ಡೋಣಿ ಪ್ರವಾಹದಲ್ಲಿ ಸಿಲುಕಿದ 3 ಜನ ಕುರಿಗಾಹಿಗಳು, 300 ಕುರಿಗಳು, 4 ನಾಯಿಗಳ ರಕ್ಷಣೆ
ಡೋಣಿ ಪ್ರವಾಹದಲ್ಲಿ ಸಿಲುಕಿದ್ದ 3 ಜನ ಕುರಿಗಾಹಿಗಳು, 300 ಕುರಿಗಳು ಮತ್ತು ನಾಲ್ಕು ನಾಯಿಗಳನ್ನು ವಿಪತ್ತು ನಿರ್ವಹಣೆ ದಳ ಗ್ರಾಮಸ್ಥರ ಮತ್ತು ಇತರ ಸಿಬ್ಬಿಂದಿಯ ಸಹಕಾರದಲ್ಲಿ ರಕ್ಷಿಸಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಬಳಿ ಡೋಣಿ ನದಿಯ ಮಧ್ಯದಲ್ಲಿರುವ ಕಾಮನಕಲ್ಲ ನಡುಗಡ್ಡೆಯಲ್ಲಿ ನಿನ್ನೆ 3 ಜನ ಕುರಿಗಾಹಿಗಳು, 300 ಕುರಿಗಳು ಮತ್ತು 4 ನಾಯಿಗಳು ಸಿಲುಕಿಕೊಂಡಿದ್ದವು. ನಿನ್ನೆ ಸಂಜೆಯಿಂದಲೇ ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು.
ಆದರೆ, ನಿನ್ನೆ ಮಧ್ಯರಾತ್ರಿ 2.30ಕ್ಕೆ ಮಿಣಜಗಿ ಗ್ರಾಮದ 3 ಜನ ಕುರಿಗಾಹಿಗಳಾದ ಮಿಣಜಗಿ 35 ವರ್ಷದ ರಮೇಶ ಪೂಜಾರಿ, 50 ವರ್ಷದ ಮಾನಪ್ಪ ರಾಠೋಡ ಮತ್ತು 30 ವರ್ಷದ ಹಣಮನಂತ ರಾಠೋಡ ಎಂಬುವರನ್ನು ಪೋಟ್ ಮೂಲಕ ವಿಪತ್ತು ನಿರ್ಹವಣಾ ಪಡೆ ಸಿಬ್ಬಂದಿ ರಕ್ಷಿಸಿದ್ದರು.
ಇಂದು ಸೂರ್ಯೋದಯದ ಬಳಿಕ ಇದೇ ವಿಪತ್ತು ನಿರ್ವಹಣಾ ಸಿಬ್ಬಂದಿ, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಎಲ್ಲ 300 ಕುರಿಗಳು ಮತ್ತು 4 ನಾಯಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ನದಿ ತೀರದಿಂದ ಕಾಮನಕಲ್ಲ ನುಡಗಡ್ಡೆವರೆಗೆ ಹಗ್ಗ ಕಟ್ಟಿ ನದಿಯಲ್ಲಿ ನಿಂತ ಗ್ರಾಮಸ್ಥರು ಒಂದೊಂದೇ ಕುರಿಗಳನ್ನು ಮತ್ತು ನಾಯಿಗಳನ್ನು ಒಬ್ಬೊಬ್ಬರಾಗಿ ಸುರಕ್ಷಿತವಾಗಿ ದಡಕ್ಕೆ ಸಾಗಿಸಿದ್ದಾರೆ.
ಈ ಮೂಲಕ 3 ಜನ ಕುರಿಗಾಹಿಗಳು, 300 ಕುರಿಗಳು ಮತ್ತು 4 ನಾಯಿಗಳು ಸುರಕ್ಷಿತವಾಗಿ ಹೊರ ಬಂದಿವೆ. ಈಗ ಡೋಣಿ ನದಿಯಲ್ಲಿ ಪ್ರವಾಹ ಇಳಿಮುಖವಾಗುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.