FACT CHECK | ಮೋದಿ ಸರಕಾರಕ್ಕೆ ಕಪ್ಪು ಚುಕ್ಕೆ ತರಲು ರೈಲು ಅಪಘಾತ ಆಗುವಂತೆ ಮಾಡಲಾಗಿದೆಯೇ?
ಮೋದಿ ಸರಕಾರಕ್ಕೆ ಕಪ್ಪು ಚುಕ್ಕೆ ತರಲು ಮುಂದಾಗಿರುವ ಈ ಜಿಹಾದಿ ಮನಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ರೈಲು ಸಿಗ್ನಲ್ ಕಾಣದಂತೆ ಮಾಡಿ ರೈಲುಗಳ ನಡುವೆ ಆಕ್ಸಿಡೆಂಟ್ ಆಗುವಂತೆ ಮಾಡುವ ಕುಂತಂತ್ರ ಮಾಡಿದ್ದಾರೆ ಎಂಬ ಸಂದೇಶವೊಂದು ವಾಟ್ಸಾಪ್ಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.
(ಸೋಮವಾರ (ಜೂನ್ 17) ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸಂಭವಿಸಿದ ಕಾಂಚನ ಜುಂಗಾ ಎಕ್ಸ್ಪ್ರೆಸ್ ರೈಲು ಅಪಘಾವನ್ನು ಉಲ್ಲೇಖಿಸಿ ಈ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಕೋಲ್ಕತ್ತಾದ ಸೀಲ್ದಾಗೆ ತೆರಳುತ್ತಿದ್ದ ಕಾಂಚನ ಜುಂಗಾ ಎಕ್ಸ್ಪ್ರೆಸ್ಗೆ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿ, 41 ಮಂದಿ ಗಾಯಗೊಂಡಿದ್ದರು.)
ಹಾಗೆಯೇ ಇದೇ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಕೆಲವು ಬಲಪಂಥೀಯ ಪ್ರತಿಪಾದಕರು, ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಸೂಹೆ ಮತ್ತು ಹೊಟ್ಟೆಕಿಚ್ಚಿ ಕಾರಣಕ್ಕೆ ಇಂತಹ ಕೃತ್ಯಗಳನ್ನು ಎಸಗಲಾಗುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪೋಟೋ ಬಳಿಸಿಕೊಂಡು ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಎಂಥಾ ನಾಚಿಕೆಗೇಡು ನಮೋ ಮೇಲಿನ ಹೊಟ್ಟೆಕಿಚ್ಚಿಗೆ ಆಗ್ತಿದೆ ಹಲವು ರೈಲು ಅಪಘಾತಗಳು ಎಂಬ ಶೀರ್ಷಿಕೆಯೊಂದಿಗೆ ಫೇಸ್ಬುಕ್ನಲ್ಲಿ ವ್ಯಾಪಕವಾಗಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
BJP for 2024 – Modi Mattomme , ಯಂಗ್ ಇಂಡಿಯಾ ಇನ್ , ಬಿಎಸ್.ಯಡಿಯೂರಪ್ಪ ಅಭಿಮಾನಿ ಬಳಗ, Bjp For karnataka in 2018 Mission 150 ಎಂಬ ಬಿಜೆಪಿ ಬೆಂಬಲಿತ ಫೇಸ್ಬುಕ್ ಪೇಜ್ಗಳಲ್ಲಿ ಇಂತಹ ಪೋಸ್ಟ್ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ( ಫೇಸ್ ಬುಕ್ ಪೋಸ್ಟ್ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು)
ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ 2014 ರಿಂದ 2024ರ ವರೆಗೆ ಹತ್ತು ಬಾರಿ ರೈಲ್ವೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಅನೇಕರು ತಮ್ಮ ಜೀವ ಕಳೆದುಕೊಂಡಿದ್ದಾರೆ ಮತ್ತು ಇನ್ನೂ ಅನೇಕರು ಗಾಯಾಳುಗಳಾಗಿ ತನ್ನ ಜೀವನವನ್ನು ಕಳೆದುಕೊಂಡಿದ್ದಾರೆ. ಆದರೆ ಈಗ ಈ ಎಲ್ಲಾ ಅಪಘಾತಗಳನ್ನು ರಾಜಕೀಯ ದ್ವೇಷದಿಂದ ಮಾಡಿಸಲಾಗಿದೆ. ನರೇಂದ್ರ ಮೋದಿಯವರ ಮೇಲಿನ ಅಸೂಹೆ ಮತ್ತು ಹೊಟ್ಟೆಕಿಚ್ಚಿನಿಂದ ಈ ಕೃತ್ಯವನ್ನು ಎಸಗಲಾಗುತ್ತಿದೆ ಎಂದು ಅನೇಕ ಬಲಪಂಥೀಯ ಕಾರ್ಯಕರ್ತರು ಸೇರಿದಂತೆ ಬಿಜೆಪಿ ಬೆಂಬಲಿಗರು ಆರೋಪಿಸಿದ್ದಾರೆ.
2023ರ ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 296 ಮಂದಿ ಜೀವ ಕಳೆದುಕೊಂಡಿದ್ದರು. ಆಗಲೂ ಇಂತಹದ್ದೇ ಮೋದಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲೆಂದು ಹೀಗೆ ಪಿತೂರಿ ಮಾಡಲಾಗಿದೆ ಎಂಬ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದವು. ಹಾಗಿದ್ದರೆ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಗಳನ್ನು ಪರಿಶೀಲಿಸಲು ಕೇಂದ್ರ ರೈಲ್ವೆ ಇಲಾಖೆಯಲ್ಲಿ ನಡಯುತ್ತಿರುವ ತನಿಖೆಯ ಅಂತಿಮ ವರದಿ ಬಂದಿದೆಯೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, “ಪ್ರಾಥಮಿಕ ವರದಿಗಳ ಪ್ರಕಾರ ಮಾನವ ದೋಷದ ಸಾಧ್ಯತೆಯನ್ನು ಇರಬಹುದು ಎಂದು ಹೇಳಲಾದ ವರದಿಗಳು ಲಭ್ಯವಾಗಿದೆ.
ರೈಲ್ವೆ ಅಪಘಾತಗಳನ್ನು ರಾಜಕೀಯ ದ್ವೇಷದಿಂದ ಮಾಡಿಸಲಾಗಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. “ಪ್ರಾಥಮಿಕ ವರದಿಗಳು ಮಾನವ ದೋಷದ ಸಾಧ್ಯತೆಯನ್ನು ಸೂಚಿಸುತ್ತವೆ, ಆದರೆ ರೈಲ್ವೆ ಸುರಕ್ಷತಾ ಆಯುಕ್ತರ ತನಿಖೆ ಪೂರ್ಣಗೊಂಡ ನಂತರವೇ ಅಪಘಾತಕ್ಕೆ ನಿಖರವಾದ ಕಾರಣ ತಿಳಿಯಲಿದೆ.” ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದುವರೆಗೂ ಈ ಘಟನೆಗೆ ಸಂಬಂಧಿಸಿದಂತೆ ಯಾರೂ ಈ ಕೃತ್ಯಕ್ಕೆ ಕಾರಣ ಎಂದು ತಿಳಿದು ಬಂದಿಲ್ಲ. ಯಾರೋ ಕಿಡಿಗೇಡಿಗಳು ರೈಲ್ವೆ ಹಳಿ ಬಳಿಯ ಸಿಗ್ನಲ್ ಕಂಬವನ್ನು ಬಟ್ಟೆಯಿಂದ ಸಿಗ್ನಲ್ ಲೈಟ್ ಕಾಣದಂತೆ ಮುಚ್ಚಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಇನ್ನೂ ಮುಸ್ಲಿಮರು ಈ ರೈಲ್ವೆ ಅಪಘಾತಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ. ಆದರೆ ಈ ಬಾರಿಯ ರೈಲ್ವೆ ಅಪಘಾತ ಸಂಭವಿಸಿದಾಗ ಸ್ಥಳಕ್ಕೆ ಆಗಮಿಸಿ, ಜನರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದವರು ಮುಸ್ಲಿಮರೇ ಆಗಿದ್ದಾರೆ.
ಈ ಕುರಿತು ಅನೇಕ ಮಾಧ್ಯಮಗಳು ವರದಿ ಮಾಡಿದ್ದು, “ಸಾಂಪ್ರದಾಯಿಕ ಹಬ್ಬದ ಉಡುಪುಗಳನ್ನು ಧರಿಸಿ ಮತ್ತು ಬಕ್ರೀದ್ ಆಚರಣೆಯನ್ನು ಅರ್ಧಕ್ಕೆ ನಿಲ್ಲಿಸಿ, ಪಶ್ಚಿಮ ಬಂಗಾಳದ ರಂಗಪಾಣಿಯ ಹಲವಾರು ಸ್ಥಳೀಯರು ಜೂನ್ 17 ರಂದು ಈ ಪ್ರದೇಶದಲ್ಲಿ ಸಂಭವಿಸಿದ ಮಾರಣಾಂತಿಕ ರೈಲು ಅಪಘಾತದಲ್ಲಿ ಗಾಯಗೊಂಡ ಜನರನ್ನು ರಕ್ಷಿಸಲು ಧಾವಿಸಿದರು.”
“ಈದ್ ನಮಾಜ್ ಮುಗಿಸಿ ಮನೆ ತಲುಪುತ್ತಿದ್ದಂತೆ ಗುಡುಗಿನಂತಹ ಸದ್ದು ಕೇಳಿಸಿತು. ನಾವೆಲ್ಲರೂ ಸ್ಥಳಕ್ಕೆ ಧಾವಿಸಿ ರೈಲು ಅಪಘಾತವನ್ನು ನೋಡಿದೆವು. ಸಂಭ್ರಮಾಚರಣೆ ಬಿಟ್ಟು ರಕ್ಷಣಾ ಕಾರ್ಯ ಆರಂಭಿಸಿದೆವು. ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆವು. ನಾವು ನಮ್ಮ ಮನೆಗಳಿಂದ ಏಣಿಗಳನ್ನು ಪಡೆದುಕೊಂಡು ಹಳಿತಪ್ಪಿದ ಬರ್ತ್ಗಳಿಂದ ಪ್ರಯಾಣಿಕರನ್ನು ಹೊರತಂದಿದ್ದೇವೆ” ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸ್ಥಳೀಯರೊಬ್ಬರು ಇಂಡಿಯಾ ಟುಡೇ ಟಿವಿಗೆ ತಿಳಿಸಿದ್ದಾರೆ.
These youth did not celebrate their Eid festival, instead they first fulfilled their duty of saving humans. These Muslim youth saved the lives of many people. On the day of Eid he could only offer morning prayers and the rest of the day was spent in helping travelers in distress. pic.twitter.com/A4oBu18amP
— K Tamang (@KTamang12) June 19, 2024
ಒಟ್ಟಾರೆಯಾಗಿ ಹೇಳುವುದಾದರೆ, ರೈಲ್ವೆ ಅಪಘಾತಗಳನ್ನು ರಾಜಕೀಯ ದ್ವೇಷದಿಂದ ಮಾಡಿಸಲಾಗಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಸದ್ಯಕ್ಕೆ ತನಿಖೆ ನಡೆಯುತ್ತಿದ್ದು, ರೈಲ್ವೆ ಸುರಕ್ಷತಾ ಆಯುಕ್ತರ ತನಿಖೆ ಪೂರ್ಣಗೊಂಡ ನಂತರವೇ ಅಪಘಾತಕ್ಕೆ ನಿಖರವಾದ ಕಾರಣ ತಿಳಿಯಲಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಮಮತಾ ಬ್ಯಾನರ್ಜಿ ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಅಂತಿಮ ವರದಿ ಬರುವ ಮೊದಲೆ ಹೀಗೆ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಆರೋಪಿಸುವುದು ಕೋಮು ಸಂಘರ್ಷಕ್ಕೆ ಕಾರಣವಾಗುತ್ತದೆ.
ಅಲ್ಲದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ರೈಲು ಅಪಘಾತಗಳು ಸಂಭವಿಸಿ ಅಪಾರ ಸಾವು ನೋವು ಜೀವ ಹಾನಿಯಾಗಿರುವ ಘಟನೆಗಳು ದಾಖಲಾಗಿವೆ. ಅದಕ್ಕೆಲ್ಲಾ ಯಾರು ಹೊಣೆ. ಹಾಗಾಗಿ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಅಧಿಕೃತ ಮಾಹಿತಿ ಇಲ್ಲದೆ ಹೀಗೆ ಸುಳ್ಳು ಆರೋಪ ಮಾಡುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ ಎಚ್ಚರವಿರಲಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | PM ಕನ್ಯಾ ಯೋಜನೆ ಎಂಬ ಯಾವ ಸ್ಕೀಂಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ