ಫ್ಯಾಕ್ಟ್ಚೆಕ್: ಭತ್ತದ ಗದ್ದೆಯಲ್ಲಿ ಸಿಕ್ಕ 250ಕ್ಕೂ ಹೆಚ್ಚು ಪಾಸ್ಪೋರ್ಟ್ಗಳು ಮುಸ್ಲಿಮರಿಗೆ ಸಂಬಂಧಿಸಿದ್ದೇ?
ಪಾಸ್ಪೋರ್ಟ್ ಎಂದರೆ ಮನೆಯ ಬೀರುವಿನಲ್ಲಿ ಜೋಪಾನವಾಗಿಟ್ಟು ಸಮಯ ಸಂದರ್ಭಗಳಲ್ಲಿ ಅದರ ಅವಶ್ಯಕತೆ ಇದ್ದಾಗ ಮಾತ್ರ ಅದನ್ನು ಉಪಯೋಗಿಸಿ ಮತ್ತೆ ಜೋಪಾನ ಮಾಡುವುದು ಸಾಮಾನ್ಯ, ಆದರೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು ಭತ್ತದ ಗದ್ದೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಪಾಸ್ಪೋರ್ಟ್ ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.
ಭತ್ತದ ಗದ್ದೆಯೊಂದರಲ್ಲಿ ಹಲವು ಪಾಸ್ಪೋರ್ಟ್ಗಳು ದೊರಕಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ರಸ್ತೆಯೊಂದರ ಪಕ್ಕದಲ್ಲಿರುವ ಭತ್ತದ ಗದ್ದೆಯಿಂದ ಯುವಕರು ಪಾಸ್ಪೋರ್ಟ್ಗಳನ್ನು ಹೊರ ತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇದು ಮುಸ್ಲಿಮರು ದೇಶದಲ್ಲಿ ಹೇಗೆ ಅಕ್ರಮವಾಗಿ ನೆಲೆಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಭಾರತದಲ್ಲಿ ದೊಡ್ಡ ವಿಧ್ವಂಸಕ ಕೃತ್ಯ ಎಸಗಲು ತಯಾರಿ ನಡೆಸಿದ್ದಾರೆ ಎಂದು ಪ್ರತಿಪಾದಿಸಿ ವಿಶ್ವ ಹಿಂದೂ ಪರಿಷತ್ತಿನ ಸದಸ್ಯೆ ಮತ್ತು ಹಿಂದುತ್ವ ಸಂಘಟನೆಯಾದ ಭಗವಾ ಕ್ರಾಂತಿ ಸೇನೆಯ ಅಧ್ಯಕ್ಷೆ ಬಲಪಂಥೀಯ ಪ್ರತಿಪಾದಕಿ ಸಾಧ್ವಿ ಪ್ರಾಚಿ ಅವರು ಮಾರ್ಚ್ 28, 2023 ರಂದು ತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
#AmritpalSinghExposed
जिस प्रकार गुजरात में बेट द्वारका के पास हजारों अवैध मुसलमान बसे थे उस आधार पर अंदाजा लगाया जा सकता है कि देश में सैकड़ों कसाब बसाए जा चुके हैं – @AchAnkurArya जी (23-03-2023)
देश में बडे हमलों के एक साथ अंजाम देने की कुछ तो बडी तैयारी चल रही है।
सावधान रहे pic.twitter.com/KY2kBTxZpH— Satya Sanatan Official (@SatyaSanatanYt) March 26, 2023
Satya Sanatan Official ಎಂಬ ಟ್ವಿಟರ್ ಅಕೌಂಟ್ನಿಂದ ವಿಡಿಯೋವನ್ನು ಹಂಚಿಕೊಂಡು ಇದು “ಗುಜರಾತ್ನ ಬೆಟ್ ದ್ವಾರಕಾ ಬಳಿ ಸಾವಿರಾರು ಅಕ್ರಮ ಮುಸ್ಲಿಮರು ನೆಲೆಸಿರುವ ರೀತಿಯನ್ನು ನೋಡಿದರೆ, ದೇಶದಲ್ಲಿ ನೂರಾರು ಕಸಬ್ಗಳು ಇದ್ದಾರೆ ಎಂದು ಊಹಿಸಬಹುದು” ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಬಲಪಂಥೀಯ ಪ್ರತಿಪಾದಕರು ಹಂಚಿಕೊಳ್ಳಲಾಗಿರುವ ಪೊಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಪೋಸ್ಟ್ಅನ್ನು ಪರಿಶೀಲಿಸಲು ವಿಡಿಯೋದ ಸ್ಕ್ರೀನ್ಶಾಟ್ಅನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ,11, ಮಾರ್ಚ್ 2018 ದಿನಾಂಕದ ಹಿಂದೂಸ್ತಾನ್ ಟೈಮ್ಸ್ ಲೇಖನ ಮತ್ತು 12, ಮಾರ್ಚ್ 2018 ದಿನಾಂಕದ ಟೈಮ್ಸ್ ಆಫ್ ಇಂಡಿಯಾ ಲೇಖನ ಸೇರಿದಂತೆ ಕೆಲವು ಸುದ್ದಿ ವರದಿಗಳು ವೈರಲ್ ವೀಡಿಯೊವನ್ನು ಸೆರೆಹಿಡಿಯಲಾದ ಸ್ಥಳದ ಉಲ್ಲೇಖದೊಂದಿಗೆ ವರದಿಯನ್ನು ಪ್ರಕಟಿಸಿರುವುದರ ಮಾಹಿತಿ ಲಭ್ಯವಾಗಿದೆ.
ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಪಾಸ್ಪೋರ್ಟ್ ಹೊಂದಿರುವವರು ಪಂಜಾಬ್ಗೆ ಸೇರಿದವರು ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ ಮತ್ತು ಅವರು ವೀಸಾಕ್ಕೆ ಅರ್ಜಿ ಸಲ್ಲಿಸಲು ಲುಧಿಯಾನ ಮೂಲದ ಖಾಸಗಿ ಸಂಸ್ಥೆಗೆ ತಮ್ಮ ಪಾಸ್ಪೋರ್ಟ್ಗಳನ್ನು ಸಲ್ಲಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಇತ್ತೀಚೆಗಷ್ಟೇ ಸಂಸ್ಥೆಯ ಕಚೇರಿಯನ್ನು ಮುಚ್ಚಲಾಗಿದ್ದು, ಪಾಸ್ಪೋರ್ಟ್ಗಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಮಾರ್ಚ್ 15, 2018 ರ ಟೈಮ್ಸ್ ಆಫ್ ಇಂಡಿಯಾ ಲೇಖನವು ಸಿರ್ಸಾ ಕ್ಷೇತ್ರಗಳಲ್ಲಿ ಈ ಹಿಂದೆ ಪತ್ತೆಯಾದ 258 ಪಾಸ್ಪೋರ್ಟ್ಗಳ ಜೊತೆಗೆ ಇನ್ನೂ 17 ಪಾಸ್ಪೋರ್ಟ್ಗಳು ಕಂಡುಬಂದಿವೆ ಎಂದು ವರದಿ ಮಾಡಿತ್ತು. ಟ್ರಿಬ್ಯೂನ್ ವರದಿಗಾರರು ಕಲನವಾಲಿ ಪೊಲೀಸ್ ಠಾಣೆಯ ಆಗಿನ SHO ಓಂ ಪ್ರಕಾಶ್ ಅವರನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
SHO ಓಂ ಪ್ರಕಾಶ್ ಹೇಳಿಕೆಯಂತೆ “ಮಾರ್ಚ್ 10, 2018 ರಂದು, ಚಕೇರಿಯಾ ಗ್ರಾಮದ ಬಳಿ ಹಲವು ಪಾಸ್ಪೋರ್ಟ್ಗಳು ಪತ್ತೆಯಾಗಿವೆ ಎಂದು ನಮಗೆ ಮಾಹಿತಿ ಲಭ್ಯವಾದ ತಕ್ಷಣ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಂಡರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಪಾಸ್ಪೋರ್ಟ್ ಹೊಂದಿರುವವರು ಪಂಜಾಬ್ಗೆ ಸೇರಿದವರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ವೀಸಾಕ್ಕೆ ಅರ್ಜಿ ಸಲ್ಲಿಸಲು ಲುಧಿಯಾನ ಮೂಲದ ಖಾಸಗಿ ಸಂಸ್ಥೆಗೆ ತಮ್ಮ ಪಾಸ್ಪೋರ್ಟ್ಗಳನ್ನು ಸಲ್ಲಿಸಿದ್ದರು ಆದರೆ, ಇತ್ತೀಚೆಗಷ್ಟೇ ಸಂಸ್ಥೆಯು ತನ್ನ ಕಚೇರಿಯನ್ನು ಮುಚ್ಚಿ, ಪಾಸ್ಪೋರ್ಟ್ಗಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು ಎಂದು ತಿಳಿದ್ದಾರೆ. ಹಾಗಾಗಿ ಇದು 2018ರ ಘಟನೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಗದ್ದೆಗಳಲ್ಲಿ ಸಿಕ್ಕಿರುವ ಪಾಸ್ಪೋರ್ಟ್ಗಳ ವೈರಲ್ ವಿಡಿಯೋ ಹರಿಯಾಣದ ಸಿರ್ಸಾ ಜಿಲ್ಲೆಯ ಹಳೆಯ(ಘಟನೆಯು 2018 ) ಘಟನೆಗೆ ಸಂಬಂಧಿಸಿದ್ದು ಎಂದು ಸುದ್ದಿ ವರದಿಗಳು ಮತ್ತು ಪೊಲೀಸ್ ಹೇಳಿಕೆಯಿಂದ ಸ್ಪಷ್ಟವಾಗಿದೆ. ಆದರೆ ಇದನ್ನು ಸುಳ್ಳು ಮತ್ತು ಕೋಮು ದ್ವೇಷದೊಂದಿಗೆ ಗುಜರಾತ್ನಲ್ಲಿ ಮುಸ್ಲಿಮರು ದೊಡ್ಡ ವಿಧ್ವಂಸಕ ಕೃತ್ಯ ಎಸಗಲು ತಯಾರಿ ನಡೆಸಿದ್ದಾರೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದರಿ: ಫ್ಯಾಕ್ಟ್ಚೆಕ್ : ತಿಮಿಂಗಿಲ ದಾಳಿಯಿಂದ ನುಚ್ಚು ನೂರಾದ ಹಡಗು! ವೈರಲ್ ದೃಶ್ಯದ ವಾಸ್ತವವೇನು?