ದೇಶದಲ್ಲಿ 2.08 ಲಕ್ಷ ಹೊಸ ಕೊರೊನಾ ಕೇಸ್ : 4,100 ಕ್ಕೂ ಹೆಚ್ಚು ಮಂದಿ ಬಲಿ!
ದೇಶದಲ್ಲಿ ಮತ್ತೆ 2.08 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು 4,000 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಕೊರೊನಾ ತಡೆಗೆ ಬಹುತೇಕ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಹೀಗಿದ್ದರೂ ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಾಣಿಸದೇ ಇರುವುದು ತಜ್ಞರಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ಕೊರೊನಾ ಮೂರನೇ ಅಲೆ ಬಗ್ಗೆ ತಜ್ಞರು ಪ್ರಸ್ತಾಪಿಸಿದ್ದಾರೆ. ಆದರೆ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಬಾರದೇ ಹೋದಲ್ಲಿ ಕೊರೊನಾ ಮೂರನೇ ಅಲೆಯೂ ಗಂಭೀರ ಪರಿಣಾಮ ಬೀರಬಹುದು. ಹೀಗಾಗಿ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಕೊರೊನಾ ಮಾತ್ರ ನಿಯಂತ್ರಣಕ್ಕೆ ಬರುವಂತೆ ಕಾಣಿಸುತ್ತಿಲ್ಲ.
ಭಾರತ ಕಳೆದ 24 ಗಂಟೆಗಳಲ್ಲಿ 2,08,921 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 4,157 ಸಾವುಗಳನ್ನು ವರದಿ ಮಾಡಿದೆ. ಇದರೊಂದಿಗೆ ದೇಶದ ಒಟ್ಟಾರೆ ಪ್ರಕರಣಗಳ ಸಂಖ್ಯೆ 2,71,57,795 ಕ್ಕೆ ಏರಿದರೆ, ಸಾವಿನ ಸಂಖ್ಯೆ ಪ್ರಸ್ತುತ 3,11,388 ರಷ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದ ಸಕ್ರಿಯ ಪ್ರಕರಣಗಳು 24.95 ಲಕ್ಷಕ್ಕೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ 2,95,955 ರೋಗಿಗಳು ಮಾರಣಾಂತಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೊರೋನವೈರಸ್ ಲಸಿಕೆಗಳ ತೀವ್ರ ಕೊರತೆಯನ್ನು ಭಾರತ ಎದುರಿಸುತ್ತಿರುವುದರಿಂದ, ಯುಎಸ್ ತಯಾರಕರಾದ ಮಾಡರ್ನಾ ಮತ್ತು ಫಿಜರ್ ಸ್ವಲ್ಪ ಪರಿಹಾರವನ್ನು ತರುವ ನಿರೀಕ್ಷೆಯಿದೆ. ಮಾಡರ್ನಾ ತನ್ನ ಸಿಂಗಲ್ ಡೋಸ್ ಲಸಿಕೆಯನ್ನು ಮುಂದಿನ ವರ್ಷದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದು, ಸಿಪ್ಲಾ ಸೇರಿದಂತೆ ಭಾರತೀಯ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.