ಶಾಲೆಗೆ ತೆರಳಿದ್ದ ಬಾಲಕಿ ನಿವೃತ್ತ ಶಿಕ್ಷಕರ ತೋಟದಲ್ಲಿ ಶವವಾಗಿ ಪತ್ತೆ; ಕೊಲೆ ಶಂಕೆ
ಶಾಲೆಗೆಂದು ತೆರಳಿದ್ದ ಬಾಲಕಿ ನಿವೃತ್ತ ಮುಖ್ಯ ಶಿಕ್ಷಕರೊಬ್ಬರ ತೋಟದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಮೃತ ಬಾಲಕಿಯನ್ನು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಟ್ಟಮೇಗಲಪಾಳ್ಯದ ಲಕ್ಷ್ಮೀ ಎಂದು ಗುರುತಿಸಲಾಗಿದೆ. ಬಾಲಕಿ ಸಾತನೂರು ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು ಎಂದು ಆಕೆಯ ತಾಯಿ ಯಶೋದಮ್ಮ ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ಮನೆಯಿಂದ ಶಾಲೆಗೆ ಹೋದ ಬಾಲಕಿ ಮನೆಗೆ ವಾಪಸಾಗಿರಲಿಲ್ಲ. ಮಗಳಿಗಾಗಿ ಗ್ರಾಮದಲ್ಲಿ ಹುಡುಕಿದರೂ ಆಕೆ ಪತ್ತೆಯಾಗಲಿಲ್ಲ. ಬಳಿಕ ಮಾಗಡಿ ಠಾಣೆಗೆ ಯಶೋದಮ್ಮ ದೂರು ನೀಡಿದ್ದಾರೆ.
ಈ ಬಳಿಕ ಪೊಲೀಸರು ಬಾಲಕಿಗಾಗಿ ಹುಡುಕಾಡ ಆರಂಭಿಸಿದ್ದಾರೆ.
ಮಧ್ಯಾಹ್ನ 3 ಗಂಟೆ ಸಮಯದಲ್ಲಿ ದೊಣಕುಪ್ಪೆ ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ಗಂಗರಾಯಿ ಎಂಬುವವರ ತೋಟದ ಬಾವಿಯಲ್ಲಿ ಬಾಲಕಿಯ ಮೃತ ದೇಹವನ್ನು ಪತ್ತೆಯಾಗಿದೆ. ಇದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ನಾಗೇಶ್ ಎಂಬ ಯುವಕನ ಮೇಲೆ ಬಾಲಕಿಯ ತಾಯಿ ಯಶೋದಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಯ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನಾಗೇಶ್ ಎಂಬಾತ ತನ್ನ ಮಗಳಿಗೆ ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ, ಆಕೆಗೆ ಪ್ರೀತಿ ಮಾಡುವಂತೆ ಹಿಂಸೆ ಕೊಟ್ಟು ಆಕೆಯನ್ನು ಬಾವಿಗೆ ತಳ್ಳಿರಬಹುದು ಎಂದು ಯಶೋದಮ್ಮ ಅನುಮಾನ ವ್ಯಕ್ತಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ: 13 ಜಿಲ್ಲೆಗಲ್ಲಿ ಯೆಲ್ಲೋ ಅಲರ್ಟ್!