ವಾಜಪೇಯಿ ಭಾಷಣದ ವಿಡಿಯೋ ಹಂಚಿಕೊಂಡು ಬಿಜೆಪಿಗೆ ತಿರುಗೇಟು ನೀಡಿದ ವರುಣ್ ಗಾಂಧಿ
ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ನಡೆದ ಹಿಂಸಾಚಾರದ ಬಳಿಕ ಬಿಜೆಪಿ ಯುವ ನಾಯಕ ವರುಣ್ ಗಾಂಧಿ, ರೈತರ ಪರವಾಗಿ ಧ್ವನಿ ಎತ್ತಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
1980ರಲ್ಲಿ ರೈತರ ಪರವಾಗಿ ಮಾತನಾಡಿದ್ದ ವಾಜಪೇಯಿ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ವಿರುದ್ಧ ರೈತರನ್ನು ಕೊಲ್ಲಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅವರ ಮಾತಿನ ವಿಡಿಯೋ ತುಣುಕನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ವರುಣ್ ಗಾಂಧಿ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ವಿಡಿಯೋವನ್ನು ಟ್ವೀಟ್ ಮಾಡಿರುವ ಅವರು, ದೊಡ್ಡ ಹೃದಯದ ನಾಯಕನಿಂದ ಬುದ್ಧಿವಂತಿಕೆಯ ಮಾತುಗಳು ಎಂದು ವಿಡಿಯೋ ಹಂಚಿಕೊಂಡಿದ್ದಾರೆ.
Wise words from a big-hearted leader… pic.twitter.com/xlRtznjFAx
— Varun Gandhi (@varungandhi80) October 14, 2021
ವರುಣ್ ಗಾಂಧಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಸರಕಾರ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡು ರೈತರನ್ನು ದಮನ ಮಾಡಿದರೆ, ನಾವು ರೈತರೊಂದಿಗೆ ಹೋರಾಟಕ್ಕೆ ಸೇರಲು ಹಿಂಜರಿಯುವುದಿಲ್ಲ ಎಂದು ವಾಜಪೇಯಿ ಹೇಳಿದ್ದಾರೆ.
ಲಖೀಂಪುರ ಖೇರಿಯಲ್ಲಿ ಹಿಂಸಾಚಾರ ಘಟನೆಯ ವಿಚಾರದಲ್ಲಿ ಆರೋಪಿಗಳ ವಿರುದ್ಧ ಧ್ವನಿ ಎತ್ತಿದ್ದ ಪಿಲಿಭಿತ್ ಕ್ಷೇತ್ರದ ಸಂಸದರಾಗಿರುವ ವರುಣ್ ಗಾಂಧಿ ಅವರನ್ನು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿತ್ತು.
ಲಖೀಂಪುರ ಹಿಂಸಾಚಾರವನ್ನು ಹಿಂದೂ ಮತ್ತು ಸಿಖ್ ಘರ್ಷಣೆಯನ್ನಾಗಿ ಪರಿವರ್ತಿಸಲು ಸಂಚು ಹೂಡಲಾಗಿತ್ತು ಎಂದು ವರುಣ್ ಗಾಂಧಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ತಮಿಳುನಾಡು ಚುನಾವಣೆ: ಕೇವಲ ಒಂದು ಮತ ಪಡೆದ ಅಭ್ಯರ್ಥಿ; ‘ಬಿಜೆಪಿ ಸಿಂಗಲ್ ಓಟ್ ಪಾರ್ಟಿ’ ಎಂದು ಟ್ರೋಲ್!