ಲಾಕ್ಡೌನ್ 4.0 ನಲ್ಲಿ ಭಾರಿ ಸಡಿಲಿಕೆ : ಇಂದಿನಿಂದ ವ್ಯಾಪಾರ- ವಹಿವಾಟು, ಸಾರಿಗೆ ಸಂಚಾರಕ್ಕೆ ಅವಕಾಶ
ರಾಜ್ಯದಲ್ಲಿ ಲಾಕ್ ಡೌನ್ 4.0 ಆರಂಭವಾಗಿದ್ದು ಕೆಲ ವಲಯದಲ್ಲಿ ಷರತ್ತುಬದ್ಧ ಸಡಿಕೆ ಮಾಡಲಾಗಿದೆ. ಇಂದಿನಿಂದ ವ್ಯಾಪಾರ- ವಹಿವಾಟು, ಸಾರಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಹೌದು… ಲಾಕ್ಡೌನ್ 4.0 ನಲ್ಲಿ ಭಾರಿ ಸಡಿಲಿಕೆ ನೀಡಲಾಗಿದ್ದು, ಬಹುತೇಕ ಎಲ್ಲ ವ್ಯಾಪಾರ- ವಹಿವಾಟು, ಸಂಚಾರ ವ್ಯವಸ್ಥೆ ಆರಂಭವಾಗಲಿದೆ. ಬಸ್ ಸಂಚಾರ ನಿರ್ಧಾರವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಿದ್ದರಿಂದ ಸೋಮವಾರ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದಿನಿಂದ ಸಾರಿಗೆ ಸಂಚಾರ ಆರಂಭಿಸಲು ನಿರ್ಧರಿಸಿದ್ದಾರೆ. ಅದರಂತೆ ಇಂದಿನಿಂದ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಸುಗಳ ಸಂಚಾರ ಆರಂಭವಾಗಲಿದೆ.
ಇಂದಿನಿಂದ ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ ಸೇವೆ ಆರಂಭವಾಗಿದೆ.ಬಹುದಿನಗಳ ಬಳಿಕ ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ಸುಗಳು ರಸ್ತೆಗೆ ಇಳಿಯಲಿದ್ದರೂ ಎಲ್ಲ ಜನರಿಗೆ ಪ್ರಯಾಣಿಸಲು ಅವಕಾಶವಿಲ್ಲ.ಹಿರಿಯ ನಾಗರಿಕರು ಮತ್ತು 10 ವರ್ಷದ ಒಳಗಿನ ಮಕ್ಕಳು ಬಸ್ಸಿನಲ್ಲಿ ಪ್ರಯಾಣಿಸುವಂತಿಲ್ಲ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕೋವಿಡ್ 19 ಪ್ರಕರಣಗಳು ಹೆಚ್ಚು ದಾಖಲಾಗಿರಿವ ಕಂಟೈನ್ಮೆಂಟ್ ವಲಯದಲ್ಲಿ ಬಸ್ಸುಗಳು ಸಂಚರಿಸುವುದಿಲ್ಲ.
1500 ಬಸ್ ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಂದರೆ ಶೇ. 25 ಬಸ್ ಸಂಚಾರ ಆರಂಭಿಸಲು ಕೆಎಸ್ಆರ್ಟಿಸಿ ಮುಂದಾಗಿದೆ. ನಂತರ ಹಂತಹಂತವಾಗಿ ಬಸ್ಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡಲು ಚಿಂತಿಸಲಾಗಿದೆ. ಬೆಂಗಳೂರಿನಿಂದ ಹೊರಡುವ ಬಸ್ಗಳು ಸಂಜೆ 7 ಗಂಟೆಯೊಳಗೆ ನಿಗದಿತ ನಿಲ್ದಾಣ ತಲುಪಬೇಕು. ಸಂಜೆ 7 ಗಂಟೆ ನಂತರ ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಸಂಜೆ 4 ಗಂಟೆಯೊಳಗೆ ಬೆಂಗಳೂರಿನಿಂದ ಎಲ್ಲ ಬಸ್ಸುಗಳು ಹೊರಡಲಿವೆ.
ಸಂಚಾರದ ವೇಳೆ ಮಾಸ್ಕ್ ಗಳನ್ನು ಧರಿಸಬೇಕು. ಮಹಿಳೆಯರಿಗೆ ಪ್ರತ್ಯೇಕ ಬಾಗಿಲು ಇಲ್ಲ. ಎಲ್ಲರೂ ಹಿಂದಿನ ಬಾಗಿಲಿನಿಂದ ಹತ್ತಿ, ಮುಂದಿನ ಬಾಗಿಲಿನಿಂದ ಇಳಿಯಬೇಕಾಗುತ್ತದೆ. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸರದಿಯಂತೆ ಹತ್ತಬೇಕು ಮತ್ತು ಇಳಿಯಬೇಕು. ವ್ಯಾಪಾರ- ವಹಿವಾಟು ವೇಳೆಯೂ ಸಾಮಾಜಿ ಅಂತರ, ಮಾಸ್ಕ್ ಧರಿಸಬೇಕು.