ಫ್ಯಾಕ್ಟ್ಚೆಕ್ : ಆರ್ಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದಕ್ಕೆ ನೆಹರೂ ಅವರಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಲಾಗಿತ್ತೇ?
ಜವಾಹರ್ ಲಾಲ್ ನೆಹರೂ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಆಡಿದ ಮಾತಿನಿಂದ ಕೋಪಗೊಂಡ ಸ್ವಾಮಿ ವಿದ್ಯಾನಂದ್ ವಿಧೇಹ್ ಅವರು ನೆಹರು ಅವರಿಗೆ ಕಪಾಳಮೋಕ್ಷ ಮಾಡಿದ್ದರು ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಅನ್ನು ಪ್ರಸಾರ ಮಾಡಲಾಗುತ್ತಿದೆ. ಭಾರತಕ್ಕೆ ಆರ್ಯರು ಮಧ್ಯ ಏಷ್ಯಾದಿಂದ ಬಂದರವರು ಎಂದು ಜವಾಹರ್ ಲಾಲ್ ನೆಹರೂ ಸಾರ್ವಜನಿಕ ಸಭೆಯೊಂದರಲ್ಲಿ ಪ್ರತಿಕ್ರಿಯಿಸಿದಾಗ, ಆ ಸಭೆಯ ಮುಖ್ಯ ಅತಿಥಿಯಾಗಿದ್ದ ವಿದ್ಯಾನಂದ್ ವಿದೇಹ್ ವೇದಿಕೆಯ ಮೇಲೆ ಹೋಗಿ ನೆಹರೂಗೆ ಕಪಾಳಮೋಕ್ಷ ಮಾಡಿದರು ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
ವೈರಲ್ ಪೋಸ್ಟ್ನಲ್ಲಿ ಹೀಗೆ ಬರೆಯಲಾಗಿದೆ, “ನೆಹರೂ ತಮ್ಮ ಭಾಷಣದಲ್ಲಿ ಆರ್ಯರು ಭಾರತದಲ್ಲಿ ನಿರಾಶ್ರಿತರು ಎಂದು ಹೇಳಿದ್ದರು, ಇದನ್ನು ಕೇಳಿ ಮುಖ್ಯ ಅತಿಥಿಯೂ ಆಗಿದ್ದ ಸ್ವಾಮಿ ವಿದ್ಯಾನಂದ್ ವಿಧೇಹ್ ಎದ್ದು ವೇದಿಕೆಗೆ ಹೋಗಿ ನೆಹರೂಗೆ ಕಪಾಳಮೋಕ್ಷ ಮಾಡಿ, ಮೈಕ್ ಎಳೆದುಕೊಂಡು, ಆರ್ಯರು ನಿರಾಶ್ರಿತರಲ್ಲ ಎಂದರು. ನನ್ನ ಪೂರ್ವಜರು ಭಾರತದ ಮೂಲ ನಿವಾಸಿಗಳು ಆದರೆ ನೀವು (ನೆಹರೂ ಅವರ ಪೂರ್ವಜರು) ಅರೇಬಿಯನ್ ಮೂಲದವರಾಗಿದ್ದು, ನಿಮ್ಮ ರಕ್ತನಾಳಗಳಲ್ಲಿ ಅರಬ್ ರಕ್ತ ಹರಿಯುತ್ತಿದೆ, ಆದ್ದರಿಂದ ನೀವು ನಿಜವಾಗಿಯೂ ಈ ಮಹಾನ್ ದೇಶದ ಮೂಲ ನಿವಾಸಿಗಳಲ್ಲ. ನಿಮ್ಮ ಬದಲಿಗೆ ಸರ್ದಾರ್ ಪಟೇಲ್ ಅವರು ಪ್ರಧಾನಿಯಾಗಿದ್ದರೆ ನಮ್ಮ ಪರಿಸ್ಥಿತಿ ಇಷ್ಟು ಶೋಚನೀಯವಾಗಿರುತ್ತಿರಲಿಲ್ಲ. ಎಂದು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ನೆಹರೂನೀಡಿದ್ದಾರೆ ಎನ್ನಲಾದ ಹೇಳಿಕೆಯಿಂದ ಕೊಪಗೊಂಡ ಸ್ವಾಮಿ ವಿದ್ಯಾನಂದ್ ವಿಧೇಹ್ ಸಾರ್ವಜನಿಕ ಸಭೆಯಲ್ಲಿ ನೆಹರುಗೆ ಕಪಾಳಕ್ಕೆ ಹೊಡೆದಿದ್ದು ನಿಜವೇ ಎಂದು ಪೋಸ್ಟ್ನಲ್ಲಿ ಹಂಚಿಕೊಂಡ ಚಿತ್ರವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ ನಲ್ಲಿ ಸರ್ಚ್ ಮಾಡಿದಾಗ, ಇದೇ ಪ್ರತಿಪಾದನೆಯೊಂದಿಗೆ ಫೇಸ್ಬುಕ್ ಪೇಜ್ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಔಟ್ ಲುಕ್’ ಸುದ್ದಿ ಸಂಸ್ಥೆ ಇದೇ ಚಿತ್ರದೊಂದಿಗೆ ಪ್ರಕಟಿಸಿದ ಲೇಖನವೊಂದು ಲಭ್ಯವಾಗಿದೆ. ಈ ವರದಿಯ ಪ್ರಕಾರ 1962 ರ ಜನವರಿಯಲ್ಲಿ ಭಾರತದ ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಜನರ ನೂಕು ನುಗ್ಗಲು ಹೆಚ್ಚಾದ್ದರಿಂದ ನೆಹರೂ ಅವರಿಗೆ ಆಯಾತಪ್ಪಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಅವರನ್ನು ಬೀಳದಂತೆ ತಡೆಯಲು ಭದ್ರತಾ ಸಿಬ್ಬಂದಿಯೊಬ್ಬರು ನೆಹರು ಅವರನ್ನು ಹಿಡಿದಾಗ ಚಿತ್ರ ತೆಗೆಯಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅದರ ಎಪಿ ಆರ್ಕೈವ್ನ ಸ್ಕ್ರೀನ್ಶಾಟ್ಅನ್ನು ಇಲ್ಲಿ ನೋಡಬಹುದು.
‘ಅಸೋಸಿಯೇಟ್ ಪ್ರೆಸ್’ ಸುದ್ದಿ ಸಂಸ್ಥೆಯ ವೆಬ್ಸೈಟ್ನಲ್ಲೂ ಈ ಫೋಟೋ ಕಂಡುಬಂದಿದೆ. ಈ ವೆಬ್ಸೈಟ್ ಪ್ರಕಾರ, ಈ ಫೋಟೋವನ್ನು 01 ಜನವರಿ 1962 ರಂದು ಪಾಟ್ನಾ ನಗರದಲ್ಲಿ ಕಾಂಗ್ರೆಸ್ ಪಕ್ಷವು ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಜನರು ನೆಹರೂ ಅವರನ್ನು ನೋಡಲು ವೇದಿಕೆಯತ್ತ ಧಾವಿಸುತ್ತಿದ್ದಂತೆ ಜನಸಂದಣಿಯೊಳಗೆ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ನೆಹರು ಅವರನ್ನು ಹಿಡಿದಿರುವುದು ಫೋಟೋ ತೋರಿಸುತ್ತದೆ ಎಂದು ವಿವರಣೆಯಲ್ಲಿ ತಿಳಿಸಲಾಗಿದೆ. ಈ ಘರ್ಷಣೆಯ ನಂತರ ಭಾರತ-ಚೀನಾ ಯುದ್ಧ ನಡೆದಿದೆ ಎಂದು ವೆಬ್ಸೈಟ್ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ 1962 ರಲ್ಲಿ ‘ಇಂಡಿಯನ್ ಎಕ್ಸ್ಪ್ರೆಸ್‘ ಪ್ರಕಟಿಸಿದ ಲೇಖನವನ್ನು ಇಲ್ಲಿ ಕಾಣಬಹುದು. ‘ಟೈಮ್ಸ್ ಆಫ್ ಇಂಡಿಯಾ’ ಸುದ್ದಿ ಸಂಸ್ಥೆಯು ತಮ್ಮ ಫೇಸ್ಬುಕ್ ಪುಟದಲ್ಲಿ ವಿಡಿಯೋವನ್ನು ಪ್ರಕಟಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಪೋಸ್ಟ್ ಅನ್ನು ಸ್ಪಷ್ಟಪಡಿಸಿದೆ.
ಸ್ವಾಮಿ ವಿದ್ಯಾನಂದ ವಿಧೇ ಎಂಬುವವರ ಬಗ್ಗೆ ಮಾಹಿತಿಗಾಗಿ ಗೂಗಲ್ ಸರ್ಚ್ ಮಾಡಿದಾಗ, ಸ್ವಾಮಿ ವಿದ್ಯಾನಂದ ವಿಧೇ ಅವರು ‘ವೇದ್-ಸಂಸ್ಥಾನ’ ಎಂಬ ಸಂಸ್ಥೆಯ ಸ್ಥಾಪಕರು ಎಂಬುದಾಗಿ ತಿಳಿದುಬಂದಿದೆ. ಸ್ವಾಮಿ ವಿದ್ಯಾನಂದ ವಿದೇಹ್ ಅವರು ವೇದಗಳ ಪ್ರಸಿದ್ಧ ವಿದ್ವಾಂಸರು ಮತ್ತು ಯೋಗ ಜೀವನಶೈಲಿಯ ಪ್ರತಿಪಾದಕರು ಎಂದು ಹೇಳಲಾಗಿದೆ. ಸ್ವಾಮಿ ವಿದ್ಯಾಾನಂದ್ ವಿಧೇ ಅವರು ಸಾರ್ವಜನಿಕ ಸಭೆಯಲ್ಲಿ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬುದಕ್ಕೆ ಎಲ್ಲಿಯೂ ಯಾವುದೇ ಮಾಹಿತಿ ಅಥವಾ ಪುರಾವೆಗಳಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, 1962ರ ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯ ಚಿತ್ರವನ್ನು, ಸಾರ್ವಜನಿಕ ಸಭೆಯಲ್ಲಿ ಸ್ವಾಮಿ ವಿದ್ಯಾನಂದ ವಿದೇಹ್ ನೆಹರೂಗೆ ಕಪಾಳಮೋಕ್ಷ ಮಾಡುತ್ತಿರುವ ಫೋಟೋ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.
ಇದನ್ನು ಓದಿರ: ಫ್ಯಾಕ್ಟ್ಚೆಕ್ : ವೆನಿಜುವೆಲ್ಲಾ ರಸ್ತೆಯಲ್ಲಿ ಬಿದ್ದ ರಾಶಿ ರಾಶಿ ಕರೆನ್ಸಿ ನೋಟುಗಳು! ಕಾರಣ ಏನು ಗೊತ್ತಾ?