ಗಗನಚುಕ್ಕಿ ಜಲಪಾತೋತ್ಸವ ಸಿದ್ಧತೆ : ಸೋಷಿಯಲ್ ಮೀಡಿಯಾದಿಂದ ವಿಘ್ನ – ವದಂತಿಗೆ ತೆರೆ
ಕಳೆದ ಮೂರ್ನಾಲ್ಕು ವರ್ಷದಿಂದ ಮಂಡ್ಯ ಜಿಲ್ಲೆಯಲ್ಲಿ ಮಳೆ ಬೆಳೆ ಇಲ್ಲದೆ ಬರಗಾಲ ಆವರಿಸಿತ್ತು. ಅದ್ರಿಂದಾಗ ಜಿಲ್ಲೆಯ ಗಗನಚುಕ್ಕಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮ ಸ್ಥಗಿತವಾಗಿತ್ತು. ಕಳೆದ ಬಾರಿ ಮತ್ತು ಈ ಬಾರಿ KRS ತುಂಬಿದ್ದು,ಈ ಬಾರಿ ಜಲಪಾತೋತ್ಸವಕ್ಕೆ ಜ-೧೮ ಮತ್ತು ೧೯ ದಿನಾಂಕ ನಿಗದಿಪಡಿಸಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಆದ್ರೆ ಈ ಜಲಪಾತೋತ್ಸವಕ್ಕೆ ಇದೀಗ ಸೋಷಿಯಲ್ ಮೀಡಿಯಾದಿಂದ ವಿಘ್ನವೊಂದು ಎದುರಾಗಿದ್ದು ಕೆ.ಆರ್.ಎಸ್. ಅಣೆಕಟ್ಟೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದೆ ಎಂಬ ವದಂತಿ ಜಿಲ್ಲೆಯಲ್ಲಿ ಹರಡುತ್ತಿದೆ.
ಈ ವದಂತಿಗೆ ಮಂಡ್ಯ ಡಿಸಿ ವೆಂಕಟೇಶ್ ಸ್ಪಷ್ಟನೆ ನೀಡಿ ನೀರು ಕೇವಲ ನಾಲೆಗಳಿಗೆ ಬಿಡಲಾಗುತ್ತಿದೆ ಹೊರತು ತಮಿಳುನಾಡಿಗಲ್ಲ ಎಂದು ಸ್ಪಷ್ಟನೆ ನೀಡಿ ಗಗನಚುಕ್ಕಿ ಜಲಪಾತಕ್ಕಿದ್ದ ಆತಂಕದ ವದಂತಿಗೆ ತೆರೆ ಎಳೆದಿದ್ದಾರೆ.
ಹೌದು… ನಿನ್ನೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆಯಿಂದ ಮಂಡ್ಯ ಜಿಲ್ಲೆಯ ನಾಲೆಗಳಿಗೆ ನೀರನ್ನು ಬಿಡಲಾಗುತ್ತಿದೆ. ಕೆಲವ್ರು ಇದನ್ನು ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂದು ವದಂತಿ ಹಬ್ಬಿಸಿದ್ರು. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಸಂಕ್ರಾಂತಿ ಹಿನ್ನಲೆಯಲ್ಲಿ ಜಾನುವಾರುಗಳನ್ನು ತೊಳೆಯಲು, ಕೃಷಿಗಾಗಿ ಜಿಲ್ಲೆಯ ವಿಶ್ವೇಶ್ವರಯ್ಯ ಹಾಗೂ ಚಿಕ್ಕದೇವರಾಜ ನಾಲೆಗಳಿಗೆ ನೀರು ಬಿಡಲಾಗಿದೆ. ಅಲ್ಲದೇ ಇದೇ 18 ಮತ್ತು 19ರಂದು ಗಗನಚುಕ್ಕಿ ಜಲಪಾತೋತ್ಸವ ಇರುವುದರಿಂದ ಜಲಪಾತ ವೈಭವದಿಂದ ಕಾಣಲಿ ಎಂದು ನೀರು ಬಿಡುಗಡೆ ಮಾಡಲಾಗಿದೆಯೇ ಹೊರತು ತಮಿಳುನಾಡಿಗೆ ನೀರು ಬಿಟ್ಟಿಲ್ಲ ಇದು ಕೇವಲ ವದಂತಿ ಎಂದು ಡಿಸಿ ಸ್ಪಷ್ಟಪಡಿಸಿದ್ರು.
ಇನ್ನು ಇದೇ ಜನವರಿ 18 ಮತ್ತು 19ರಂದು ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಗಗನುಚಕ್ಕಿ ಜಲಪಾತೋತ್ಸವ ಎರಡು ದಿನಗಳ ಕಾಲ ನಡೆಯಲಿದ್ದು, ಕಳೆದ ಆರು ವರ್ಷಗಳಿಂದ ಉತ್ಸವವನ್ನು ಬರಗಾಲದಿಂದ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಅದ್ಧೂರಿ ಜಲಪಾತೋತ್ಸವ ನಡೆಯಲಿದ್ದು, ಶನಿವಾರ ಮತ್ತು ಭಾನುವಾರ ಸಂಜೆ ಉತ್ಸವ ವೈಭವದಿಂದ ಜರುಗಲಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಮ್ಯೂಸಿಕಲ್ ನೈಟ್, ಜಲಪಾತದ ಲೇಸರ್ ಲೈಟ್ ಷೋ ಸೇರಿ ಅನೇಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದ್ರು.
ಒಟ್ಟಾರೆ ಮೂರ್ನಾಲ್ಕು ವರ್ಷಗಳಿಂದ ಬರಗಾಲದಿಂದ ಕಂಗೆಟ್ಟಿದ್ದ ಮಂಡ್ಯ ಜಿಲ್ಲೆಯ ರೈತರಿಗೆ ಈ ಬಾರಿ ಮಳೆಯಿಂದ ಸಮೃದ್ಧಿಯಾಗಿ ನೀರು ಸಿಗುತ್ತಿದ್ದು, ಇದ್ರಿಂದ ಸದ್ಯ ಬೆಳೆಗಳಿಗೂ ನೀರು ತಲುಪುತ್ತಿದೆ. ಇದರ ಜೊತೆಗೆ ನೆನೆಗುದಿಗೆ ಬಿದ್ದಿದ್ದ ಗಗನಚುಕ್ಕಿ ಜಲಪಾತೋತ್ಸವ ಸಹ ಅದ್ದೂರಿಯಾಗಿ ನಡೆಯುತ್ತಿದ್ದು ಜಿಲ್ಲೆಯಲ್ಲಿ ಜನರ ಸಂತೋಷಕ್ಕೆ ಕಾರಣವಾಗಿದೆ.