ಉತ್ತರ ಪ್ರದೇಶದಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು: ಬಿಜೆಪಿ ಮಾಜಿ ಸಂಸದ ಕರೆ!
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಗುಜ್ಜಾರ್ ಸಮುದಾಯಕ್ಕೆ ಅವಮಾನ ಮಾಡಿದೆ. ಹೀಗಾಗಿ, 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಅಧಿಕಾರದಿಂದ ಕೆಳಗಿಸಿ, ಅವರನ್ನು ರಾಜ್ಯದಿಂದ ಹೊರಗಿಡಬೇಕು ಎಂದು ಬಿಜೆಪಿ ಮಾಜಿ ಸಂಸದ ಅವತಾರ್ ಸಿಂಗ್ ಭದಾನ್ ಅವರು ಗುಜ್ವಾರ್ ಸಮುದಾಯಕ್ಕೆ ಕರೆನೀಡಿದ್ದಾರೆ.
ಇತ್ತೀಚೆಗೆ, ಯುಪಿ ಸಿಎಂ ಯೋಗಿ ಆದಿತ್ಯಾನಾಥ್ ಅವರು ದಾದ್ರಿಯ ಕಾಲೇಜಿನಲ್ಲಿ 9 ನೇ ಶತಮಾನದ ರಾಜ ಮಿಹಿರ್ ಭೋಜ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಇದಾದ ನಂತರ, ರಾಜ ಮಿಹಿರ್ ಭೋಜ್ ಅವರ ಪರಂಪರೆಯ ಕುರಿತು ರಜಪೂತ್ ಮತ್ತು ಗುಜ್ಜಾರ್ ಸಮುದಾಯಗಳ ನಡುವೆ ವಿವಾದ ಸೃಷ್ಟಿಯಾಗಿತ್ತು.
ಈ ವಿವಾದದೊಂದಿಗೆ ಬಿಜೆಪಿ ಸರ್ಕಾರವು ಗುಜ್ವಾರ್ ಸಮುದಾಯವನ್ನು ಅವಮಾನಿಸಿದೆ ಎಂದು ಭದಾನ್ ಅವರು ಆರೋಪಿಸಿದ್ಧಾರೆ.
ಗುಜ್ಜಾರ್ ಸಮ್ಮೇಳನದಲ್ಲಿ ಮಾತನಾಡಿದ ಅವರು, 2022 ರ ಚುನಾವಣೆಯಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿನ ಬಿಜೆಪಿ ಸರ್ಕಾರವನ್ನು ಆಡಳಿತದಿಂದ ಹೊರಗಿಡಬೇಕು. ಇದಕ್ಕಾಗಿ ಸಮುದಾಯವು ಒಗ್ಗೂಡಬೇಕು ಎಂದು ಮನವಿ ಮಾಡಿದ್ದಾರೆ.
ಬಿಜೆಪಿ ಸಂದಸರಾಗಿದ್ದ ಭದಾನ್ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿ, ಆ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ, ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಅಲ್ಲದೆ, ಚುನಾವಣೆಯಲ್ಲಿ ತಮ್ಮ ರಾಜಕೀಯ ಶಕ್ತಿ ತೋರಿಸುತ್ತೇವೆ. ಗುಜ್ಜಾರ್ ಸಮುದಾಯದ ಘನತೆಯನ್ನು ಎತ್ತಿ ಹಿಡಿಯುತ್ತೇವೆ. ಅದಕ್ಕಾಗಿ ರಾಜಕೀಯ ಪಕ್ಷವನ್ನು ಕಟ್ಟುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಲಖಿಂಪುರ ರೈತರ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಭುಗಿಲೆದ್ದ ಆಕ್ರೋಶ; ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಆಗ್ರಹ!