ಫ್ಯಾಕ್ಟ್ಚೆಕ್ : ಅಮಿತ್ ಶಾ ಅವರ 2018ರ ವಿಡಿಯೋವನ್ನು ಬಳಸಿ ಬಸವಣ್ಣ ಪ್ರತಿಮೆಗೆ ಅವಮಾನ ಮಾಡಿದ್ದಾರೆ ಎಂದು ಹಂಚಿಕೆ
ಪ್ರಧಾನ ಮಂತ್ರಿ, ಗೃಹ ಸಚಿವರಿಂದ ಹಿಡಿದು BJP ಯ ರಾಷ್ಟ್ರೀಯ ಅಧ್ಯಕ್ಷರಾದಿಯಾಗಿ ಒಂದು ವಾರದಿಂದ ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ 2023ರ ಚುನಾವಣಾ ಹಿನ್ನಲೆಯಲ್ಲಿ ಎಲ್ಲಾ ಪಕ್ಷಗಳ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಚುನಾವಣೆ ಎಂದರೆ ಜಾತಿ ರಾಜಕಾರಣ ಎನ್ನುವಂತಾಗಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರಭಲ ಜಾತಿಗಳ ಓಲೈಕೆಗೆ ಭರವಸೆಗಳ ಮಹಾಪೂರವನ್ನೆ ಹರಿಸುತ್ತಿದ್ದಾರೆ.
ಇದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಸವೇಶ್ವರ(ಬಸವಣ್ಣ) ಪ್ರತಿಮೆಗೆ ಹಾರ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.
See the way Amit Shah disrespecting Basavanna and Lingayats. #BJPInsultsLingayats pic.twitter.com/wgLBw0iwyT
— 𝑹 𝑫 (@southcongressi) May 1, 2023
ಯಡಿಯೂರಪ್ಪ, ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರಿಗೆ ಅನ್ಯಾಯವೆಸಗಿ, ಹಾರ ಹಾಕಿ ನಮಸ್ಕರಿಸುವ ನಾಟಕವಾಡಿದ್ರೆ ಬಸವಣ್ಣನವರು ಒಪ್ಪುತ್ತಾರಾ? ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
Sheer arrogance! 👇 #KarnatakaElections2023 pic.twitter.com/xlSRn2cPz3
— YSR (@ysathishreddy) May 1, 2023
ಕ್ರೇನ್ ಸಹಾಯದಿಂದ ಅಮಿತ್ ಶಾ ಬಸವಣ್ಣನ ಪ್ರತಿಮೆಗೆ ಹಾರ ಹಾಕಲು ಮುಂದಾದಾಗ ಹಾರ ಆಯಾ ತಪ್ಪಿ ಕೆಳಗೆ ಬೀಳುತ್ತದೆ. ಈ ದೃಶ್ಯಗಳು ಪ್ರಸ್ತುತ ನಡೆಯುತ್ತಿರುವ ಚುನಾವಣಾ ಸಂದರ್ಭದ್ದು ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಅಮಿತ್ ಶಾ ಅವರ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ವೈರಲ್ ದೃಶ್ಯಾವಳಿಗಳು 2018ರಲ್ಲಿ ನಡೆದ ಕಾರ್ಯಕ್ರದ್ದು ಎಂದು ಹಲವು ಸುದ್ದಿ ಮಾಧ್ಯಮಗಳು ಮಾಡಿರುವ ವರದಿಗಳು ಲಭ್ಯವಾಗಿವೆ.
ಏಪ್ರಿಲ್ 19, 2018 ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅಮಿತ್ ಶಾ ಅವರು ಕರ್ನಾಟಕ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಗೂಡಿ ಬೆಂಗಳೂರಿನ ಚಾಲುಕ್ಯ ಸರ್ಕಲ್ನಲ್ಲಿರುವ ಬಸವಣ್ಣ ಪ್ರತಿಮೆಗೆ ಹಾರ ಹಾಕಲು ವಿಫಲರಾದ ದೃಶ್ಯಗಳು ಎಂದು ವರದಿ ಮಾಡಿದೆ.
#KarnatakaKurukshetra: @AmitShah offered a floral tribute to #Basaveshwara on the occasion of #BasavaJayanti however the garland missed the statue. pic.twitter.com/9oBrS66t3W
— News9 (@News9Tweets) April 18, 2018
2018ರ ವಿದಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಬಸವ ಜಯಂತಿ ಪ್ರಯುಕ್ತ ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಹಾರ ಹಾಕುವುದಕ್ಕೆ ಕ್ರೇನ್ ಕಲ್ಪಿಸಲಾಗಿತ್ತು. ಅಮಿತ್ ಶಾ ಹಾಗೂ ಪ್ರತಿಮೆ ನಡುವೆ ಅಂತರವಿದ್ದ ಕಾರಣ ನೇರವಾಗಿ ಹಾರ ಹಾಕಲು ಸಾಧ್ಯವಾಗದ ಕಾರಣ ಕೊಂಚ ಸಮಯ ತೆಗೆದುಕೊಂಡು ಪ್ರತಿಮೆಗೆ ಹಾರವನ್ನು ಎಸೆದರು.
ಆದರೆ ಹಾರ ತಲೆ ಭಾಗಕ್ಕೆ ತಲುಪಿ ಕೆಳಗೆ ಬಿತ್ತು. ಯಡಿಯೂರಪ್ಪ ಹಾಕಿದ ಹಾರ ಬಸವೇಶ್ವರರ ಕೊರಳಿಗೆ ಬಿತ್ತು. ಹಾರ ಸರಿಯಾಗಿ ಬೀಳುತ್ತಿದ್ದಂತೆ ಯಡಿಯೂರಪ್ಪ ಮುಗುಳ್ನಕ್ಕರು ಇದನ್ನು ನೋಡಿದ ಅಮಿತ್ ಶಾ ಕೂಡ ನಸು ನಗುತ್ತಲೇ ಕ್ರೇನ್ ನಿಂದ ಕೆಳಗಿಳಿದರು. ಬಳಿಕ ಬಿಜೆಪಿ ನಾಯಕರು ಅಮಿತ್ ಶಾ ಅವರಿಗೆ ಬಸವಣ್ಣನವರ ವಚನಗಳ ಪುಸ್ತಕವನ್ನು ನೀಡಿದರು ಎಂದು ವರದಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2018ರ ಚುನಾವಣಾ ಸಂದರ್ಭದಲ್ಲಿ ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ಪ್ರತಿಮೆಗೆ ಹಾರ ಹಾಕುವಾಗಿನ ಹಳೆಯ ದೃಶ್ಯಗಳನ್ನು, ಪ್ರಸ್ತುತ ನಡೆಯುತ್ತಿರುವ 2023ರ ಚುನಾವಣೆಗೆ ಲಿಂಕ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಪಾಕ್ನಲ್ಲಿ ಮಹಿಳೆಯರ ಶವಗಳ ಮೇಲೆ ನಡೆಯುವ ಅತ್ಯಾಚಾರ ತಡೆಯಲು ಗೋರಿಗಳಿಗೆ ಬೀಗ ಹಾಕಲಾಗಿತ್ತೆ?