Fact check: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿ ಎಲ್ಕೆ ಅಡ್ವಾಣಿ ಅಳಲಿಲ್ಲ!
ಮಾರ್ಚ್ 11 ರಂದು ಬಿಡುಗಡೆಯಾದ ” ದಿ ಕಾಶ್ಮೀರ್ ಫೈಲ್ಸ್” ಸಿನೆಮಾ ದೇಶದಾದ್ಯಂತ ತೆರೆಕಂಡಿದೆ. ಈ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರನ್ನು ನಡೆಸಿಕೊಂಡಿರುವುದರ ದೃಶ್ಯಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ, ಬಿಜೆಪಿಯ ಹಿರಿಯ ನಾಯಕ “ಲಾಲ್ ಕೃಷ್ಣ ಅಡ್ವಾಣಿ” ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರ ವೀಕ್ಷಿಸುವ ವೇಳೆ ಅಳುತ್ತಿದ್ದಾರೆ ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಹಾಗಿದ್ದರೆ ಈ ಸಿನಿಮಾ ವೀಕ್ಷಿಸಿದ ಅಡ್ವಾಣಿ ನಿಜವಾಗಿಯೂ ಕಣ್ಣೀರು ಹಾಕಿದ್ದರೆ? ಈ ಘಟನೆ ನಡೆದಿದ್ದು ನಿಜವೆ ? ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ವೀಡಿಯೊದ ಸ್ಕ್ರೀನ್ಶಾಟ್ಗಳನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ರನ್ ಮಾಡಿದಾಗ, ಒಂದೇ ರೀತಿಯ ದೃಶ್ಯಗಳೊಂದಿಗೆ ಅನೇಕ ಸುದ್ದಿ ಲೇಖನಗಳು ಕಂಡುಬಂದಿವೆ. ಫೆಬ್ರವರಿ 2020 ರಲ್ಲಿ ‘ಇಂಡಿಯಾ ಟುಡೆ’ ಲೇಖನವನ್ನು ಶೀರ್ಷಿಕೆಯೊಂದಿಗೆ ಪ್ರಕಟಿಸಿದೆ – “ಎಲ್ಕೆ ಅಡ್ವಾಣಿ ‘ಶಿಕಾರ’ ಸಿನಿಮಾ ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಟಿವಿ9 ಕನ್ನಡ ಸುದ್ದಿ ವಾಹಿನಿಯೂ ಕೂಡ ವಿಡಿಯೊ ಕುರಿತು ವರದಿಯೊಂದನ್ನು ಪ್ರಕಟಿಸಿದ್ದು ಎಲ್ಕೆ ಅಡ್ವಾಣಿ “ದಿ ಕಾಶ್ಮೀರ್ ಫೈಲ್ಸ್” ಸಿನಿಮಾ ವೀಕ್ಷಿಸಿದ್ದಾರೆ ಎಂಬುದು ಸುಳ್ಳು , ಅವರು ನೋಡಿರುವುದು “ಶಿಕಾರ” ಎಂದು ಹೇಳಿದೆ.
ಖ್ಯಾತ ನಿರ್ದೇಶಕ/ನಿರ್ಮಾಪಕ ವಿಧು ವಿನೋದ್ ಚೋಪ್ರಾ ಅವರು 2020ರಲ್ಲಿ ‘ಶಿಕಾರ’ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಎಲ್.ಕೆ. ಅಡ್ವಾಣಿ ಅವರು ಭಾಗಿ ಆಗಿದ್ದರು. ‘ಶಿಕಾರ’ ಸಿನಿಮಾ ನೋಡಿದ ಬಳಿಕ ಅಡ್ವಾಣಿ ಎಮೋಷನಲ್ ಆಗಿದ್ದರು. ಅಂದು ಅವರು ಕಣ್ಣೀರು ಹಾಕಿದ್ದರು. ಆ ವಿಡಿಯೋವನ್ನು ವಿಧು ವಿನೋದ್ ಚೋಪ್ರಾ ಅವರು 2020ರ ಫೆ.7ರಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಆ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.
— Vivek Diwan (@VivekDiwan22) February 7, 2020
ಅಲ್ಲದೆ, “ವಿಧು ವಿನೋದ್ ಚೋಪ್ರಾ ಫಿಲ್ಮ್ಸ್” ನ ಅಧಿಕೃತ Instagram ಮತ್ತು Twitter ಖಾತೆಗಳು 2020 ರಲ್ಲಿ ಇದೇ ರೀತಿಯ ವೀಡಿಯೊವನ್ನು ವಿವರಣೆಯೊಂದಿಗೆ ಪೋಸ್ಟ್ ಮಾಡಿವೆ – “#Shikara ವಿಶೇಷ ಪ್ರದರ್ಶನದಲ್ಲಿ ಶ್ರೀ ಎಲ್ ಕೆ ಅಡ್ವಾಣಿ ಎಂದು ಬರೆಯಲಾಗಿದೆ. ನಿಮ್ಮ ಆಶೀರ್ವಾದ ಮತ್ತು ಚಿತ್ರಕ್ಕಾಗಿ ನಿಮ್ಮ ಮೆಚ್ಚುಗೆಗೆ ನಾವು ತುಂಬಾ ವಿನಮ್ರರಾಗಿದ್ದೇವೆ ಮತ್ತು ಕೃತಜ್ಞರಾಗಿರುತ್ತೇವೆ ಸರ್. ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
View this post on Instagram
ಈ ಸುದ್ದಿಗೆ ಸಂಬಂಧಿಸಿದಂತೆ ಒಬ್ಬರು ಕಮೆಂಟ್ ಮಾಡಿದ್ದು ” ಶಿಕಾರ ಸಿನಿಮಾದಲ್ಲಿ ಬರುವ ಒಂದು ಪಾತ್ರ ಆತ ಯಾವ ಶ್ರಮ ಪಡದೆ ಕಷ್ಟ ಅನುಭವಿಸದೆ ಸುಖದ ಜೇವನ ನಡೆಸುತ್ತಾನೆ, ಆದರೆ ನಿಜವಾಗಿಯೂ ಕಷ್ಟ ಅನುಭವಿಸಿದ ಪಾತ್ರದಾರಿ ಮೂಲೆಗುಂಪಾಗುತ್ತಾನೆ” ಈ ಕತೆಯಲ್ಲಿ ಬರುವಂತೆ ತಮ್ಮ ಜೀವನದಲ್ಲೂ ನಡೆದಿರುವ ವಾಸ್ತವವನ್ನು ನೆನೆದು ಅಡ್ವಾಣಿ ಅಳುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಇದೆಲ್ಲದರ ಜೊತೆಗೆ “ದಿ ಕಾಶ್ಮೀರ್ ಫೈಲ್ಸ್” ಚಿತ್ರದ ಬಗ್ಗೆ ಅಪಸ್ವರ ಕೇಳಿಬರುತ್ತಿದ್ದು, ಕಾಶ್ಮೀರಿ ಹಿಂದೂ ಪಂಡಿತರ ಮೇಲೆ ಭಯೋತ್ಪಾಧಕರು ನಡೆಸಿರುವ ಹೇಯ ಕೃತ್ಯ ಎಂದು ವಾದ ಮಾಡುತ್ತಿದ್ದರೆ, ಇನ್ನು ಕೆಲವರು ಕಾಶ್ಮೀರದಲ್ಲಿ ಕೇವಲ ಹಿಂದೂ ಪಂಡಿತರ ಮೇಲಷ್ಟೆ ಕ್ರೌರ್ಯ ನಡೆದಿಲ್ಲ ಬದಲಿಗೆ ಇತರೆ ಧರ್ಮದವರ ಮೇಲು ಹಿಂಸಾಚಾರ ನಡೆದಿದೆ, ಅದನ್ನು ಮರೆಮಾಚಿ ಹಿಂದೂ ಧರ್ಮವನ್ನ ವೈಭವೀಕರಿಸುವ ಮತ್ತು ಸುಳ್ಳು ಇತಿಹಾಸವನ್ನು ಹೇಳುವ ಮೂಲಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಚರ್ಚೆಗಳೇನೆ ಇದ್ದರು ಪೋಸ್ಟ್ನಲ್ಲಿ ಹೇಳಿರುವಂತೆ ” ದಿ ಕಾಶ್ಮೀರ್ ಫೈಲ್ಸ್” ಸಿನಿಮಾವನ್ನು ನೋಡಿ ಲಾಲ್ ಕೃಷ್ಣ ಅಡ್ವಾಣಿ ಅಳುತ್ತಿದ್ದರು ಎಂಬುದು ಸುಳ್ಳು, ಆದರೆ ಅವರು ವಿಧು ವಿನೋದ್ ಚೋಪ್ರ ನಿರ್ದೇಶನದ ಶಿಕಾರ ಸಿನಿಮಾ ನೋಡಿ ಭಾವುಕರಾಗಿದ್ದರು ಎಂಬುದು ಫ್ಯಾಕ್ಟ್ಚೆಕ್ ಮೂಲಕ ಖಚಿತವಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳಾಗಿದೆ.
ಇದನ್ನು ಓದಿರಿ: Fact check: ಪಂಜಾಬ್ನಲ್ಲಿ AAP ಕಾರ್ಯಕರ್ತರು ಗೂಂಡಾಗಿರಿ ನಡೆಸಿಲ್ಲ