ಕುರುಬ ಸಮುದಾಯದ ಒಲವು ಹೆಚ್. ವಿಶ್ವನಾಥ್ ಅವರತ್ತ ಪೋಸ್ಟರ್ಗೆ ಸಿದ್ದರಾಮಯ್ಯ ಗರಂ
ಪೂಜ್ಯ ಶ್ರೀ ಶ್ರೀ ನಿರಂಜನಾನಂದಪುರ ಸ್ವಾಮೀಜಿಗಳ ಸಂಧಾನ ಸಫಲವಾಗಿದೆ. ಹಾಗಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಣಸೂರು ತಾಲ್ಲೂಕಿನ ಹಳ್ಳಿಗಳಿಗೆ ಭೇಟಿ ನೀಡದಂತೆ ಸ್ವಾಮೀಜಿಗಳಿಂದ ಸೂಚನೆ ಬಂದಿದೆ. ಸ್ವಾಮೀಜಿಯವರ ಆಶಯದ ಮೇರೆಗೆ ಹುಣಸೂರಿನ ಹಳ್ಳಿಗಳ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿ ಸಮಾಜದ ಹಿರಿಯ ರಾಜಕಾರಣಿ ಅಡಗೂರು ಎಚ್ ವಿಶ್ವನಾಥ್ ಅವರಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ ಎಂದು ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅದರಲ್ಲಿ ಸ್ವಾಮೀಜಿ ಮತ್ತು ಸಿದ್ದರಾಮಯ್ಯನವರ ಫೋಟೊ ಸಹ ಬಳಸಿಕೊಳ್ಳಲಾಗಿದೆ.
ಇದರ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸೋಲಿನ ಭೀತಿಯಿಂದ ಹುಣಸೂರು ಬಿಜೆಪಿ ಅಭ್ಯರ್ಥಿ ಇಂತಹ ಕೀಳುಮಟ್ಟದ ಅಪಪ್ರಚಾರಕ್ಕೆ ಮೊರೆಹೋಗಿರುವುದು ವಿಷಾದನೀಯ ಎಂದು ಕಿಡಿಕಾರಿದ್ದಾರೆ.
ಸರ್ವಜನ ಮಾನ್ಯರಾಗಿರುವ ಸ್ವಾಮೀಜಿ ಹೆಸರನ್ನು ರಾಜಕೀಯ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸುತ್ತೇನೆ ಎಂದಿರುವ ಅವರು, ಸುಳ್ಳು ಸುದ್ದಿಯನ್ನು ಯಾರೂ ನಂಬದಿರಿ. ಉಂಡ ಮನೆಗೆ ಎರಡು ಬಗೆದವರನ್ನು ಸೋಲಿಸಿ ಎಂದು ಕರೆ ನೀಡಿದ್ದಾರೆ. ಅನರ್ಹ ಶಾಸಕರನ್ನು ತಿರಸ್ಕರಿಸಿ ಎಂದು ಮನವಿ ಮಾಡಿದ್ದಾರೆ.
ಆ ಮೂಲಕ ಇದು ಹುಣಸೂರು ಬಿಜೆಪಿ ಅಭ್ಯರ್ಥಿಯೇ ಇಂತಹ ಕೀಳುಮಟ್ಟದ ಕೆಲಸಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿದೆ ಹಾಗಾಗಿ ಇಂತಹ ಹೀನ ಕೆಲಸಕ್ಕಿಳಿದಿದ್ದಾರೆ ಎಂದು ಹರಿಹಾಯ್ದಿದ್ದಾರೆ.