಲಿ ತೆಪ್ಪದಲ್ಲಿ ಕುಳಿತು ಜನ ಆಕ್ರೋಶಗೊಂಡಿದ್ದಾರೆ. ಅಧಿಕಾರಿಗಳಿಗೆ ರಸ್ತೆ ದುರಸ್ಥೆ ಮಾಡಲು ಆಗ್ರಹಿಸಿದ್ದಾರೆ.
ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳನ್ನು ಈ ರೀತಿ ಇರೋದು ಕಾಣಬಹುದು. ಆದರೆ 12 ವರ್ಷದಿಂದ ಇಲ್ಲಿನ ಜನರು ರಸ್ತೆಗಾಗಿ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಬಂದರೆ ಸಾಕು ಎತ್ತೇಚ್ಚ ಮಳೆ ನೀರು ಗುಂಡಿ ಬಿದ್ದ ರಸ್ತೆಯಲ್ಲಿ ತುಂಬಿಕೊಳ್ಳುತ್ತದೆ. ರಸ್ತೆ ಗುಂಡಿ ಕಾಣದೆ ಚಲಿಸಿ ವಾಹನಗಳು ಅಪಘಾತಕ್ಕೀಡಾಗಿರೋದಿದೆ. ಆದರೂ ಬಿಡಿಎ ಬಿಬಿಎಂಪಿ ಅಧಿಕಾರಿಗಳು ಈಕಡೆ ತಲೆ ಹಾಕಿ ನೋಡಿಲ್ಲ. ಅಧಿಕಾರಿಗಳು ರಸ್ತೆ ಕಾಮಗಾರಿ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಜನ ಕೆಂಡ ಕಾರಿದರು. ನೀರು ತುಂಬಿದ ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡಿ, ತೆಪ್ಪದಲ್ಲಿ ಕುಳಿತು ಆಕ್ರೋಶ ಹೊರಹಾಕಿದರು.
ಈ ಬಗ್ಗೆ ಮಾತನಾಡಿದ ಸ್ಥಳೀಯರು, “ನಾವು ಕೊರೊನಾ ಮುಂಚಿತವಾಗಿಯೇ ಮಾಸ್ಕ್ ಹಾಕಲು ಪ್ರಾರಂಭಿಸಿದ್ದೇವೆ. ರಸ್ತೆ ಒಣಗಿದ್ದರೆ ಧೂಳು ಬಂದು ಇನ್ಫೆಕ್ಷನ್ ಆಗುತ್ತದೆ. ಮಳೆ ಬಂದ್ರೆ ನೀರು ತುಂಬಿ ವಾಸನೆ ಬರುತ್ತದೆ. ಹೀಗಾಗಿ ನಾವು ಕೊರೊನಾ ಬರುವುದಕ್ಕಿಂತಲೂ ಮುಂಚೆಯೇ ಮಾಸ್ಕ್ ಹಾಕಿಕೊಳ್ಳುತ್ತಿದ್ದೇವೆ. ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಓಟ ಹಾಕಿಸಿಕೊಳ್ಳುತ್ತಾರೆ. ಆದರೆ ನಮ್ಮ ಸಮಸ್ಯೆಗಳನ್ನು ಕೇಳಲು ಅವರು ಬರುವುದಿಲ್ಲ. ಸರ್ಕಾರ ನಮ್ಮ ಬೇಡಿಕೆಯನ್ನು ಬಗೆಹರಿಸುವುದಿಲ್ಲ ಅಂದ್ರೆ ನಾವೇ ಗುಂಡಿ ಮುಚ್ಚುತ್ತೇವೆ. ಆದರೆ ಚುನಾವಣೆಯಲ್ಲಿ ಮಾತ್ರ ಮತಚಲಾಯಿಸುವುದಿಲ್ಲ” ಎಂದು ಗರಂ ಆದರು.