“ಸಿದ್ದಗಂಗಾ ಸ್ವಾಮಿಗಳಂತೆ ನಡೆದಾಡುವ ದೇವರಾಗಿ ನಡೆದಾಡುವ ರಾಜಕಾರಣಿಗಳಾಗಬೇಡಿ” ಹೆಚ್ ವಿಶ್ವನಾಥ್..!
‘ಸಿದ್ದಗಂಗಾ ಸ್ವಾಮಿಗಳನ್ನು ನಾವು ನಡೆದಾಡುವ ದೇವರು ಎಂದು ಕರೆಯುತ್ತೇವೆ. ನೀವು ಕೂಡ ನಡೆದಾಡುವ ದೇವರಾಗಿ ನಡೆದಾಡುವ ರಾಜಕಾರಣಿಗಳಾಗಬೇಡಿ’ ಎಂದು ಸಿಎಂ ಬದಲಾವಣೆ ಬೇಡ ಎನ್ನುವ ಮಠಾಧೀಶರಿಗೆ ಎಂಎಲ್ಸಿ ಹೆಚ್. ವಿಶ್ವನಾಥ್ ಮನವಿ ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಹೆಚ್ ವಿಶ್ವನಾಥ್, ” ಕೊರೊನಾ ಸಮಯದಲ್ಲಿ ಯಾವ ಸ್ವಾಮಿಗಳು ಹೊರಗಡೆ ಬರಲಿಲ್ಲ. ಜನರ ಸಮಸ್ಯೆಗಳನ್ನು ಕೇಳದೆ ಬಾಗಿಲು ಹಾಕಿಕೊಂಡರು. ಈಗ ಯಾಕೆ ಬಂದ್ರು? ಮಠ ಮಾನ್ಯಗಳು ರಾಜಕೀಯ ಕೇಂದ್ರವಲ್ಲ, ಮಠ ಧರ್ಮಾಧಿಕಾರಿಗಳು ಸಮಾಜದ ಪರವಾಗಿರಬೇಕೇ ಹೊರತು ರಾಜಕಾರಣದ ಪರವಾಗಿರಬಾರದು. ಸಿದ್ದಗಂಗಾ ಸ್ವಾಮಿಗಳನ್ನು ನಾವು ನಡೆದಾಡುವ ದೇವರು ಎಂದು ಕರೆಯುತ್ತೇವೆ. ನೀವು ಕೂಡ ನಡೆದಾಡುವ ದೇವರಾಗಿ ನಡೆದಾಡುವ ರಾಜಕಾರಣಿಗಳಾಗಬೇಡಿ” ಎಂದು ಮಠಾಧೀಶರ ವಿರುದ್ಧ ಹಳ್ಳಿಹಕ್ಕಿ ಕಿಡಿ ಕಾರಿದ್ದಾರೆ.
‘ಎಲ್ಲಾ ಸಮೂದಾಯಕ್ಕೂ ಮಠಗಳಿವೆ. ಜನಸಾಮಾನ್ಯರು ದಾರಿ ತಪ್ಪಿದಾಗ ಎಚ್ಚರಿಸುವ ಮಠಾಧೀಶರು ಏಕ ವ್ಯಕ್ತಿ ನಾಯಕತ್ವವನ್ನು ಬೆಂಬಲಿಸುವುದು ಎಷ್ಟು ಸರಿ. ಅಧಿಕಾರಕ್ಕಾಗಿ ಧರ್ಮಾಧಿಕಾರಿಗಳನ್ನು ಬಳಸಿಕೊಳ್ಳುತ್ತಿರುವುದು ಶೋಭೆ ತರುವಂತದ್ದಲ್ಲ. ಯಡಿಯೂರಪ್ಪ ಬದಲಾವಣೆಗೆ ಭ್ರಷ್ಟಾಚಾರ ಕಾರಣ. ಹೀಗಾಗಿ ಇದನ್ನು ಬೆಂಬಲಿಸುವುದು ಬೇಡ’ ಎಂದು ವಿಶ್ವನಾಥ್ ಮನವಿ ಮಾಡಿಕೊಂಡಿದ್ದಾರೆ.
ನಿಮ್ಮ ಬಗ್ಗೆ ನಮಗೆ ಅಭಿಮಾನ ಇದೆ. ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ. ಆದರೆ ಸ್ವಾಮಿಜಿಗಳು ಸಂವಿಧಾನಕ್ಕಿಂತ ದೊಡ್ಡವರು ಎಂದು ಭಾವಿಸುತ್ತಿದ್ದಾರೆ ಎಂದು ಎಂದು ಸಿಎಂ ಬದಲಾವಣೆ ಬೇಡ ಎನ್ನುವ ಮಠಾಧೀಶರ ವಿರುದ್ಧ ವಿಶ್ವನಾಥ್ ಕೆಂಡ ಕಾರಿದ್ದಾರೆ.