ಮಹಿಳೆಯರಿಗಿಲ್ಲ ನ್ಯಾಯ: ಅತ್ಯಾಚಾರದ ದೂರು ದಾಖಲಿಸಲು 900KM ಪ್ರಯಾಣಿಸಿದ ಯುವತಿ!
ಉತ್ತರ ಪ್ರದೇಶದ ಹತ್ರಾಸ್ನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವ ನಡುವೇಯೂ ಹಲವು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಈ ಮಧ್ಯೆ ಉತ್ರರ ಪ್ರದೇಶದ ಲಖನೌನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿದೆ. ಅತ್ಯಾಚಾರಕ್ಕೆ ಒಳಗಾದ 22 ವರ್ಷದ ನೇಪಾಳಿ ಯುವತಿ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ದೂರು ನೀಡಲು 900 ಕಿ.ಮೀ ದೂರದಲ್ಲಿರುವ ನಾಗ್ಪುರಕ್ಕೆ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸಿದ್ದಾಳೆ..
ಎರಡು ವರ್ಷಗಳ ಹಿಂದೆ ಕೆಲಸ ಅರಸಿ ಭಾರತಕ್ಕೆ ಬಂದಿದ್ದ ಯುವತಿಯ ಮೇಲೆ ಆಕೆಯ ಪರಿಚಯಸ್ಥನೇ ಆಗಿದ್ದ ಪ್ರವೀಣ್ ರಾಜ್ಪಾಲ್ ಯಾದವ್ ಎಂಬ ವ್ಯಕ್ತಿ ಅತ್ಯಾಚಾರ ನಡೆಸಿದ್ದ. ತನ್ನ ಮೊಬೈಲ್ನಲ್ಲಿ ಯುವತಿಯ ಆಕ್ಷೇಪಾರ್ಹ ಚಿತ್ರಗಳನ್ನು ಸೆರೆಹಿಡಿದುಕೊಂಡಿದ್ದಲ್ಲದೆ ವಿಡಿಯೊ ಕೂಡ ಚಿತ್ರಿಸಿಕೊಂಡಿದ್ದು, ಪೊಲೀಸರಿಗೆ ದೂರ ನೀಡದಂತೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ.
ಕಿರುಕುಳ ತಾಳಲಾರದೇ ಸಂತ್ರಸ್ತೆಯು ಲಖೌನದ ಠಾಣೆಯೊಂದರಲ್ಲಿ ದೂರು ನೀಡಲು ಮುಂದಾಗಿದ್ದಾಳೆ. ಆದರೆ ಆರೋಪಿ ಪ್ರವೀಣ್ ಯಾದವ್ ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದರಿಂದ, ಪೊಲೀಸರು ದೂರು ದಾಖಲಿಸುವ ಬದಲು ರಾಜಿ ಮಾಡಿಕೊಳ್ಳಲು ಸೂಚಿಸಿದ್ದಾರೆ. ಕೊನೆಗೆ ನಾಗ್ಪುರದಲ್ಲಿ ವಾಸಿಸುತ್ತಿರುವ ತನ್ನ ನೇಪಾಳಿ ಸ್ನೇಹಿತೆ ಬಳಿಗೆ ಹೋಗುವುದು ಸೂಕ್ತವೆಂದು ತಿಳಿದು ಆರೋಪಿಯ ಕಣ್ತಪ್ಪಿಸಿ ಉತ್ತರ ಪ್ರದೇಶದ ಲಖನೌದಿಂದ ಮಹಾರಾಷ್ಟ್ರದ ನಾಗಪುರಕ್ಕೆ ಬಂದು ಅಲ್ಲಿನ ಕೊರಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Fact Check: ಬಿಜೆಪಿ ನಾಯಕರ ಪಕ್ಕದಲ್ಲಿ ನಿಂತಿರುವ ಈ ವ್ಯಕ್ತಿ ಹತ್ರಾಸ್ ಅತ್ಯಾಚಾರ ಆರೋಪಿಗಳ ತಂದೆ ಅಲ್ಲ..
ಸ್ನೇಹಿತೆಯೊಬ್ಬರ ಮೂಲಕ ಆರೋಪಿ ಯಾದವ್ ಸಂತ್ರಸ್ತೆಗೆ ಈ ಹಿಂದೆ ಪರಿಚಿತರಾಗಿದ್ದಾರೆ. ಯಾದವ್ ಆಕೆಯ ಆಕ್ಷೇಪಾರ್ಯ ಚಿತ್ರಗಳನ್ನು ಸೆರೆಹಿಡಿದು, ಆಕೆ ತನ್ನೊಂದಿಗೆ ಸಹಕರಿಸದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಸಂತ್ರಸ್ತೆಯನ್ನು ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಅದೆಲ್ಲವನ್ನು ವಿಡಿಯೋ ಮಾಡಿಕೊಂಡು ನೇಪಾಳದ ಕಠ್ಮಂಡುವಿನಲ್ಲಿರುವ ಆಕೆಯ ಕುಟುಂಬಕ್ಕೆ ತಿಳಿಯಲು ಎಂದು ಆಕೆಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪ್ರತಿ 5 ಗಂಟೆಗೊಮ್ಮೆ ಒಂದು ಅತ್ಯಾಚಾರ, ದಿನಕ್ಕೆ ಒಂದು ಹುಡುಗಿ ಕೊಲೆಗೆ ಸಾಕ್ಷಿಯಾದ ಯುಪಿ!
ಕೊರಾಡಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ವಜೀರ್ ಶೇಖ್ ಮಾತನಾಡಿ, ಯುವತಿ ದೂರು ನೀಡಲು ಕೊರಾಡಿಯ ಮಹಾದುಲಕ್ಕೆ ಬಂದಿದ್ದಾಳೆ. “ಮಹಿಳೆ ಆರಂಭದಲ್ಲಿ ಲಖನೌದಲ್ಲಿ ದೂರು ದಾಖಲಿಸಲು ಬಯಸಿದ್ದಳು ಆದರೆ ಪೊಲೀಸರು ರಾಜಿ ಮಾಡಿಕೊಳ್ಳಲು ಸೂಚಿಸಿದ್ದರಿಂದ ಯುವತಿ ಯುಪಿ ಪೊಲೀಸರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾಳೆ” ಎಂದಿದ್ದಾರೆ.
ಕೊರಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಾಸವಾಗಿರುವ ಲಖನೌದಲ್ಲಿ ಈ ಘಟನೆ ನಡೆದಿದ್ದರಿಂದ ಅದನ್ನು ಈಗ ಉತ್ತರ ಪ್ರದೇಶ ಪೊಲೀಸರಿಗೆ ರವಾನಿಸಲಾಗಿದೆ ಎಂದು ನಗರ ಪೊಲೀಸ್ ಮುಖ್ಯಸ್ಥ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಜಿಲ್ಲಾಧಿಕಾರಿಯೇ ಖಳನಾಯಕ: ಆತ ಮಾಡಿದ್ದೇನು ಗೊತ್ತೇ?