ಎಪಿಎಂಸಿ ಕಾಯ್ದೆ ತಿದ್ದುಪಡಿ ನಿಲ್ಲಿಸಲು ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಒತ್ತಾಯ!
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ರಾಜ್ಯ ಎಪಿಎಂಸಿ ಕಾಯ್ದೆ ತಿದ್ದುಪಡಿ ನಿಲ್ಲಿಸಬೇಕಾಗಿ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಪತ್ರ ಸಲ್ಲಿಸಲಾಗಿದೆ.
ಹೌದು.. ಇದೇ 14ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ನಿಯಂತ್ರಕ ಪಾತ್ರವನ್ನು ಕಡಿಮೆ ಮಾಡುವ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದೆ.
ಈ ತಿದ್ದುಪಡಿಯಿಂದ ಎಪಿಎಂಸಿ ಕಾಯ್ದೆ ಸೆಕ್ಷನ್ 08ರಲ್ಲಿ ರೈತರ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿಯೇ ತಂದು ವಿಲೇವಾರಿ ಮಾಡುವ ವ್ಯವಸ್ಥೆಗೆ ವಿರೋಧವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆರೋಪಿಸಿದೆ.
ಈ ತಿದ್ದುಪಡಿಯಿಂದ ಖರೀದಿದಾರನಿಗೆ ಆನ್ ಲೈನ್ ನಲ್ಲಿ ರೈತರ ಉತ್ಪನ್ನಗಳನ್ನು ಕೊಳ್ಳಲು ಹಾಗೂ ಮಾರುಕಟ್ಟೆಗೆ ಬಾರದೆ ಖರೀದಿಸುವ ವ್ಯವಸ್ಥೆಯಿಂದ ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಇಲ್ಲದೇ ರೈತರಿಗೆ ನಷ್ಟವಾಗುವ ಸಂಭವ ಇದೆ. ಎಪಿಎಂಸಿ ಎನ್ನುವುದು ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ಮಾರುಕಟ್ಟೆಯಾಗಿದೆ. ಇದನ್ನು ಬಲಪಡಿಸಲು ಧನಾತ್ಮಕವಾಗಿ ಧನಾತ್ಮಕ ಕಾನೂನುಗಳನ್ನು ತಂದು ಬಲಪಡಿಸಬೇಕೇ ವಿನ: ಖರೀದಿದಾರರ ಮಲ್ಟಿನ್ಯಾಷನಲ್ ಕಂಪನಿಗಳ ಪರವಾಗಿ ಈ ರೀತಿ ತಿದ್ದುಪಡಿ ಮಾಡುವುದನ್ನು ನಾವುಗಳು ವಿರೋಧಿಸುತ್ತೇವೆ. ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಈ ದಿನ ಪ್ರತಿಭಟನೆ ಮೂಲಕ ಒತ್ತಾಯಿಸುತ್ತೇವೆ. ಇದು ತಿದ್ದುಪಡಿಯಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಎಚ್ಚರಿಕೆ ನೀಡಿವೆ.
ಜೊತೆದೆ ಪತ್ರದಲ್ಲಿ ಬಳ್ಳಾರಿಯ ಮಾದೂರು ಗ್ರಾಮದಲ್ಲಿ ಗುಡುಗು-ಸಿಡಿಲಿಗೆ 09 ವರ್ಷದ ಯುವಕ ಅಜೇಯ್ ಬಲಿಯಾಗಿದ್ದಾನೆ. ಮೋರಿಗೇರಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಒಬ್ಬ ರೈತ ಸಾವನ್ನಪ್ಪಿದ್ದಾನೆ. ಇವರುಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ.