ಮನಿಷಾಳನ್ನು ಸುಟ್ಟ ಜಾಗದಿಂದ ಒಂದಿಡಿ ಮಣ್ಣು ತಂದು ಸ್ಮಾರಕ ನಿರ್ಮಿಸೋಣ: ದೇವನೂರು ಮಹಾದೇವ

ಹತ್ರಾಸ್‌ ಯುವತಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ನಿನ್ನೆ ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಹಿದ ದೇವನೂರು ಮಹಾದೇವ ಅವರು ಮನಿಷಾಳನ್ನು ಸುಟ್ಟ ಜಾಗದಿಂದ ಒಂದಿಡಿ ಮಣ್ಣು ತಂದು ಸ್ಮಾರಕ ನಿರ್ಮಿಸೋಣ ಎಂದು ಹೇಳಿದ್ದಾರೆ. ದೇವನೂರು ಮಹಾದೇವ ಅವರ ಭಾಷಣದ ಪೂರ್ಣಪಾಠ ಈ ಕೆಳಗಿನಂತಿದೆ.

“ನೆನಸಿಕೊಳ್ಳಲೂ ಬೀಭತ್ಸ- ಉತ್ತರ ಪ್ರದೇಶದ ಹಾಥರಸ್‌ನ ಮನೀಷಾಳ ಸಾವು. ಇದು, ಸಾವಲ್ಲ. ಸಾಕ್ಷ್ಯ ನಾಶಕ್ಕಾಗಿ ಉತ್ತರಪ್ರದೇಶ ಸರ್ಕಾರದ ಒಳಿಚ್ಛೆಗೆ ತಕ್ಕಂತೆ ಅಲ್ಲಿನ ಪೊಲೀಸ್ ವ್ಯವಸ್ಥೆ ನಡೆಸಿದ ಕೊಲೆ ಇದು, ಸಾವಲ್ಲ.

ನೋಡಿ, ಮನೀಷಾಳು ಅತ್ಯಾಚಾರಕ್ಕೆ ಒಳಗಾಗಿ ಅವಳ ಮನಸ್ಸು ದೇಹ ಜರ್ಝರಿತವಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದವಳನ್ನು ಪೊಲೀಸ್ ಸ್ಟೇಷನ್‌ಗೆ ಕರೆತಂದರೆ ಅಲ್ಲಿ ಏಳೆಂಟು ಗಂಟೆ ಕಾಲ ಹೊರಗೆ ಕೂರಿಸುತ್ತಾರೆ. ಕಾನೂನಿನಂತೆ ಅವಳನ್ನು ರೇಫ್ ಕ್ರೈಸಿಸ್ ಸೆಂಟರ್‌ಗೆ ಕರೆದುಕೊಂಡು ಹೋಗುವುದಿಲ್ಲ. ಹಾಗೇ ಕಾನೂನಿನಂತೆ 24 ಗಂಟೆ ಒಳಗೆ ವೀರ್‍ಯಾಣು (Sperm) ಪತ್ತೆ ಪರೀಕ್ಷೆಯನ್ನೂ ಮಾಡಿಸುವುದಿಲ್ಲ. ಬದಲಾಗಿ ವಿಳಂಬಿಸಿ, ಇದ್ದಿರಬಹುದಾದ ವೀರ್‍ಯಾಣು ಸಾಕ್ಷ್ಯವು ನಾಶವಾದ ಮೇಲೆ ವೀರ್‍ಯಾಣು ಪತ್ತೆ ಪರೀಕ್ಷೆ ಮಾಡಿಸುತ್ತಾರೆ.

ಮನೀಷಾ ಸಾಯುವ ಮೊದಲು (victim’s dying declaration) ತನ್ನ ಮೇಲೆ ಅತ್ಯಾಚಾರವಾಯ್ತು ಎಂದು ಹೇಳಿದ್ದರೂ ಕಾನೂನು ರೀತ್ಯ ಇದೇ ಪ್ರಬಲ ಸಾಕ್ಷಿಯಾಗಿದ್ದರೂ ಇದನ್ನು ಪರಿಗಣಿಸದ ಪೊಲೀಸ್ ವರಿಷ್ಠಾಧಿಕಾರಿ ’ಅತ್ಯಾಚಾರವಾಗಿಲ್ಲ, ಯಾಕೆಂದರೆ ಪರೀಕ್ಷೆಯಲ್ಲಿ ವೀರ್‍ಯಾಣು ಪತ್ತೆ ಆಗಿಲ್ಲ’ ಅನ್ನುತ್ತಾನೆ. ಜೊತೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿಸುತ್ತಾರೆ. ಕುಟುಂಬಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಧಮಕಿ ಹಾಕುತ್ತಾನೆ. ಇದನ್ನೆಲ್ಲಾ ನೋಡಿದರೆ ಮನೀಷಾಳು ಬದುಕಿಬಿಟ್ಟರೆ ಅವಳೇ ಸಾಕ್ಷಿಯಾಗಿಬಿಡುತ್ತಾಳೆ ಎಂಬ ಕಾರಣಕ್ಕೆ ಅವಳು ಸಾಯಲಿ ಅಂತ ಏನೇನೆಲ್ಲಾ ಮಾಡಬೇಕೊ ಅದನ್ನೆಲ್ಲಾ ಉತ್ತರ ಪ್ರದೇಶದ ಪೊಲೀಸರು ಹಾಗೂ ಆಡಳಿತ ನಿರ್ವಹಣೆ ಮಾಡಿದೆ ಅನ್ನಿಸಿಬಿಡುತ್ತೆ. ಹೌದು, ಮನೀಷಾಳ ಸಾವು ಸರ್ಕಾರಿ ಕೊಲೆ.

ಇದನ್ನೂ ಓದಿ: ದಲಿತ ಮುಖಂಡ ಶಕ್ತಿ ಮಲಿಕ್ ಹತ್ಯೆ ಪ್ರಕರಣ : ಆರ್‌ಜೆಡಿ ಮುಖಂಡರಾದ ತೇಜಶ್ವಿ, ತೇಜ್ ಪ್ರತಾಪ್ ವಿರುದ್ಧ ಎಫ್‌ಐಆರ್!

ಮತ್ತೂ ಅಮಾನುಷ ಅಂದರೆ, ಹೀಗೆ ಮನೀಷಾಳನ್ನು ಸಾಯಿಸಿದ ಮೇಲೂ ಅವಳ ದೇಹದ ಸಾಕ್ಷ್ಯ ಮರು ಮರಣೊತ್ತರ ಪರೀಕ್ಷೆಗೆ ಸಿಗದಂತೆ ಮಾಡಲು ಪೊಲೀಸರು ಮನೀಷಾಳ ದೇಹವನ್ನು ರಾತ್ರಿ 1:30 ಕ್ಕೆ ಅವಳ ಹುಟ್ಟೂರಿಗೆ ತಂದು, ಹೆತ್ತವರಿಗೆ ಅಂತ್ಯ ಸಂಸ್ಕಾರಕ್ಕೆ ದೇಹವನ್ನು ಒಪ್ಪಿಸದೆ, ಅಷ್ಟೇ ಅಲ್ಲ ತಮ್ಮ ಮಗಳ ಮುಖವನ್ನು ನೋಡಲೂ ಹೆತ್ತವರಿಗೆ ಅವಕಾಶ ನೀಡದೆ, ’ಮಗಳ ಮುಖಕ್ಕೆ ಪದ್ಧತಿಯಂತೆ ಅರಶಿನ ಹಚ್ಚಲಾದರೂ ಅವಕಾಶ ಕೊಡಿ’ ಎಂದು ತಾಯಿ ಬೇಡಿದರೂ ಲೆಕ್ಕಿಸದೆ ಪೊಲೀಸರು ರಾತ್ರಿ 2:30 ಕ್ಕೆ ಮನೀಷಾಳ ದೇಹವನ್ನು ಸುಟ್ಟು ಬೂದಿ ಮಾಡುತ್ತಾರೆ. ಹೀಗಿರುವಾಗ ನ್ಯಾಯ ಸಿಗಬಹುದೆ? ನ್ಯಾಯ ಸಿಕ್ಕು ಮನೀಷಾಳ ಹೆತ್ತವರಿಗೆ ಸಾಂತ್ವನ ಸಿಗಬಹುದೆ? ಹೇಳುವುದು ಕಷ್ಟ, ಕಷ್ಟ. ‘ಬಿಜೆಪಿಸೆ ಬೇಟಿ ಬಚಾವೊ’ ಮಾತು ಈಗ ಚಾಲ್ತಿಗೆ ಬರುತ್ತಿದೆ.

ಆಯ್ತು, ನಮ್ಮ ನ್ಯಾಯ ವಿತರಣಾ ಪದ್ಧತಿಯನ್ನು ನೋಡಿದರೆ, ಆತಂಕ ಆಗುತ್ತದೆ. ಇತ್ತೀಚಿನ ಬಾಬ್ರಿ ಮಸೀದಿ ತೀರ್ಪನ್ನು ನೋಡಿದರೆ, ಮಸೀದಿ ಧ್ವಂಸದ ಸಂದರ್ಭದಲ್ಲಿ ಆರೋಪಿಗಳು ಧ್ವಂಸದ ಸ್ಥಳದಲ್ಲೇ ಇದ್ದರೂ ಅವರು ಖುಲಾಸೆಯಾಗುತ್ತಾರೆ. ಇನ್ನೊಂದು ಕಡೆ ಎಲ್ಗಾರ್ ಪರಿಷತ್ ಸಭೆಯಲ್ಲಿ ಯಾವುದೇ ಹಿಂಸೆ ನಡೆಯದಿದ್ದರೂ ಜೊತೆಗೆ ಆನಂದ್ ತೇಲ್ತುಂಬ್ಡೆ ಮತ್ತಿತರರು ಆ ಸಭೆಯಲ್ಲಿ ಇಲ್ಲದಿದ್ದರೂ ಅವರನ್ನು ಆರೋಪಿಗಳನ್ನಾಗಿಸಿ ವಿಚಾರಣೆ ಮಾಡದೆ ಬಂಧಿಸಿಡಲಾಗಿದೆ. ಇಂದಿನ ಕಾನೂನು ವ್ಯವಸ್ಥೆ, ನ್ಯಾಯಾಂಗ ವಿತರಣೆ ವ್ಯವಸ್ಥೆ ಹೆಚ್ಚೂಕಮ್ಮಿ ಪುರಾತನ ಕಾಲದ ಅನ್ಯಾಯದ ’ಮನುಧರ್ಮ ಶಾಸ್ತ್ರ’ದ ಜಾತಿ ಅಂತಸ್ಥಿಗೆ ತಕ್ಕಂತೆ ಶಿಕ್ಷೆ ಎಂಬಂತಿದೆ. ಭಾರತ ಯಾವ ಕಡೆಗೆ ಚಲಿಸುತ್ತಿದೆ? ಹಿಂದಕ್ಕೊ? ಮುಂದಕ್ಕೊ? ಇಂದು ನಮ್ಮ ಕಾನೂನು ವ್ಯವಸ್ಥೆ ಹಾಗೂ ನಮ್ಮ ನ್ಯಾಯ ವಿತರಣಾ ವ್ಯವಸ್ಥೆಗಳು- ನ್ಯಾಯದ ಮುಂದೆ ಅಪರಾಧಿಗಳಾಗಿ ಕಟಕಟೆಯಲ್ಲಿ ನಿಂತಿವೆ. ಭಾರತ ದಿಕ್ಕು ತಪ್ಪುತ್ತಿದೆ.

ಕೊನೆಯದಾಗಿ ನನ್ನದೊಂದು ಮನವಿ: ಕಂದ ಮನೀಷಾಳನ್ನು ಎಲ್ಲಿ ಸುಟ್ಟರೋ ಅಲ್ಲಿಂದ ಅಥವಾ ಅವಳು ನಡೆದಾಡಿದ ಭೂಮಿಯಿಂದ ಒಂದು ಹಿಡಿಮಣ್ಣನ್ನು ತಂದು ಒಂದು ಸ್ಮಾರಕ ಸ್ಥಳವನ್ನಾಗಿಸಿ ಅಲ್ಲೊಂದು ಅವಳ ಪ್ರತಿಮೆ ರೂಪಿಸಿ ಅವಳ ಹೆತ್ತ ತಾಯಿಯ ಈಡೇರದ ಕೊನೆಯಾಸೆಯನ್ನು, ಮನೀಷಾಳ ಪ್ರತಿಮೆಯ ಕೆನ್ನೆಗಳಿಗೆ ನಾವೆಲ್ಲರೂ ಅರಿಶಿನ ಹಚ್ಚುವಂತಾದರೆ ನಾವೂನು ಮನೀಷಾಳಿಗೆ ಮರಣೋತ್ತರ ಗೌರವ ಸಲ್ಲಿಸಿದಂತಾಗಬಹುದೆ? ಇದರಿಂದ ಮನೀಷಾಳ ಹೆತ್ತವರಿಗೆ ಹಾಗೂ ತಾಯಿ ಭಾರತಮಾತೆಗೆ ಕಿಂಚಿತ್ತಾದರೂ ಸಮಾಧಾನವಾಗಬಹುದೆ? ಈ ಪ್ರಶ್ನೆಯನ್ನು ಭಾರತದ ಪ್ರಜ್ಞೆಯ ಮುಂದಿಡುತ್ತಿರುವೆ.”


ಇದನ್ನೂ ಓದಿ: ಐಎಎಸ್‌ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾ ಕಾಂಗ್ರೆಸ್‌ ಸೇರ್ಪಡೆ: RRನಗರದಲ್ಲಿ ಸ್ಪರ್ಧಿಸುವ ಸಾಧ್ಯತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights