ಭಾರತ್ ಬಂದ್ ಯಶಸ್ವಿ : ರೈತರಿಗೆ, ಕಾರ್ಮಿಕರಿಗೆ ರಾಕೇಶ್ ಟಿಕಾಯತ್ ಧನ್ಯವಾದ!
ಭಾರತ್ ಬಂದ್ ಯಶಸ್ವಿಗೊಳಿಸಿದ ರೈತರಿಗೆ, ಕಾರ್ಮಿಕರಿಗೆ ರೈತ ಮುಖಂಡ ರಾಕೇಶ್ ಟಿಕಾಯತ್ ಧನ್ಯವಾದ ತಿಳಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (SKM) 40 ಕ್ಕೂ ಹೆಚ್ಚು ರೈತ ಸಂಘಗಳ ಸಂಸ್ಥೆಯಾಗಿದ್ದು, ಕೇಂದ್ರದ ಮೂರು ಕೃಷಿ ಕಾನೂನುಗಳ ಜಾರಿ ವಿರೋಧಿಸಿ ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಸೋಮವಾರ ‘ಭಾರತ್ ಬಂದ್’ ಗೆ ಕರೆ ನೀಡಿದೆ. ಬಂದ್ ಕರೆಗೆ ಕಾಂಗ್ರೆಸ್, ಬಿಎಸ್ಪಿ, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ತೆಲುಗು ದೇಶಂ ಪಕ್ಷ, ಎಡ ಪಕ್ಷಗಳು ಮತ್ತು ಸ್ವರಾಜ್ ಇಂಡಿಯಾ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಬೆಂಬಲಿಸಿವೆ.
SKM ಭಾನುವಾರ ಬಂದ್ ಸಮಯದಲ್ಲಿ ಸಂಪೂರ್ಣ ಶಾಂತಿಗಾಗಿ ಮನವಿ ಮಾಡಿ ಎಲ್ಲಾ ಭಾರತೀಯರು ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿತ್ತು. ಸೋಮವಾರದ ತುರ್ತು ಸೇವೆಗಳನ್ನು ಹೊರತುಪಡಿಸಿ, ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಸೇರಿದಂತೆ ರೈತ ಸಂಘಗಳು ತಮ್ಮ ಬೆಂಬಲಿಗರೊಂದಿಗೆ ಭಾರತ್ ಬಂದ್ ಯಶಸ್ವಿಗೊಳಿಸಿದ್ದಾರೆ.
ಗಾಜಿಪುರ ಗಡಿಯಲ್ಲಿ ಮಾತನಾಡಿರುವ ರೈತಮುಖಂಡ ರಾಕೇಶ್ ಟಿಕಾಯತ್, ಕೃಷಿ ತಿದ್ಧುಪಡಿ ಕಾಯ್ದೆಯನ್ನ ಸರ್ಕಾರ ಹಿಂಪಡೆಯಲೇಬೇಕು. ಕಾಯ್ದೆ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಕೇಂಧ್ರ ಸರ್ಕಾರ ಮಾತುಕತೆಗೆ ಕರೆದರೆ ನಾವು ಸಿದ್ದರಿದ್ದೇವೆ ಎಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಹಾಗೆಯೇ ಭಾರತ್ ಬಂದ್ ಗೆ ಬೆಂಬಲಿಸಿರುವ ವಿಪಕ್ಷಗಳಿಗೆ ರೈತರಿಗೆ, ಕಾರ್ಮಿಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಭಾರತ್ ಬಂದ್ ಬಿಸಿ ರಾಷ್ಟ್ರರಾಜಧಾನಿ ನವದೆಹಲಿಗೆ ತಟ್ಟಿದ್ದು, ದೆಹಲಿ ಪ್ರವೇಶಿಸುವ ಗಡಿಗಳನ್ನ ಬಂದ್ ಮಾಡಲಾಗಿದ್ದು ವಾಹನಗಳು ಸಾಲುಗಟ್ಟಿ ನಿಂತಿವೆ ಎನ್ನಲಾಗಿದೆ.