ಐಪಿಎಲ್ಗೆ ದೆಹಲಿಯಲ್ಲಿಲ್ಲ ಜಾಗ: ಮನೀಶ್ ಸಿಸೋಡಿಯಾ
ಇಡೀ ಜಗತ್ತನ್ನೇ ಕಾಡುತ್ತಿರುವ ಕರೊನಾ ವೈರಸ್ ಸೋಂಕು, ದೇಶದಲ್ಲಿಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಐಪಿಎಲ್ ಸೇರಿದಂತೆ ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಕ್ರೀಡಾ ಚಟುವಟಿಕೆಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ ಸಿಸೋಡಿಯಾ, “ಐಪಿಎಲ್ ನಂತಹ ಅಪಾರ ಜನ ಸಮೂಹ ಸೇರುವ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ನಿಷೇಧಿಸಲು ನಾವು ನಿರ್ಧರಿಸಿದ್ದೇವೆ. ಕೊರೊನಾ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರವು ಮುಖ್ಯವಾಗುತ್ತದೆ” ಎಂದಿದ್ದಾರೆ.
ದೆಹಲಿ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ಎಂಪಿ ಸಂಜಯ್ ಸಿಂಗ್ ಸಹ ಸ್ವಾಗತಿಸಿದ್ದು, ಕೊರಾನಾ ವೈರಸ್ ತಡೆಗಟ್ಟಲು ಜನ ಸಮೂಹ ಸೇರುವುದನ್ನು ತಡೆಗಟ್ಟುವುದು ಒಂದು ಕ್ರಮವಾಗಿದೆ ಎಂದಿದ್ದಾರೆ.
ಮಾರ್ಚ್ 29 ರಂದು ಆರಂಭವಾಗಬೇಕಿರುವ ಐಪಿಎಲ್ ವೇಳಾಪಟ್ಟಿಯಲ್ಲಿ ದೆಹಲಿ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದ ಆತಿಥ್ಯದಲ್ಲಿ ಏಳು ಪಂದ್ಯಗಳು ನಿಗದಿಯಾಗಿದ್ದವು. ದೆಹಲಿ ರಾಜ್ಯ ಸರ್ಕಾರದ ನಿರ್ಧಾರದಿಂದ ಈ ಬಾರಿಯ ಐಪಿಎಲ್ಗೆ ರಾಷ್ಟ್ರ ರಾಜಧಾನಿಯಲ್ಲಿ ಜಾಗವಿಲ್ಲವೆಂಬುದು ಸ್ಪಷ್ಟವಾಗಿದೆ.
ಕೊರೋನಾ ವೈರಸ್ನಿಂದಾಗಿ ವಿದೇಶಿ ಆಟಗಾರರಿಗೆ ವೀಸಾ ಸಿಗದ ಹಿನ್ನೆಲೆಯಲ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಮತ್ತು ಟೂರ್ನಿಯ ಅಧಿಕಾರಿಗಳು ಚರ್ಚೆ ನಡೆಸಿದ್ದು, ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರ ನಂತರದ ದಿನಗಳಿಗೆ ಮುಂದೂಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿಯೂ ಒಂದು ವಾರ ಮಾಲ್, ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದ್ದು, ಮದುವೆ, ಶುಭಸಮಾರಂಭಗಳನ್ನು ರದ್ದುಗೊಳಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ.