ಹತ್ರಾಸ್ ಸಂತ್ರಸ್ತೆಯ ಮೃತದೇಹ ಸುಟ್ಟು, ಅತ್ಯಾಚಾರ ನಡೆದಿರುವುದು ಖಚಿತವಾಗಿಲ್ಲ ಎಂದ ಯುಪಿ ಪೊಲೀಸ್
ನಾಲ್ವರು ಕಾಮಕರು ತಮ್ಮ ಕಾಮವಾಂಛೆಗೆ ಬಲಿಯಾದ ಹತ್ರಾಸ್ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ಆಲಿಘಡ್ ಆಸ್ಪತ್ರೆಯ ವೈದ್ಯಕೀಯ ವರದಿಯಲ್ಲಿ ಖಚಿತವಾಗಿಲ್ಲ ಎಂದು ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ವಿರ್ ಹೇಳಿದ್ದಾರೆ.
ಸೆಪ್ಟೆಂಬರ್ 14ರಂದು ದಲಿತ ಯುವತಿಯ ಮೇಲೆ ಮೇಲ್ಜಾತಿಯ ನಾಲ್ವರು ಸವರ್ಣೀಯರು ಅತ್ಯಾಚಾರಗೈದು, ಆಕೆಯ ನಾಲಿಗೆ ಕತ್ತರಿಸಿ ಕ್ರೌರ್ಯ ಎಸಗಿದ್ದರು. ಆಸ್ಪತ್ರೆಯಲ್ಲಿ ಮೃತಪಟ್ಟ ಆಕೆಯ ದೇಹವನ್ನು ಪೊಲೀಸರು ಆಕೆಯ ಕುಟುಂಬದವರಿಗೆ ನೀಡದೇ ಅವರನ್ನಲ್ಲೇ ಮನೆಯಲ್ಲಿ ಕೋಡಿಟ್ಟು, ಯುವತಿಯ ಮೃತದೇಹವನ್ನು ಸುಟ್ಟುಹಾಕಿದ್ದಾರೆ. ಪ್ರಕರಣ ನಡೆದು ಎರಡು ವಾರಗಳ ನಂತರ ಅತ್ಯಾಚಾರ ನಡೆದಿರುವುದೇ ಖಚಿತವಾಗಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ಆದರೆ, ಈಗ ಯುವತಿಗೆ ಗಾಯಗಳಾಗಿರುವ ಬಗ್ಗೆ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಬಲವಂತದ ಲೈಂಗಿಕ ಕಿರುಕುಳದ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿಲ್ಲ. ವೈದ್ಯರು ಕೂಡಾ ಅತ್ಯಾಚಾರದ ಬಗ್ಗೆ ಖಚಿತಪಡಿಸಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಾಗಿ ಕಾಯುತ್ತಿದ್ದೇವೆ ಎಂದು ವಿಕ್ರಾಂತ್ ವಿರ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ದೆಹಲಿಯ ಸಪ್ಧರ್ ಜಂಗ್ ಆಸ್ಪತ್ರೆಯಲ್ಲಿ 19 ವರ್ಷದ ಯುವತಿ ಮೃತಪಡುವ ಮುನ್ನ ಆಕೆಗೆ ಆಲಿಘಡ ಮುಸ್ಲಿಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ನೀಡಿದ ಆಸ್ಪತ್ರೆಯ ವರದಿಗಳಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಹೇಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆಯ ತಂದೆಯೊಂದಿಗೆ ಪೋನ್ನಲ್ಲಿ ಮಾತನಾಡಿರುವ ಸಿಎಂ ಯೋಗಿ ಆಧಿತ್ಯಾನಾಥ್, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಭಟನೆಗಳನ್ನು ಮಾಡದಂತೆ ಆಕೆಯ ತಂದೆಯಿಂದ ಪತ್ರ ಬರೆಸಿಕೊಂಡಿದ್ದಾರೆ.
ಹತ್ರಾಸ್ ಗಡಿ ಭಾಗವನ್ನು ಮುಚ್ಚಲಾಗಿದ್ದು, ಜಿಲ್ಲೆಯಲ್ಲಿ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಾಧ್ಯಮಗಳಿಗೂ ಕೂಡಾ ಅವಕಾಶ ನಿರಾಕರಿಸಲಾಗಿದೆ.
ಸಂತ್ರಸ್ಥೆಯ ಮೃತದೇಹವನ್ನೂ ಸುಟ್ಟು, ಈಗ ಅತ್ಯಾಚಾರ ನಡೆದಿರುವುದೇ ಖಾತ್ರಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಅತ್ಯಾಚಾರ ನಡೆದು 2 ವಾರಗಳು ಕಳೆದ ನಂತರ ಅತ್ಯಾಚಾರ ನಡೆದಿರುವುದೇ ಖಾತ್ರಿಯಾಗಿಲ್ಲ ಎನ್ನುತ್ತಿರುವ ಸರ್ಕಾರ ಅತ್ಯಾಚಾರಿಗಳ ರಕ್ಷಣೆಗೆ ಇಳಿದಿದೆ. ಅತ್ಯಾಚಾರಗಳನ್ನು ತಡೆಗಟ್ಟಲಾಗದ ಸರ್ಕಾರ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಿ, ಪ್ರತಿಭಟನೆಗಳನ್ನು ನಡೆಸದಂತೆ ತಡೆಯುತ್ತಿದೆ. ಮಹಿಳೆಯರಿಗೆ, ದಲಿತರಿಗೆ ರಕ್ಷಣೆಯಿಲ್ಲದ ರಾಜ್ಯದಲ್ಲಿ ಅತ್ಯಾಚಾರಿಗಳನ್ನು ರಕ್ಷಿಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
Read Also: ಹತ್ರಾಸ್ ಆಕ್ರೋಶದ ಮಧ್ಯೆ : ಯುಪಿಯಲ್ಲಿ ಮತ್ತೋರ್ವ ಯುವತಿ ಮೇಲೆ ಗ್ಯಾಂಗ್ ರೇಪ್!