ಕಾರಿನಲ್ಲಿ ಬೆಂಗಳೂರು ಮೈಸೂರು ನಡುವೆ ಓಡಾಡೋರೆ ಈ ಸ್ಟೋರಿ ನೋಡಿ…
ಕಾರಿನಲ್ಲಿ ಬೆಂಗಳೂರು ಮೈಸೂರು ನಡುವೆ ಓಡಾಡೋರೆ ಒಂದು ಶಾಕಿಂಗ್ ನ್ಯೂಸ್. ಡ್ರಾಪ್ ಕೊಡೋ ನೆಪದಲ್ಲಿ ದರೋಡೆ ಮಾಡೋ ತಂಡ ಇರುವ ನಗರದ ಮಂದಿಯನ್ನ ಬೆಚ್ಚಿ ಬೀಳಿಸಿದೆ. ಹೀಗೊಂದು ಎಚ್ಚರಿಕೆಯನ್ನು ಪೊಲೀಸರ್ ಇಲಾಖೆ ಕೊಟ್ಟಿದೆ.
ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಟೆಕ್ಕಿ ಬಳಿ ರಾಬರಿ ನಡೆದಿದೆ. ಬೆಂಗಳೂರಿಗೆ ಡ್ರಾಪ್ ಕೊಡುವ ನೆಪದಲ್ಲಿ ಟೆಕ್ಕಿಯ ಸುಲಿಗೆ ಮಾಡಲಾಗಿದೆ. ಚಾಕು ತೋರಿಸಿ ಚೈನ್, ಉಂಗುರ ದೋಚಿದ ದರೋಡೆಕೋರರು, ಎಟಿಎಂನಿಂದ ಬಲವಂತವಾಗಿ 43ಸಾವಿರ ಡ್ರಾ ಮಾಡಿಸಿ ಹಣ ಕಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮೂವರು ಖದೀಮರಿಂದ ಕೃತ್ಯ ನಡೆದಿದೆ. ಗೌರಿಶಂಕರ ನಗರದ ನಿವಾಸಿ ಮಧುವಿಕಾಸ್ ಅವರು ಹಣ, ಚಿನ್ನ ಕಳೆದುಕೊಂಡ ಟೆಕ್ಕಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರೋ ಮಧುವಿಕಾಸ್, ನಿನ್ನೆ ಮುಂಜಾನೆ ಬೆಂಗಳೂರಿಗೆ ತೆರಳಲು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದಿದ್ದರು.
ಖಾಸಗಿ ಕಾರಿನಲ್ಲಿದ್ದ ಮೂವರಿಂದ ಡ್ರಾಪ್ ಕೊಡುವ ಆಮಿಷ ತೋರಿಸಲಾಗಿದೆ. ಶೀಘ್ರದಲ್ಲಿ ಬೆಂಗಳೂರಿಗೆ ತಲುಪುವ ಉದ್ದೇಶದಿಂದ ಕಾರು ಹತ್ತಿದ ಮಧುವಿಕಾಸ್ ರನ್ನು ಕೊಲಂಬಿಯಾ ಏಷಿಯಾ ಬಳಿ ರಿಂಗ್ ರಸ್ತೆ ಮೂಲಕ ಕೆ.ಆರ್.ಎಸ್ ರಸ್ತೆ ಕಡೆಗೆ ಕರೆದುಕೊಂಡು ಹೋಗಲಾಗಿದೆ. ತಕ್ಷಣವೇ ಕಾರು ನಿಲ್ಲಿಸಿ ಎಂದಾಗ ಚಾಕು ತೋರಿಸಿ 5 ಗ್ರಾಂ ಉಂಗುರ. 10 ಗ್ರಾಂ ತೂಕದ ಸರ ಮೊಬೈಲ್ ಕಸಿದ ದುಷ್ಕರ್ಮಿಗಳು, ಒಂಟಿಕೊಪ್ಪಲಿನ ಎಟಿಎಂನಲ್ಲಿ 20 ಸಾವಿರ ಡ್ರಾ ಮಾಡಿ ನಂತರ ಅಶೋಕ ರಸ್ತೆಯ ಎಟಿಎಂನಲ್ಲಿ 23ಸಾವಿರ ಡ್ರಾ ಮಾಡಿಸಿದ್ದಾರೆ.
ಎಟಿಎಂ ಪಿನ್ ತಪ್ಪಾಗಿ ಹೇಳಲು ಯತ್ನಿಸಿದ ಮಧುವಿಕಾಸ್ ರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕನ್ನಡ ಮಾತನಾಡುತ್ತಿದ್ದ ದರೋಡರಕೋರರು ಶಿಫ್ಟ್ ಡಿಸೈರ್ ಕಾರಿನಲ್ಲಿ ಕರೆದೊಯ್ದು ಕೃತ್ಯ ಎಸಗಿದ್ದಾರೆ. ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.