ಮತ್ತೆ ರಾಜ್ಯ ರಾಜಕೀಯದಲ್ಲಿ ಶುರುವಾಗುತ್ತಾ ಕುದುರೆ ವ್ಯಾಪಾರ? – ಓಪನ್ ಚಾಲೆಂಜ್ ಹಾಕಿದ ಉಗ್ರಪ್ಪ!
ರಾಜ್ಯ ರಾಜಕೀಯದಲ್ಲಿ ಆಪರೇಷನ್ ಶುರುವಾಗುತ್ತಾ ಅನುಮಾನಕ್ಕೆ ಪುಷ್ಠಿ ನೀಡಿದ್ದಾರೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ. ಆ ಮೂಲಕ ಹೊಸ ಬಾಂಬ್ ಸಿಡಿಸಿ ಬಿಜೆಪಿ ನಾಯಕರ ನಿದ್ದೆಗೆಡಿಸಿದ್ದಾರೆ.
ಹೌದು… ಈಗಾಗಲೇ ಬಿಜೆಪಿ ಆಪರೇಷನ್ ಮೂಲಕ ಅಧಿಕಾರಕ್ಕೆ ಬಂದಿರುವುದನ್ನ ಮೈತ್ರಿ ಪಕ್ಷ ತೊರೆದ ಶಾಸಕರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಮೈತ್ರಿ ಸರ್ಕಾರ ಬೀಳಿಸಿದ ಬಿಜೆಪಿಗೆ ಅದೇ ಆತಂಕ ಶುರುವಾಗಿದೆ. ಕಾರಣ ಇಂದು ಉಗ್ರಪ್ಪ ಅವರು ಕೊಟ್ಟ ಹೇಳಿಕೆ.
ಬಿಜೆಪಿ ಆಂತರಿಕ ಪರಿಸ್ಥಿತಿ ಹದಗೆಟ್ಟಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ನಿರಾಸೆಯಲ್ಲಿದ್ದಾರೆ. ಬಿಜೆಪಿಯ ಉಸಿರುಗಟ್ಟಿಸುವ ವಾತಾವರಣದಲ್ಲಿ ಸಿಲುಕಿಗೊಂಡವರಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಒಬ್ಬರು. ಇವರೊಂದಿಗೆ ಹಲವಾರು ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ” ರಮೇಶ್ ಜಾರಕಿಹೊಳಿ ಡಿಸಿಎಂ ಆಗ್ಬೇಕು ಅಂತ ಕನಸು ಕಂಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಬಿಜೆಪಿಯಲ್ಲಿ ಅವರಿಗೆ ಈಗ ಉಸಿರುಗಟ್ಟುವ ವಾತಾವರಣ ಇದೆ. ಇದೇ ಕಾರಣಕ್ಕೆ ಅವರು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಹೇಳುತ್ತಿದ್ದಾರೆ.
ಜೊತೆಗೆ ಕಾಂಗ್ರೆಸ್ ಶಾಸಕರು ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿದ್ದರೆ ಅದನ್ನ ಬಹಿರಂಗ ಪಡಿಸಲಿ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ. ನಾನು ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಬಗ್ಗೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ. ಇವರ ಈ ಹೇಳಿಕೆ ಸದ್ಯ ಬಿಜೆಪಿ ವಲಯದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ.