ಲಖಿಂಪುರ್ ಖೇರಿ ಹಿಂಸಾಚಾರ : ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರನ ವಿರುದ್ಧ ಎಫ್ಐಆರ್!
ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿನ ಹಿಂಚಾರದಲ್ಲಿ 4 ಜನ ರೈತರು ಸೇರಿ 8 ಮಂದಿ ಮೃತಪಟ್ಟಿದ್ದಾರೆ. ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು ತಮ್ಮ ಪುತ್ರನ ವಿರುದ್ಧ ಕೇಳಿಬಂದಿರುವ ಆರೋಪವನ್ನು ಅಲ್ಲಗಳೆದಿದ್ದಾರೆ.
ಆದರೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕಾರು ಹರಿಸಿದ ಗಂಭೀರ ಆರೋಪ ರೈತ ಸಂಘಟನೆಗಳು ಮಾಡಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೂಡಲೆ ಅವರನ್ನು ಬಂಧಿಸುವಂತೆ ಆಗ್ರಹಿಸಿ ಇಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಎಫ್ಐಆರ್ನಲ್ಲಿ ಪೊಲೀಸರು ಸಚಿವರ ಪುತ್ರನ ಜೊತೆ ಹಲವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ನಿನ್ನೆ ನಡೆದ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು 8 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಇತ್ತೀಚೆಗೆ ಸಚಿವರು ಮಾಡಿರುವ ಭಾಷಣದಿಂದ ಕೆರಳಿರುವ ರೈತರು, ಇಬ್ಬರು ಸಚಿವರಿಗೆ ತಡೆಯೊಡ್ಡಲು ರಸ್ತೆಮಾರ್ಗದಲ್ಲಿ ಸೇರಿದ್ದರು. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರ ಬಗ್ಗೆ ಕಳೆದ ತಿಂಗಳು ಮಾತನಾಡಿದ್ದ ಸಚಿವ ಮಿಶ್ರಾ, ‘ಅದು 10-15 ಜನರ ಪ್ರತಿಭಟನೆ. ಅವರನ್ನು ನಿಯಂತ್ರಿಸಲು 2 ನಿಮಿಷ ಸಾಕು’ ಎಂದಿದ್ದರು.