ಹಾಲು ಕೊಡುತ್ತಿಲ್ಲ ಸಾಕಿದ ಎಮ್ಮೆ; ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ರೈತ!
ತಾನು ಸಾಕಿರುವ ಎಮ್ಮೆ ದಿನಪೂರ್ತಿ ಬೂಸ ತಿಂದರೂ ಹಾಲು ಕೊಡುತ್ತಿಲ್ಲ. ಹಾಲು ಕರೆಯಲು ಹೋದರೆ ನಮ್ಮನೇ ತಿವಿಯಲು ಬರುತ್ತಿದೆ ಎಂದು ರೈತರೊಬ್ಬರು ಎಮ್ಮೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನೀಡಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.
ಭಿಂಡ್ ಜಿಲ್ಲೆಯ ನಯಗಾಂವ್ ಗ್ರಾಮದ ರೈತ ಬಾಬುಲಾಲ್ ಜಾಟವ್ ಅವರ ಎಮ್ಮೆ ಕೆಲ ದಿನಗಳಿಂದ ಹಾಲು ನೀಡುವುದನ್ನು ನಿಲ್ಲಿಸಿತ್ತು. ಇದರಿಂದ ಬೇಸರಗೊಂಡ ರೈತ, ಎಮ್ಮೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ತೆರಳಿದ್ದಾರೆ. ತಮ್ಮ ಎಮ್ಮೆ ಹಾಲು ನೀಡಲು ನಿರಾಕರಿಸುತ್ತಿದೆ. ಅದು ಯಾವುದೋ ವಾಮಾಚಾರದ ಪ್ರಭಾವದಲ್ಲಿದೆ ಎಂದು ಸಂಶಯವಿದೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
“ಕಳೆದ ಕೆಲವು ದಿನಗಳಿಂದ ತನ್ನ ಎಮ್ಮೆ ಹಾಲು ನೀಡುತ್ತಿಲ್ಲ ಎಂದು ನಯಗಾಂವ್ ಗ್ರಾಮಸ್ಥ ಬಾಬುಲಾಲ್ ಜಾಟವ್ (45) ಶನಿವಾರ ನಯಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಶಾ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗೋ ಮೂತ್ರ, ಸಗಣಿಯಿಂದ ದೇಶದ ಆರ್ಥಿಕತೆಯನ್ನು ಬಲಪಡಿಸಬಹುದು: ಮಧ್ಯಪ್ರದೇಶ ಸಿಎಂ
ಕೆಲವು ಗ್ರಾಮಸ್ಥರು ತಮ್ಮ ಪ್ರಾಣಿಗೆ ವಾಮಾಚಾರ ಮಾಡಿಸಿದ್ದಾರೆ. ಹೀಗಾಗಿ ಅದು ವಾಮಾಚಾರದ ಪ್ರಭಾವಕ್ಕೆ ಒಳಗಾಗಿದೆ ಎಂದು ದೂರಿದ್ದಾರೆ. ಅರ್ಜಿ ಸಲ್ಲಿಸಿದ ಸುಮಾರು ನಾಲ್ಕು ಗಂಟೆಗಳ ನಂತರ ರೈತ ಮತ್ತೆ ತನ್ನ ಎಮ್ಮೆಯೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ಮತ್ತೆ ಪೊಲೀಸರ ಸಹಾಯ ಕೇಳಿದ್ದಾನೆ ಎಂದು ಹೇಳಿದ್ದಾರೆ.
“ಯುವ ರೈತ ಮಾನಸಿಕ ಅಸ್ವಸ್ಥನಾಗಿರಲಿಲ್ಲ, ಆದರೆ ತುಂಬಾ ಮುಗ್ಧರಾಗಿದ್ದರು. ಇತ್ತೀಚೆಗಷ್ಟೇ ಎಮ್ಮೆ ಖರೀದಿಸಿದ್ದರು. ಆದರೆ ಹಾಲು ಕೊಡದಿದ್ದಕ್ಕೆ ಗ್ರಾಮದಲ್ಲಿ ಯಾರೋ ಪೊಲೀಸರ ಸಹಾಯ ಪಡೆಯುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಸಹಾಯದ ನಿರೀಕ್ಷೆಯಲ್ಲಿ ಪೊಲೀಸರ ಬಳಿ ಬಂದಿದ್ದಾರೆ” ಎಂದು ಅರವಿಂದ್ ಶಾ ವಿವರಿಸಿದ್ದಾರೆ.
“ರೈತರಿಗೆ ಕೆಲವು ಪಶುವೈದ್ಯರ ಸಲಹೆಯೊಂದಿಗೆ ಸಹಾಯ ಮಾಡಲು ನಾನು ಪೊಲೀಸ್ ಠಾಣೆಯ ಉಸ್ತುವಾರಿಗೆ ಹೇಳಿದ್ದೆ. ಭಾನುವಾರ ಬೆಳಗ್ಗೆ ಎಮ್ಮೆ ಹಾಲು ನೀಡಿದ್ದು, ಪೊಲೀಸರಿಗೆ ಕೃತಜ್ಞತೆ ಸಲ್ಲಿಸಲು ಇಂದು ಮತ್ತೆ ಪೊಲೀಸ್ ಠಾಣೆಗೆ ಆಗಮಿಸಿದ್ದರು” ಎಂದು ಹೇಳಿದ್ದಾರೆ.
ಇದನ್ನೂ ಓದಿ: IRCTC ರೈಲ್ವೇ ಟಿಕೆಟ್ ಬುಕ್ ಮಾಡಲು ಹೊಸ ನಿಯಮಗಳು ಜಾರಿ; ಮಾಹಿತಿ ಇಲ್ಲಿದೆ