‘ಆಲ್ಕೋಹಾಲ್ ಕೈ,ಗಂಟಲಿನ ಕೊರೊನಾ ವೈರಸ್ಗಳನ್ನು ಕೊಲ್ಲುತ್ತದೆ’-ಭಾರತ್ ಸಿಂಗ್
ಇತ್ತೀಚೆಗೆ ಆಲ್ಕೋಹಾಲ್ ಸೇವನೆಯಿಂದ ಕೊರೊನಾ ಸೋಂಕು ಹರಡುವುದಿಲ್ಲ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ರಾಜಸ್ಥಾನ ಶಾಸಕ, ಕಾಂಗ್ರೆಸ್ ಮಾಜಿ ಸಚಿವ ಭಾರತ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಹೌದು… ”ಆಲ್ಕೋಹಾಲ್ ಕೈನಲ್ಲಿರುವ ಹಾಗೂ ಗಂಟಲಿನಲ್ಲಿರುವ ಕೊರೊನಾ ವೈರಸ್ಗಳನ್ನು ಕೊಲ್ಲುತ್ತದೆ” ಎಂದು ಭಾರತ್ ಸಿಂಗ್ ಹೇಳಿಕೆ ನೀಡಿದ್ದಾರೆ. ಮದ್ಯವನ್ನು ಕೈನಲ್ಲಿ ಉಜ್ಜುವಾಗ ಕೈಯಿಂದ ಕೊರೊನಾ ವೈರಸ್ ಅನ್ನು ತೆಗೆದು ಹಾಕಬಹುದು. ಅದನ್ನು ಸೇವಿಸುವುದರಿಂದ ಗಂಟಲಿನಿಂದ ಕೊರೊನಾ ವೈರಸ್ ಅನ್ನು ಅಳಿಸಬಹುದು ಎಂದಿದ್ದಾರೆ.
ಈಗಾಗಲೇ ಲಾಕ್ ಡೌನ್ ನಿಂದಾಗಿ ಮದ್ಯದಂಗಡಿಗಳನ್ನು ಮುಚ್ಚಿರುವುದರಿಂದ ಅಕ್ರಮ ಮದ್ಯ ತಯಾರಿಕೆ ಹೆಚ್ಚಳವಾಗುತ್ತಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ ಎಂದು ಭಾರತ್ ಸಿಂಗ್ ಎಂದು ಹೇಳಿದ್ದಾರೆ. ಜೊತೆಗೆ ಭಾರತ್ ಸಿಂಗ್ ರಾಜ್ಯದಲ್ಲಿ ವೈನ್ ಅಂಗಡಿಗಳನ್ನು ತೆರೆಯುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ವೈನ್ ಮಾರಾಟಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎರಡೂ ಅನುಮತಿ ನೀಡಿಲ್ಲ. ಆದರೆ, ವೈನ್ ಅಂಗಡಿಗಳ ಮುಚ್ಚುವಿಕೆಯು ರಾಜ್ಯದ ಆದಾಯದ ಬೆನ್ನೆಲುಬನ್ನು ಮುರಿಯುತ್ತಿದೆ ಎಂದು ತಿಳಿಸಿದ್ದಾರೆ. ವೈನ್ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದರೆ ಅದು ಉತ್ತಮ ಎಂದು ಭಾರತ್ ಸಿಂಗ್ ಹೇಳಿದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ಲಾಕ್ಡೌನ್ ಸಮಯದಲ್ಲಿ ಮದ್ಯ ಮಾರಾಟ ಮಾಡುವ ಹೇಳಿಕೆ ನೀಡಿ ಟೀಕೆಗೆ ಗುರಿ ಆಗಿದ್ದರು. ಸದ್ಯ ಮದ್ಯದ ಪ್ರಯೋಜನ ಪ್ರಸ್ತಾಪ ಮಾಡಿ ಕೆಂಗಣ್ಣಿಗೆ ಗುರುಯಾಗಿದ್ದಾರೆ.