ಚಿತ್ರಮಂದಿರದ ಅಗ್ನಿ ದುರಂತದಲ್ಲಿ 59 ಜನರು ಸಾವು ಪ್ರಕರಣ: ಅಪರಾಧಿಗಳಿಗೆ 7 ವರ್ಷ ಜೈಲು; ತಲಾ 2.25 ಕೋಟಿ ದಂಡ!
1997ರಲ್ಲಿ ದೆಹಲಿಯ ಉಪಹಾರ್ ಥಿಯೇಟರ್ನಲ್ಲಿ ಅಗ್ನಿ ದುರಂತ ಸಂಭವಿಸಿ, 59 ಜನರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ತೀರ್ಪು ನೀಡಿದೆ.
1997ರಲ್ಲಿ ಬಿಡುಗಡೆಯಾಗಿದ್ದ ಬಾರ್ಡರ್ ಸಿನಿಮಾ ಪ್ರದರ್ಶನದ ವೇಳೆ ಉಪಹಾರ್ ಥಿಯೇಟರ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ 59 ಜನರು ಸಾವನ್ನಪ್ಪಿದ್ದರು ಮತ್ತು 100 ಜನರು ಗಾಯಗೊಂಡಿದ್ದರು. ಪ್ರಕರಣದಲ್ಲಿ ಸಾಕ್ಷ್ಯವನ್ನು ತಿರುಚಿದ್ದಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಕೋರ್ಟ್, ಇಬ್ಬರಿಗೂ ತಲಾ 2.25 ಕೋಟಿ ರೂ ದಂಡ ವಿಧಿಸಿದೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಅವರು ತಮ್ಮ 15 ಪುಟಗಳ ಆದೇಶದಲ್ಲಿ ಅವರು ಶಿಕ್ಷೆಗೆ ಅರ್ಹರು ಎಂದು ಹೇಳಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 201 (ಸಾಕ್ಷ್ಯಗಳನ್ನು ಹಾಳುಮಾಡುವುದು), 409 (ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 120 ಬಿ (ಅಪರಾಧದ ಪಿತೂರಿ) ಅಡಿಯಲ್ಲಿ ಅಪರಾಧಿಗಳು ಎಂದು ಘೋಷಿಸಿದೆ.
ಅಲ್ಲದೆ, ಪ್ರಕರಣದಲ್ಲಿ ಇತರ ಅರೋಪಿಗಳಾದ ನ್ಯಾಯಾಲಯದ ಮಾಜಿ ಸಿಬ್ಬಂದಿ ಸೇರಿದಂತೆ ದಿನೇಶ್ ಚಂದ್ರ ಶರ್ಮಾ, ಪ್ರೇಮ್ ಪ್ರಕಾಶ್ ಬಾತ್ರಾ ಮತ್ತು ಅನೂಪ್ ಸಿಂಗ್ಗೆ ತಲಾ 3 ಲಕ್ಷ ರೂ ದಂಡ ವಿಧಿಸಲಾಗಿದೆ.
ಇದನ್ನೂ ಓದಿ: ಬ್ರಾಹ್ಮಣ ಮತ್ತು ಬನಿಯಾಗಳು ನನ್ನ ಕಿಸೆಯಲ್ಲಿದ್ದಾರೆ: ಬಿಜೆಪಿ ನಾಯಕನ ಹೇಳಿಕೆಗೆ ಆಕ್ರೋಶ