ಕ್ಷುಲ್ಲಕ ಕಾರಣಕ್ಕೆ ಆದಿವಾಸಿ ಯುವಕನಿಗೆ ಗುಂಡೇಟು: ಅರಣ್ಯ ಸಿಬ್ಬಂದಿ ವಿರುದ್ದ ಭುಗಿಲೆದ್ದ ಆಕ್ರೋಶ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಬಳಿಯ ರಾಣಿಗೇಟ್ ಜೇನುಕುರುಬರ ಹಾಡಿಯ ಬಸವ ಎಂಬ ವ್ಯಕ್ತಿಯನ್ನು ಅಲ್ಲಿನ ಅರಣ್ಯ ಇಲಾಖೆಯ ವಾಚ್‌ಮನ್ ಮತ್ತು ಗಾರ್ಡ್ ಗಳು ಕ್ಷುಲ್ಲಕ ಕಾರಣಕ್ಕೆ ಗುಂಡಿಕ್ಕಿ ಹೊಡೆದಿದ್ದಾರೆ. ಆ ವ್ಯಕ್ತಿ ಸದ್ಯ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರಣ್ಯ ಸಿಬ್ಬಂದಿಯ ಈ ಅಮಾನವೀಯ ದೌರ್ಜನ್ಯ ಖಂಡಿಸಿ ಆಕ್ರೋಶ ಭುಗಿಲೆದ್ದಿದೆ. ಇಂದು ಗುರುವಾರ ಬೆಳಿಗ್ಗೆ 10.30ಕ್ಕೆ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಜೇನುಕುರುಬರ ಯುವಕ ಬಸವ ಎಂಬುವವರು ಡಿಸೆಂಬರ್ 1ರ ಬುಧವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಬಹಿರ್ದೆಶೆಗೆ ಹೋಗಿದ್ದಾಗ ಆತನಿಗೆ ಅರಣ್ಯ ಇಲಾಖೆಯ ವಾಚ್ ಮನ್ ಸುಬ್ರಮಣಿ ಎಂಬಾತ ಬಂದೂಕಿನಿಂದ ಶೂಟ್ ಮಾಡಿದ್ದಾನೆ ಎಂದು ಸಂತ್ರಸ್ತನ ಪತ್ನಿ ಬೈಲಕುಪ್ಪೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ವಿವರ:

ಜೋಳ ಕೊಯ್ಲು ಮಾಡುವ ಸಂದರ್ಭದಲ್ಲಿ ಬಸವ ಎಂಬುವವರು ಪಕ್ಕದ ಅಣ್ಣಯ್ಯ ಎಂಬುವವರ ಜಮೀನಿಗೆ ಬರ್ಹಿದೆಸೆಗೆಂದು ಹೋಗಿದ್ದಾರೆ. ಆಗ ಅರಣ್ಯ ಇಲಾಖೆಯ ವಾಚ್‌ಮನ್ ಸುಬ್ರಮಣಿ ಜೊತೆಗೆ ಮಹೇಶ ಮತ್ತು ಸಿದ್ದ ಎಂಬುವವರು ಹಾಗೂ ಗಾರ್ಡ್ ಮಂಜು ಇವರುಗಳು ಬಸವನನ್ನು ಅಟ್ಟಿಸಿಕೊಂಡು ಬಂದು ಸಿಗದಿದ್ದಾಗ ಸುಬ್ರಮಣಿ ಎಂಬಾತನು ಕೋವಿಯಿಂದ ಗುಂಡು ಹಾರಿಸಿದ್ದಾರೆ. ಹಿಂಬಾಗಕ್ಕೆ ಗುಂಡು ಬಿದ್ದಿದೆ. ಗುಂಡಿನ ಶಬ್ದ ಕೇಳಿ ಜನ ಸೇರಿದಾಗ ಮಂಜು ಎಂಬುವವರನ್ನು ಹೊರತುಪಡಿಸಿ ಉಳಿದವರು ಓಡಿ ಹೋಗಿದ್ದಾರೆ. ನಂತರ ಸಂತ್ರಸ್ತನನ್ನು ಕುಶಾಲನಗರ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಗುಂಡು ತೆಗೆಯಲು ಆಗದೆ ನಂತರ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸೇರಿಸಲಾಗಿದೆ.

ಒಂದೂವರೆ ತಿಂಗಳ ಹಿಂದೆ ಇದೇ ಅರಣ್ಯ ಸಿಬ್ಬಂದಿ ಮತ್ತು ನಮಗೂ ನಮ್ಮ ಮನೆ ಮುಂದಿನ ಮರದ ವಿಚಾರವಾಗಿ ಜಗಳವಾಗಿತ್ತು. ಸಿಬ್ಬಂದಿಯ ಅನ್ಯಾಯವನ್ನು ನಾವು ಪ್ರಶ್ನಿಸಿ ಜಗಳವಾಡುತ್ತಿದ್ದೇವು. ಹಾಗಾಗಿ ನಮ್ಮ ಮೇಲೆ ಅವರಿಗೆ ದ್ವೇಷ ಎಂದು ಸಂತ್ರಸ್ತನ ಪತ್ನಿ ಪುಷ್ಪ ಆರೋಪಿಸಿದ್ದಾರೆ.

ಆದಿವಾಸಿಗಳ ನೆರವಿಗೆ ಸ್ಥಳೀಯ ಸಂಸ್ಥೆಗಳಾದ ಗ್ರೀನ್ ಇಂಡಿಯಾದ ಡಾ.ಮಹೇಂದ್ರ ಕುಮಾರ ಮತ್ತು ಕಾರ್ಡ್ ಸಂಸ್ಥೆಯ ರಾಯ್ ಡೇವಿಡ್ ಸ್ಥಳಕ್ಕೆ ತಲುಪಿ ಪೊಲೀಸ್ ದೂರು ಸಲ್ಲಿಸಿ ಆದಿವಾಸಿಗಳಿಗೆ ಧೈರ್ಯ ತುಂಬಿದ್ದಾರೆ. ಈ ಅಮಾನವೀಯ ಘಟನೆ ಖಂಡಿಸಿ ಇಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮತ್ತು ಪತ್ರಿಕಾಗೋಷ್ಠಿ ನಡೆಸುವುದಾಗಿ ಡಾ. ಮಹೇಂದ್ರ ಕುಮಾರ್ ತಿಳಿಸಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ಹಾಡಿಯ ಜನ ತಿಳಿಸುವ ಪ್ರಕಾರ, ಕಳೆದ ಒಂದೂವರೆ ತಿಂಗಳ ಹಿಂದೆ ಇದೇ ಐದಾರು ಜನ ಅರಣ್ಯ ಸಿಬ್ಬಂದಿಗಳ ಜೊತೆ ನಡೆಯಲಾಗಿದ್ದ ಕ್ಷುಲ್ಲಕ ವಾದ ಜಗಳಕ್ಕೆ ತಿರುಗಿ, ಅದು ದ್ವೇಷಕ್ಲೆ ನಾಂದಿ ಹಾಡಿದೆ. ಕೊನೆಗೆ ಗುಂಡಿಟ್ಟು ಕೊಲ್ಲುವ ಪ್ರಯತ್ನದವರೆಗೂ ಮುಂದುವರೆದಿದೆ. ಆದಿವಾಸಿಗಳೆಂದರೆ ತೀರಾ ಕನಿಷ್ಠ ಎಂಬ ಮನಸ್ಥಿತಿ ಇಲ್ಲಿಯ ಅರಣ್ಯ ಇಲಾಖೆಯ ಸಿಬ್ಬಂದಿಯವರಲ್ಲಿದೆ. ಗುಂಡು ಹೊಡೆದ ಮೇಲೆಯೂ ಇಲಾಖೆಯವರು ಎಲ್ಲಿಂದಲೋ ಕಟ್ಟಿಗೆ ತಂದು ಹಾಕಿ ಪ್ರಕರಣವನ್ನು ತಿರುಚುವ ಪಯತ್ನ ಮಾಡುತ್ತಿದ್ದಾರೆ. ಆದರೆ ಅವರು ಬೈಕಿನಲ್ಲಿ ಕಟ್ಟಿಗೆ ತಂದು ಹಾಕುತ್ತಿರುವುದಕ್ಕೆ ನಮ್ಮಲ್ಲಿ ಪುರಾವೆಗಳಿವೆ, ಅದನ್ನು ಪೋಲೀಸ್ ಇಲಾಖೆಗೆ ಸಲ್ಲಿಸಿದ್ದೇವೆ” ಎಂದರು.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಸವ ಮತ್ತು ಆತನ ಸಹಚರರು ಗಂಧದ ಕಟ್ಟಿಗೆ ಸಾಗಿಸುತ್ತಿದ್ದರೆಂದು ದೂರು ನೀಡಿದ್ದಾರೆ. ಪೋಲೀಸರು ಇವರ ವಿರುದ್ದ FIR ದಾಖಲಿಸಿದ್ದಾರೆ. ಆದರೆ ಹಾಡಿಯ ಜೇನು ಕುರುಬರು ಕೊಟ್ಟ ದೂರಿಗೆ ಕೇವಲ ಎಂಡಾರ್ಸಮೆಂಟ್ ನೀಡಲಾಗಿದ್ದು, ಇಲಾಖೆಯ ಸಿಬ್ಬಂದಿಗಳ ವಿರುದ್ದ FIR ಮಾಡಲಾಗುವುದಿಲ್ಲವೆಂದೂ, ಬದಲಾಗಿ ತನಿಖೆ ನಡೆಸುತ್ತೇವೆಂದು ಪೋಲೀಸ್ ಇಲಾಖೆಯವರು ತಿಳಿಸಿರುತ್ತಾರೆ. ಸ್ಥಳೀಯ ಶಾಸಕರಾದ ಮಹದೇವಪ್ಪನವರು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ,ಇತರ ನಾಯಕರುಗಳು, ಪೋಲೀಸ್ ಇಲಾಖೆಗೆ ಪೋನ್ ಮಾಡಿ ಆದಿವಾಸಿಗಳಿಗೆ ಆದ ಅನ್ಯಾಯದ ವಿರುದ್ದ FIR ದಾಖಲಿಸಲು ತಿಳಿಸಿದರೂ ಮೇಲಿನ ಎಸ್ಪಿಯವರ ಆದೇಶದ ಪ್ರಕಾರ ದಾಖಲಿಸಲು ನಮಗೆ ಅನುಮತಿ ಇಲ್ಲವೆಂದು ತಿಳಿಸಿದ್ದಾರೆ. ಇದನ್ನು ವಿರೋಧಿಸಿ ಇಂದು ರಾಜ್ಯ ಮೂಲ ಆದಿವಾಸಿ ವೇದಿಕೆ ಮತ್ತು ಬುಡಕಟ್ಟು ಕೃಷಿಕರ ಸಂಘಟನೆಗಳು ಸೇರಿ ಪ್ರತಿಭಟಿಸುತ್ತೇವೆ ಎಂದು ತಿಳಿಸಿದ್ದಾರೆ.

ನಟ ಚೇತನ್ ಈ ಅನ್ಯಾಯವನ್ನು ಖಂಡಿಸಿದ್ದು, ಮೈಸೂರಿನ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ನಿನ್ನೆ ಪಿರಿಯಾಪಟ್ಟಣದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರಿಂದ ಗುಂಡೇಟು ತಿಂದು ಆಸ್ಪತ್ರೆಯಲ್ಲಿರುವ ಆದಿವಾಸಿ ವ್ಯಕ್ತಿಗೆ ನ್ಯಾಯ ಕೇಳಲು, ನಾನೀಗ ಮೈಸೂರಿಗೆ ಹೊರಟಿದ್ದೇನೆ.ಈ ವಿಷಯದ ಕುರಿತಾಗಿ, ಇಂದು ಬೆಳಗ್ಗೆ 10 ಗಂಟೆಯಿಂದ ಮೈಸೂರಿನ ಡಿಸಿ ಕಚೇರಿಯ ಎದುರು, ಆದಿವಾಸಿ ಗುಂಪುಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಾರೆ. ನಾನು ಕೂಡ ಅವರೊಂದಿಗೆ ಕೈ ಜೋಡಿಸುತ್ತೇನೆ” ಎಂದು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights