ಯೋಗಿ ಸರ್ಕಾರಕ್ಕೆ ಸೆಡ್ಡು: ಮುಜಾಫರ್ನಗರದಲ್ಲಿ ಬೃಹತ್ ರೈತ ಮಹಾಪಂಚಾಯತ್!
ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳ ವಿರುದ್ದ ರೈತರ ಹೋರಾಟ 10ನೇ ತಿಂಗಳಿಗೆ ಕಾಲಿಟ್ಟಿದೆ. ಈ ನಡುವೆ ಎಲ್ಲೆಡೆ ರೈತ ಮಹಾಪಂಚಾಯತ್ಗಳು ನಡೆಯುತ್ತಿದ್ದು, ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ ನಿರ್ಬಂಧ, ಅಡ್ಡಿಗಳ ನಡುವೆ ಬೃಹತ್ ರೈತ ಮಹಾಪಂಚಾಯತ್ಅನ್ನು ರೈತರು ಮುಜಾಫರ್ನಗರದಲ್ಲಿ ನಡೆಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ನಡೆಉತ್ತಿರುವ ಕಿಸಾನ್ ಮಹಾಪಂಚಾಯತ್ಗೆ ಉತ್ತರ ಪ್ರದೇಶದ ಪೊಲೀಸರು ಮುಜಾಫರ್ನಗರದಲ್ಲಿ ಭಾರಿ ಭದ್ರತೆ ಹೆಚ್ಚಿಸಿದ್ದಾರೆ.
“ಮುಜಾಫರ್ನಗರದಲ್ಲಿ 8,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎರಡು ರಾಪಿಡ್ ಆಕ್ಷನ್ ಫೋರ್ಸ್ ಮತ್ತು 1,200 ಪೊಲೀಸರು ಸೇರಿದ್ದಾರೆ. ಡ್ರೋನ್ ಕ್ಯಾಮೆರಾಗಳನ್ನು ವೈಮಾನಿಕ ಕಣ್ಗಾವಲುಗಾಗಿ ಬಳಸಲಾಗುತ್ತಿದ್ದು, 200 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ” ಎಂದು ಮುಜಾಫರ್ ನಗರ ಎಸ್ಎಸ್ಪಿ ಅಭಿಷೇಕ್ ಯಾದವ್ ತಿಳಿಸಿದ್ದಾರೆ.
ಮಹಾಪಂಚಾಯತ್ಗೆ ಭಾರಿ ಸಂಖ್ಯೆಯಲ್ಲಿ ರೈತರು ಆಗಮಿಸುತ್ತಿದ್ದು, ಹೊರಗಿಂದ ಬರುವ ರೈತರಿಗಾಗಿ 20 ಸಭಾಂಗಣಗಳನ್ನು ಸಜ್ಜುಗೊಳಿಸಿದೆ. ಯಾವುದೇ ವೈದ್ಯಕೀಯ ತುರ್ತುಸ್ಥಿತಿಯನ್ನು ಎದುರಿಸಲು ಸುಮಾರು 100 ವೈದ್ಯಕೀಯ ಶಿಬಿರಗಳು, 50 ಆಂಬ್ಯುಲೆನ್ಸ್ಗಳು ಮತ್ತು ತಾತ್ಕಾಲಿಕ ಆಸ್ಪತ್ರೆಯನ್ನು ಸಹ ಸ್ಥಾಪಿಸಲಾಗಿದೆ.
ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಕಾಂಗ್ರೆಸ್ ಭರ್ಜರಿ ಜಯ; ಎರಡನೇ ಸ್ಥಾನಕ್ಕೆ ಕುಸಿದ ಬಿಜೆಪಿ!
ಮುಜಾಫರ್ನಗರದ ಸರ್ಕಾರಿ ಇಂಟರ್ ಕಾಲೇಜು ಮೈದಾನದಿಂದ 4 ಕಿಲೋಮೀಟರ್ ವ್ಯಾಪ್ತಿಯಲ್ಲಿ 20 ಕ್ಕೂ ಹೆಚ್ಚು ಎಲ್ಇಡಿ ಪರದೆಗಳು ಮತ್ತು ಮೈಕ್ರೊಫೋನ್ಗಳನ್ನು ಅಳವಡಿಸಲಾಗಿದೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಸಾನ್ ಮಹಾಪಂಚಾಯತ್ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳವು ಕಿಸಾನ್ ಮಹಾಪಂಚಾಯತ್ಗೆ ಬೆಂಬಲ ಘೋಷಿಸಿದೆ.
Rakesh Tikait just arrived at Kisan Mahapanchayat.#मुजफ्फरनगर_किसान_महापंचायत pic.twitter.com/naT98n1xkX
— Kisan Ekta Morcha (@Kisanektamorcha) September 5, 2021
ಹರಿಯಾಣದ ರೈತರೊಬ್ಬರು, “ನಮ್ಮ ಪ್ರಧಾನಿಗೆ ರೈತರ ಬಗ್ಗೆ ಗೌರವವಿಲ್ಲ. ಚಳಿಗಾಲದಲ್ಲಿ ರೈತರನ್ನು ರಸ್ತೆಯಲ್ಲಿ ಕೂರುವಂತೆ ಮಾಡಿದ ಮೋದಿ ಜೀ ಯಾವ ರೀತಿಯ ರಾಜ..?” ಎಂದು ಪ್ರಶ್ನಿಸಿದ್ದಾರೆ.
“ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಮಹಾಪಂಚಾಯತ್ನಲ್ಲಿ ಜಮಾಯಿಸಿದ್ದೇವೆ. ಈ ಮೂರು ಕರಾಳ ಕಾನೂನುಗಳನ್ನು ಹಿಂಪಡೆಯುವಂತೆ ಪ್ರಧಾನ ಮಂತ್ರಿಗೆ ವಿನಂತಿಸುತ್ತೇವೆ” ಎಂದು ರೈತ ಮಹಿಳೆಯೊಬ್ಬರು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಉತ್ತರಪ್ರದೇಶಕ್ಕೆ ಈ ಕಿಸಾನ್ ಮಹಾಪಂಚಾಯತ್ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಈ ಹಿಂದೆ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ವ್ಯಂಗ್ಯಚಿತ್ರವನ್ನು ಪೋಸ್ಟ್ ಮಾಡಿ ಖಂಡನೆಗೆ ಒಳಗಾಗಿತ್ತು.
ಇದನ್ನೂ ಓದಿ: ರೈತ ಮಹಿಳೆಗೆ ಪರಿಹಾರ ವಿಳಂಬ: ಆಂಧ್ರದ ಐವರು ಐಎಎಸ್ ಅಧಿಕಾರಿಗಳಿಗೆ ಜೈಲು ಶಿಕ್ಷೆ!