ಸ್ನೇಹಿತೆಯನ್ನು ಭೇಟಿ ಮಾಡಿದ ಯುವಕ; ಯುವತಿಯಿಂದಲೇ ಸ್ನೇಹಿತನಿಗೆ ಹೊಡೆಸಿ ಹಲ್ಲೆ ಮಾಡಿದ ಬಜರಂಗದಳದ ಕಾರ್ಯಕರ್ತರು!
ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಭೇಟಿ ಮಾಡಿದ್ದಕ್ಕಾಗಿ, ಬಜರಂಗದಳದ ಕಾರ್ಯಕರ್ತರು ಆತನಿಗೆ ಯುವತಿಯಿಂದಲೇ ಬಲವಂತವಾಗಿ ಚಪ್ಪಲಿಗಳಿಂದ ಹೊಡೆಸಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
ಹಿಂದೂ ಧರ್ಮದ ಯುವತಿ ಮತ್ತು ಮುಸ್ಲಿಂ ಧರ್ಮದ ಯುವಕನಾದ ಸಲ್ಮಾನ್, ಇಬ್ಬರೂ ಸ್ನೇಹಿತರಾಗಿದ್ದು, ಸೆ.17ರ ಶುಕ್ರವಾರ ಜಿಲ್ಲೆಯ ಸಾಕೇತ್ನ ಗೋಲ್ ಮಾರ್ಕೆಟ್ ಪಾರ್ಕ್ನಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಬಜರಂಗದಳದ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದ್ದು, ಯುವತಿಯಿಂದಲೇ ಯುವಕನಿಗೆ ಹೊಡೆಸಿದ್ದಾರೆ. ಮಾತ್ರವಲ್ಲದೆ, ದುಷ್ಕರ್ಮಿಗಳು ಮರವೊಂದರ ಕಟ್ಟೆಯ ಮೇಲೆ ಯುವಕನನ್ನು ಬಗ್ಗಿ ಕಿವಿ ಹಿಡಿದು ನಿಲ್ಲುವಂತೆ ಮಾಡಿ ದೌರ್ಜನ್ಯ ಎಸಗಿದ್ದಾರೆ.
ಈ ಬಗ್ಗೆ ಯುವತಿ ದೂರು ನೀಡಿದ್ದು, “ಶುಕ್ರವಾರ ಸಂಜೆ ನಾನು ಮತ್ತು ನನ್ನ ಇನ್ನೊಬ್ಬ ಸ್ನೇಹಿತೆ ಗೋಲ್ ಮಾರ್ಕೆಟ್ಗೆ ಬಂದಿದ್ದು, ಈ ವೇಳೆ ಸಲ್ಮಾನ್ ಕೂಡಾ ಸಿಕ್ಕಿದ್ದರು. ಈ ವೇಳೆ ನಾವು ಮೂವರೂ ತಂಪು ಪಾನಿಯ ಕುಡಿಯಲು ಅಂಗಡಿಗೆ ತೆರಳಿದ್ದಾಗ ಬಜರಂಗದಳದವರು ಎಂದು ಹೇಳಿಕೊಂಡು ಕೆಲವರು ಆಗಮಿಸಿದ್ದರು. ಅದರಲ್ಲಿಒಬ್ಬನ ಹೆಸರು ಸಚಿನ್ ಸಿರೋಹಿ ಎಂದಾಗಿತ್ತು” ಎಂದು ದೂರಿದ್ದಾರೆ.
ಇದನ್ನೂ ಓದಿ: “ಆರ್ಎಸ್ಎಸ್ ನಿಷೇಧ?” ಎಂಬ ಮೂರು ಪ್ರಹಸನಗಳು!; ಸರ್ಕಾರಗಳು ಸಂಘ-ಸಂಸ್ಥೆಯನ್ನು ಏಕೆ ನಿಷೇಧಿಸುತ್ತವೆ?
“ಅವರು ಬಂದು ನನ್ನ ಮತ್ತು ನನ್ನ ಸ್ನೇಹಿತರ ಹೆಸರು ಕೇಳಿದರು. ನಂತರ ಸ್ನೇಹಿತ ಸಲ್ಮಾನ್ಗೆ ಹಲ್ಲೆ ನಡೆಸಿದ್ದಾರೆ. ನನ್ನೊಂದಿಗೆ ಮತ್ತು ನನ್ನ ಸ್ನೇಹಿತೆಯೊಂದಿಗೂ ಸಲ್ಮಾನ್ಗೆ ಹಲ್ಲೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ. ಮತ್ತೆ ಸಲ್ಮಾನ್ ವಿರುದ್ದ ಪ್ರಕರಣ ದಾಖಲು ಮಾಡುವಂತೆಯು ಒತ್ತಾಯ ಮಾಡಿದ್ದು, ಇಲ್ಲವೆಂದರೆ ಚೆನ್ನಾಗಿರುವುದಿಲ್ಲ ಎಂದು ಬೆದಸಿದ್ದಾರೆ” ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಯುವತಿಯ ಕೈಯಲ್ಲಿ ಚಪ್ಪಲಿಯಿಂದ ಥಳಿಸುವಂತೆ ಬಲವಂತ ಪಡಿಸುವ ವಿಡಿಯೊ ಕೂಡಾ ವೈರಲ್ ಆಗಿದೆ. ವಿಡಿಯೊದಲ್ಲಿ ಯುವತಿ ಹಿಂಜರಿದರೂ ದುಷ್ಕರ್ಮಿಗಳು ಮತ್ತೆ ಮತ್ತೆ ಜೋರಾಗಿ ಥಳಿಸುವಂತೆ ಯುವತಿಗೆ ಬೆದರಿಸುವುದು ದಾಖಲಾಗಿದೆ.
“ಸಿವಿಲ್ ಲೈನ್ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಮೀರತ್ ಪೊಲೀಸ್ ತನ್ನ ಅಧೀಕೃತ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದೆ.
ಇದನ್ನೂ ಓದಿ: ಗೋವಾದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಶೇ.80 ರಷ್ಟು ಉದ್ಯೋಗ ಸ್ಥಳೀಯರಿಗೆ: ಕೇಜ್ರಿವಾಲ್