ಡೆತ್ನೋಟ್ ಬರೆಯುವಂತೆ ಒತ್ತಾಯಿಸಿ, ಮಹಿಳೆಯ ಕತ್ತು ಹಿಸುಕಿ ಕೊಲೆ; ಆರೋಪಿ ಬಂಧನ
ಮಹಿಳೆಯೊಬ್ಬರಿಗೆ ಆತ್ಮಹತ್ಯೆ ನೋಟ್ ಬರೆಯುವಂತೆ ಒತ್ತಾಯಿಸಿ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರ ತಾಣೆಯಲ್ಲಿ ನಡೆದಿದೆ.
ಆರೋಪಿ ಮುಂಬೈನ ಸಮಧಾನ್ ಶ್ರೀಮಂತ್ ಲೆಂಡ್ವೆ ಎಂಬಾತ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಗೆ ಆತ್ಮಹತ್ಯೆ ಟಿಪ್ಪಣಿ ಬರೆಯುವಂತೆ ಒತ್ತಾಯಿಸಿದ್ದಾನೆ. ನಂತರ, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವಿ ಮುಂಬೈನ ಘನ್ಸೋಲಿಯಲ್ಲಿ ಮನೆಯಲ್ಲಿ 36 ವರ್ಷದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಅಕ್ಟೋಬರ್ 21 ರಂದು ಪತ್ತೆಯಾಗಿದ್ದರು. ಸ್ಥಳದಲ್ಲಿ ಆತ್ಮಹತ್ಯೆ ಪತ್ರ ದೊರೆತಿತ್ತು ಎಂದು ಅವರು ತಿಳಿಸಿದ್ದಾರೆ.
ಕೊಲೆಯಾದ ಮಹಿಳೆಯ ಪತಿ ಮನೆ ಖರೀದಿಸುವುದಕ್ಕಾಗಿ ಲೆಂಡ್ವೆಯಿಂದ 6.5 ಲಕ್ಷ ರೂ ಸಾಲ ಪಡೆದಿದ್ದರು. ಆದರೆ, ಹಣದ ಸಮಸ್ಯೆಯಿಂದ ಸಾಲದ ಹಣವನ್ನು ಮರುಪಾವತಿಸಿರಲಿಲ್ಲ ಎಂದು ತನಿಖೆ ವೇಳೆ ಗೊತ್ತಾಗಿರುವುದಾಗಿ ಸಹಾಯಕ ಪೊಲೀಸ್ ಆಯುಕ್ತ ವಿನಾಯಕ್ ವಸ್ತ್ ತಿಳಿಸಿದ್ಧಾರೆ.
ಘಟನೆಯ ದಿನ ಮಹಿಳೆಯ ನಿವಾಸಕ್ಕೆ ಬಂದಿದ್ದ ಲೆಂಡ್ವೆ ಸಾಲದ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದ್ದಾನೆ. ನಂತರ, ಆತ ಮಹಿಳೆಯಿಂದ ಆತ್ಮಹತ್ಯೆ ಪತ್ರ ಬರೆಸಿ, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ, ಆಕೆಯ ಮೃತದೇಹವನ್ನು ಸೀರಿಯಿಂದ ಸೀಲಿಂಗ್ ಫ್ಯಾನ್ಗೆ ನೇತು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಅ. 28 ರಂದು ಬಂಧಿಸಲಾಗಿದೆ. ಆತನ ವಿರುದ್ದ ಐಪಿಸಿ ಸೆಕ್ಷನ್ 302 (ಕೊಲೆ) ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಓಟಿಗಾಗಿ ನೋಟು: ಹುಜೂರಾಬಾದ್ ಉಪಚುನಾವಣೆ ರದ್ದುಗೊಳಿಸಲು ಕಾಂಗ್ರೆಸ್ ಆಗ್ರಹ!