ಕಾಂಗ್ರೆಸ್ಗೆ ‘ಕೈ’ ಕೊಟ್ಟು ಜೆಡಿಎಸ್ ಸೇರಲಿದ್ದಾರೆ ಮಾಜಿ ಸಚಿವ ಸಿಎಂ ಇಬ್ರಾಹಿಂ?
ರಾಜ್ಯದಲ್ಲಿ ಪಕ್ಷಾಂತರ ಭರಾಟೆ ಜೋರಾಗಿದೆ. ಆಪರೇಷನ್ ಕಮಲ ನಡೆಸಿ ಬಿಜೆಪಿ ಅಧಿಕಾರಕ್ಕೇರಿದ ನಂತರ, ಇದೀಗ ಮತ್ತೆ ಪಕ್ಷಾಂತರದ ಸದ್ದು ಸುದ್ದಿಯಾಗುತ್ತಿದೆ. ಹಲವು ಜೆಡಿಎಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಅಥವಾ ಕಾಂಗ್ರೆಸ್ ಕಡೆಗೆ ವಲಸೆಗೆ ಸಿದ್ದರಾಗಿದ್ದಾರೆ. ಈ ನಡುವೆ ಕಾಂಗ್ರೆಸ್ ಎಂಎಲ್ಸಿ, ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟವರ್ತಿಯೂ ಆಗಿರುವ ಸಿಎಂ ಇಬ್ರಾಹಿಂ ಅವರು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಮಾತುಕತೆ ನಡೆಸಿದ್ದು, ಅವರು ಜೆಡಿಎಸ್ ಸೇರುವುದು ಖಚಿತ ಎಂದು ಹೇಳಲಾಗಿದೆ.
ಹೆಚ್ಡಿ ಕುಮಾರಸ್ವಾಮಿ ಅವರು ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಜೆಡಿಎಸ್ಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇತರ ಪಕ್ಷ ತೊರೆದು ಜೆಡಿಎಸ್ ಸೇರುವವರಲ್ಲಿ ಸಿಎಂ ಇಬ್ರಾಹಿಂ ಮೊದಲಿಗರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನು ಓದಿ: ಮಲ್ಪೆ ಬೀಚ್ನಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಶಿವಮೊಗ್ಗದ ಮೂವರು ವಿದ್ಯಾರ್ಥಿಗಳ ರಕ್ಷಣೆ!
ನವೆಂಬರ್ ಬಳಿಕ ವಿಧಾನ ಪರಿಷತ್ ಸದಸ್ಯತ್ವಕ್ಕೆ ಇಬ್ರಾಹಿಂ ರಾಜೀನಾಮೆ ನೀಡಲಿದ್ದು, ನಂತರ ಕಾಂಗ್ರೆಸ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.
ಈ ಹಿಂದೆ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ಸೇರಲಿದ್ದಾರೆ ಎಂಬ ಬಗ್ಗೆ ಮಾಹಿತಿ ಅರಿತಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಬ್ರಾಹಿಂ ಅವರನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದ್ದರು. ಆದರೆ, ಇದೀಗ ಅವರು ಜೆಡಿಎಸ್ ಸೇರುವ ಮಾತುಕತೆ ಮತ್ತೆ ಮುನ್ನಲೆಗೆ ಬಂದಿದೆ.
ಈಗಾಗಲೇ ಜೆಡಿಎಸ್ ಶಾಸಕ, ಮಾಜಿ ಸಚಿವ ಜಿಟಿ ದೇವೇಗೌಡ ಮತ್ತು ಅವರ ಮಗ ಜೆಡಿಎಸ್ ತೊರೆದು ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರಲಿದ್ದಾರೆ. ಅಲ್ಲದೆ, ಇನ್ನೂ ಕೆಲವು ಜೆಡಿಎಸ್ ಶಾಸಕರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಭಾರತದ ಕೃಷಿ ಕ್ಷೇತ್ರದ ಮೇಲೆ ಅಮೆಜಾನ್, ಮೈಕ್ರೋಸಾಫ್ಟ್ ಆಕ್ರಮಣ; ಅಮೆರಿಕಾದಲ್ಲಾಗಿದ್ದು, ಭಾರತದಲ್ಲಾಗುವುದಿಲ್ಲವೇ?