ಕತಾರ್ ದೇಶದಲ್ಲಿ ಭಾರತೀಯರ ದೀಪಾವಳಿ ಆಚರಣೆ : ಬೃಹತ್ ಗಾತ್ರದ ರಂಗೋಲಿ ಬಿಡಿಸಿದ ೧೨ ತಂಡ
ಕೊಲ್ಲಿ ದೇಶಗಳಲ್ಲಿ ದೀಪಾವಳಿ ಆಚರಿಸುವುದು ಹೊಸತೇನಲ್ಲ, ಆದರೆ ಕತಾರ್ ಎಂಬ ದೇಶದಲ್ಲಿ ಭಾರತೀಯರು ಈ ಬಾರಿ ದೀಪಾವಳಿ ಆಚರಿಸುತ್ತ ಒಂದು ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಸುಮಾರು ೧೨ ಜನರ ತಂಡವು ಸತತವಾಗಿ ೩ ದಿನಗಳ ಕಾಲ ಶ್ರಮಪಟ್ಟು, ಒಂದು ಬೃಹತ್ ಗಾತ್ರದ ರಂಗೋಲಿಯನ್ನು ರಚಿಸಿದ್ದಾರೆ. ಸ್ಥಳೀಯ ಆಕಾಶವಾಣಿ ’ರೇಡಿಯೋ ಆಲಿವ್ ೧೦೬.೩’ ಸಂಸ್ಥೆಯವರೊಂದಿಗೆ ಸೇರಿ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಈ ದೊಡ್ಡ ರಂಗೋಲಿ ಹಾಗು ಇತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕತಾರಿನಲ್ಲಿ ವಾಸವಾಗಿರುವ ಭಾರತೀಯರಿಗೆ ಹಾಗು ಇತರೆ ದೇಶದವರ ಸಲುವಾಗಿ ಆಯೋಜಿಸಿದ್ದಾರೆ.
ಭಾರತೀಯ ಸಂಸ್ಕೃತಿ ಹಾಗು ಪರಂಪರೆಯನ್ನು ಪ್ರತಿಬಿಂಬಿಸಲು ಹಬ್ಬಗಳ ಆಚರಣೆ ಅತ್ಯಗತ್ಯ. ದಿನಾಂಕ ಅಕ್ಟೋಬರ್ ೨೫ ರಿಂದ ೨೭ ರ ತನಕ ದೊಹಾದಲ್ಲಿನ ಮಿರ್ಕಾಬ್ ಮಾಲ್ ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳು, ಮಿಟಾಯಿ ಮಳಿಗೆಗಳು, ಜಾದೂ ಪ್ರದರ್ಶನ ಹಾಗೂ ಉಲ್ಲಾಸಭರಿತ ಚಟುವಟಿಕೆಗಳು ಸೇರಿ ಭಾಗವಹಿಸಿದವರಿಗೆ ವಿಶೇಷ ಬಹುಮಾನಗಳನ್ನು ವಿತರಿಸಲಾಗುತ್ತದೆ.
ಕನ್ನಡಿಗರ ಪ್ರತಿನಿಧಿಯಾಗಿ ಹಾಗೂ ’ಭಾರತೀಯ ಸಮುದಾಯ ಹಿತನಿಧಿ (ಐ.ಸಿ.ಬಿ.ಎಫ಼್.)’ ಸಂಘದ ಜಂಟಿ-ಕಾರ್ಯದರ್ಶಿಯಾಗಿರುವ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಕ್ರಿಯವಾಗಿ ಸೇವೆ ಸಲ್ಲಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿದ್ದಾರೆ. ಭಾರತೀಯ ಮೌಲ್ಯಗಳನ್ನು ಹೊರದೇಶದಲ್ಲಿ ಎತ್ತಿ ಹಿಡಿಯುವಲ್ಲಿ ಶ್ರೀಯುತ ಸುಬ್ರಮಣ್ಯರವರು ಶ್ರಮವಹಿಸಿ, ತಮ್ಮ ಕ್ರಿಯಾಶಿಲತೆಯಿಂದ ಸಮಾಜದ ಸಕಾರಾತ್ಮಕ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.