ಫ್ಯಾಕ್ಟ್ಚೆಕ್: ಮತಯಾಚನೆಗೆ ಬಂದ ಕೌನ್ಸಿಲರ್ನನ್ನು ಅಪಹರಿಸಲಾಗಿದೆ ಎಂಬುದು ನಿಜವೆ?
ಹಿಂದಿನ ಚುನಾವಣೆಯಲ್ಲಿ ಗೆದ್ದ ನಂತರ ಅಭ್ಯರ್ಥಿಯು ಒಮ್ಮೆಯೂ ವಾರ್ಡ್ಗೆ ಭೇಟಿ ನೀಡರಲಿಲ್ಲ. ಈಗ ಮತ್ತೆ ಚುನಾವಣೆ ಬಂದಿದ್ದು ಮತ ಕೇಳಲು ಬಂದಾಗ ಸ್ಥಳೀಯರು ಅವರನ್ನು ಅಪಹರಿಸಿ ಹಿಂಸೆ ನೀಡಿದ್ದಾರೆ ಎಂದು ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ವ್ಯಕ್ತಿಯನ್ನು ಕುರ್ಚಿಗೆ ಕಟ್ಟಿ ಹಾಕಿ ಘೋಷಣೆ ಕೂಗುತ್ತಿರುವ ಗುಂಪಿನ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ये जनाब पार्षद है, चुनाव जीतने के बाद कभी अपने क्षेत्र में नही गए। वापस चुनाव आने पर वोट की अपील के लिए दौरे पर गए जनता द्वारा किडनैप कर लिया गया। pic.twitter.com/jYBREKsXLP
— Neha Singh Rathore (@Nehafolk_singer) July 2, 2022
ಪೋಸ್ಟ್ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊವನ್ನು ಸ್ಕ್ರೀನ್ಶಾಟ್ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಸರ್ಚ್ ಮಾಡಿದಾಗ ಪೋಸ್ಟ್ನ ಹೇಳಿಕೆಯನ್ನು ಉಲ್ಲೇಖಿಸಿದ ಯಾವ ವರದಿಗಳು ಲಭ್ಯವಾಗಿಲ್ಲ, ನಂತರ ಮತ್ತಷ್ಟು ಹುಡುಕಾಟ ನೆಡಿಸಿದಾಗ, ನವೆಂಬರ್ 2020 ರಲ್ಲಿ ಹಲವು ಮಾಧ್ಯಮಗಳಲ್ಲಿ ವರದಿಯಾದ (https://bit.ly/3yh6Yqm) ಮಾಹಿತಿ ಲಭ್ಯವಾಗಿವೆ. ಮಾಧ್ಯಮಗಳ ವರದಿಗಳು ಹೇಳುವ ನೈಜ ಕಥೆಯೇ ಬೇರೆ.
21 ನವೆಂಬರ್ 2020 ರಿಂದ ಅಮರ್ ಉಜಾಲಾ (https://bit.ly/3bIYYXJ) ಅವರ ವರದಿಯಲ್ಲಿ ಆ ವ್ಯಕ್ತಿಯನ್ನು ವಾರಣಾಸಿ ಮುನ್ಸಿಪಲ್ ಕಾರ್ಪೊರೇಶನ್ನ ವಾರ್ಡ್ ಸಂಖ್ಯೆ 79 ರ ಕೌನ್ಸಿಲರ್ ತುಫೈಲ್ ಅನ್ಸಾರಿ ಎಂದು ಗುರುತಿಸಿದೆ. ಅಕ್ಕ ಪಕ್ಕದ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದ ಸಮಸ್ಯೆಯನ್ನು ಬಗೆಹರಿಸದ ಕೌನ್ಸಿಲರ್ ತುಫೈಲ್ ಅನ್ಸಾರಿಯನ್ನು ಸ್ಥಳೀಯರು ತರಾಟಗೆ ತೆಗೆದುಕೊಂಡಿದ್ದಾರೆ, ಅನ್ಸಾರಿ ಜನರಿಗೆ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ ಆಕ್ರೋಶಗೊಂಡ ಸ್ಥಳೀಯರು ಚರಂಡಿ ನೀರಿನ ಕುರ್ಚಿಯಲ್ಲಿ ಕಟ್ಟಿ ಪ್ರತಿಭಟಿಸಿದ್ದಾರೆ ಎಂದು ವರದಿಯಾಗಿದೆ.
ಜಾಗರಣ್ ವರದಿ ಪ್ರಕಾರ, ಅಂಬಿಕಾ ಮಂಡಿಯ ಬೀದಿಗಳಲ್ಲಿ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದ ಸಮಸ್ಯೆಯಿಂದ ಅಲ್ಲಿನ ಜನ ರೋಸಿಹೋಗಿದ್ದರು, ಪ್ರತಿದಿನ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ತುಫೈಲ್ ಅನ್ಸಾರಿ ಅವರಲ್ಲಿ ಪದೇ ಪದೇ ಮನವಿ ಮಾಡಿದರೂ ತಮ್ಮ ದೂರುಗಳ ಬಗ್ಗೆ ಕ್ರಮಕೈಗೊಳ್ಳದ ಕಾರಣ, ಕೊಳಚೆ ನೀರಿನ ಮಧ್ಯೆಯೇ ಇದ್ದ ಕುರ್ಚಿ ಮೇಲೆ ಅನ್ಸಾರಿ ಅವರನ್ನು ಬಲವಂತವಾಗಿ ಕೂರಿಸಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಇಂಡಿಯಾ ಟುಡೇ ಫ್ಯಾಕ್ಟ್ಚೆಕ್ ವರದಿ ಮಾಡಿದ್ದು ಸದಸ್ಯರಾದ ತುಫೈಲ್ ಅನ್ಸಾರಿ ಅವರನ್ನು ಮಾತನಾಡಿಸಿದಾಗ, “ಸುಮಾರು ಎರಡು ತಿಂಗಳ ಕಾಲ ಈ ಪ್ರದೇಶದಲ್ಲಿ ಕೊಳಚೆ ನೀರು ನಿಂತಿದೆ. ಪುರಸಭೆಯ ಅಧಿಕಾರಿಗಳು ಅಥವಾ ನೀರು ಸರಬರಾಜು ಸಂಸ್ಥೆ ನನ್ನ ಮನವಿಗೆ ಸ್ಪಂದಿಸಲಿಲ್ಲ. ಸ್ಥಳೀಯರು ನನ್ನ ಮೇಲೆ ತಮ್ಮ ಕೋಪವನ್ನು ಹೊರಹಾಕಿದರು ಮತ್ತು ಸುಮಾರು ಒಂದು ಗಂಟೆಗಳ ಕಾಲ ನನ್ನನ್ನು ಅಲ್ಲೇ ಕುಳಿತುಕೊಳ್ಳುವಂತೆ ಮಾಡಿದರು” ಎಂದು ಕಾಂಗ್ರೆಸ್ಸಿಗ ಅನ್ಸಾರಿ ತಿಳಿಸಿದ್ದಾರೆ.
“ಚರಂಡಿ ನೀರು ಸರಿಯಾಗಿ ಹರಿಯುವಂತೆ ಮಾಡಲಾಗಿದ್ದು ಈಗ ಪರಿಸ್ಥಿತಿ ಸುಧಾರಿಸಿದೆ” ಎಂದು ಅವರು ಹೇಳಿದ್ದಾರೆ, ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಲ್ಲಿ ಈ ವರ್ಷಾಂತ್ಯದಲ್ಲಿ ಮುನ್ಸಿಪಲ್ ಚುನಾವಣೆ ನಡೆಯಲಿದೆ. ಕಳೆದ ಬಾರಿ 2017ರಲ್ಲಿ ಪುರಸಭೆ ಚುನಾವಣೆ ನಡೆದಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ ವಾರಣಾಸಿಯ ಸ್ಥಳೀಯ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ, ಮಾಡಿದ ಪ್ರತಿಭಟನೆಯನ್ನು, ವಾರ್ಡ್ ಸದಸ್ಯರಾದ ತುಫೈಲ್ ಅನ್ಸಾರಿ ಅವರನ್ನು ಅಪಹರಿಸಿ ಚುನಾವಣೆಯಲ್ಲಿ ತಮ್ಮವರಿಗೆ ಮತದಾನ ಮಾಡುವಂತೆ ಮಾಡುತ್ತಿದ್ದಾರೆ ಎಂದು ತಪ್ಪು ಹೇಳಿಕೆ ಮೂಲಕ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ವಿ ಸೂ: ಕೆಲಸ ಮಾಡದ ಪ್ರತಿಯಬ್ಬ ಜನಪ್ರತಿನಿಧಿಗಳನ್ನು ಹೀಗೆಯೇ ತರಾಟೆಗೆ ತೆಗೆದುಕೊಂಡರೆ ಪರಿಸ್ಥಿತಿ ಸುಧಾರಿಸುವುದೇನೋ, ಇದನ್ನು ಮತ ನೀಡುವ ಜನ ಯೋಚಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗುತ್ತದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದಕ್ಕೆ, ಅರ್ನಾಬ್ ಗೋಸ್ವಾಮಿ ಡ್ಯಾನ್ಸ್ ಮಾಡಿದರೆ?