ಗಡಿ ಘರ್ಷಣೆ: ಗಡಿ ಭಾಗದಲ್ಲಿ ಸೇನೆಯ ಬಲವನ್ನು ಹೆಚ್ಚಿಸಿದ ಉಭಯ ರಾಷ್ಟ್ರಗಳು!
ಕಳೆದ ಎರಡು ತಿಂಗಳುಗಳಿಂದ ಭಾರತದ ಗಡಿ ಭಾಗ ಲಡಾಖ್ನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಎರಡು ದಿನಗಳಿಂದ ಗಡಿಯಲ್ಲಿನ ಪರಿಸ್ಥಿತಿ ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡಿದೆ. ಭಾರತದ 20 ಸೈನಿಕರು ಚೀನಾ ಸೇನೆಯೊಂದಿಗೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಹತ್ಯೆಯಾಗಿದ್ದಾರೆ ಎಂದು ಮಂಗಳವಾರ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಚೀನಾ ಸೇನೆಯು ಮತ್ತಷ್ಟು ಯುದ್ದ ವಿಮಾನಗಳನ್ನು ಪಂಗೊಂಗ್ ತ್ಸೋ ಸರೋವರದ ಗಡಿ ಭಾಗದಲ್ಲಿ ನಿಯೋಜನೆ ಮಾಡಿದೆ. ಇದು ಗಡಿಭಾಗದಲ್ಲಿನ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ.. ಹಾಗಾಗಿ ಭಾರತದ ಸೇನೆಯೂ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜನೆ ಮಾಡಿದೆ.
ಗಡಿಭಾಗದಲ್ಲಿ ಚೀನಾದ ನಡೆ ಮಿತಿ ಮೀರಿದ್ದು, ಭಾರತದ ಮಲಾಕ್ಕಾ ಜನಸಂಧಿಯ ಬಳಿಯೂ ಭಾರತೀಯ ಸೇನೆ ತನ್ನ ನೌಕಾಪಡೆಯನ್ನು ನಿಯೋಗಜಿಸಿದ್ದು, ಅಗತ್ಯವಿದ್ದರೆ ಇಂಡೋ-ಫೆಸಿಫಿಕ್ ಭಾಗದಲ್ಲಿಯೂ ಭಾರತೀಯ ನೌಕಾಪಡೆಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಚೀನಾ ತನ್ನ ಆಕ್ರಮಣಕಾರಿ ದಾಳಿಯನ್ನು ಮುಂದುವರಿಸಿದ್ದೇ ಆದಲ್ಲಿ, ಪ್ರತಿದಾಳಿ ನಡೆಸಲು ಹಾಗೂ ಕಾರ್ಯಾಚರಣೆಯನ್ನು ಕೈಗೊಳ್ಳಲು ನೌಕಾಪಡೆಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಲಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಚೀನಾಕ್ಕೆ ತಿರುಗೇಟು ನೀಡಲು ಮುಂದಾಗಿರುವ ಭಾರತೀಯ ಸೇನೆ ಗಲ್ವಾನ್ ಬಳಿ ವಾಯುಪಡೆ ನಿಯೋಜಿಸುವುದಕ್ಕೂ ನಿರ್ಧಾರ ಕೈಗೊಂಡಿದೆ.
ಯುಭಯ ರಾಷ್ಟ್ರಗಳು ತಮ್ಮ ಸೇನೆಯನ್ನು ಹೆಚ್ಚಿಸುತ್ತಿರುವುದರಿಂದ ಗಡಿ ಭಾಗದಲ್ಲಿ ಪರಿಸ್ಥಿತಿಯು ಸೂಕ್ಷ್ಮತೆಯನ್ನು ಪಡೆದುಕೊಂಡಿದ್ದು, ಮತ್ತೆ ದಾಳಿ ನಡೆಯಬಹುದಾದ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.