ಕೆಪಿಸಿಸಿ ಅಧ್ಯಕ್ಷ, ವಿಧಾನ ಸಭೆ ಪ್ರತಿಪಕ್ಷದ ನಾಯಕನ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ- ಎಂ. ಬಿ. ಪಾಟೀಲ್
ಸಿದ್ಧರಾಮಯ್ಯ ಮತ್ತು ದಿನೇಶ ಗುಂಡೂರಾವ ನೀಡಿರುವ ರಾಜೀನಾಮೆ ಸ್ವೀಕಾರ ಆಗಲಿಕ್ಕಿಲ್ಲ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುದಲ್ಲಿ ಮಾತನಾಡಿದ ಅವರು, ಬೈ ಎಲೆಕ್ಷನ್ ಬಳಿಕ ಇಬ್ಬರೂ ಮುಖಂಡರು ನೈತಿಕ ಹೊಣೆ ಹೊತ್ತು ಸಿದ್ಧರಾಮಯ್ಯ, ದಿನೇಶ ಗುಂಡೂರಾವ್ ರಾಜೀನಾಮೆ ನೀಡಿದ್ದು ಒಳ್ಳೆಯ ಬೆಳವಣಿಗೆ. ಎಲ್ಲಿಯವರೆಗೆ ಹೈಕಮಾಂಡ ಇವರಿಬ್ಬರ ರಾಜೀನಾಮೆ ಅಂಗೀಕರಿಸುವುದಿಲ್ಲವೋ, ಅಲ್ಲಿಯ ವರೆಗೆ ಆ ಸ್ಥಾನಗಳು ಖಾಲಿ ಇಲ್ಲ ಎಂದು ತಿಳಿಸಿದರು. ಅವರಿಬ್ಬರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಹಿಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಪ್ರತಿಪಕ್ಷದ ನಾಯಕನ ಸ್ಥಾನ ಸಧ್ಯಕ್ಕೆ ಖಾಲಿ ಇಲ್ಲ. ಹೀಗಾಗಿ ಆ ಸ್ಥಾನಗಳಿಗೆ ಆಕಾಂಕ್ಷಿ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪಕ್ಷ ಬದಲಾವಣೆ ಬಯಸಿದಾಗ ಚರ್ಚೆ ನಡೆಸಿ ನಿರ್ಧರಿಸಲಾಗುತ್ತದೆ. ನಾನು ಆಕಾಂಕ್ಷಿ ಎಂಬುದು ಚರ್ಚಿಸುವುದು ಸರಿಯಲ್ಲ. ಕೂಸು ಹುಟ್ಟುವ ಮುಂಚೆ ಕುಲಾಯಿ ಹೊಲಿಸುವುದು ಸರಿಯಲ್ಲ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಪೌರತ್ವ ಕಾಯಿದೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಸಂಸತ್ತಿನಲ್ಲಿ ಮತ್ತಷ್ಟು ಸುದೀರ್ಘವಾಗಿ ಚರ್ಚೆಯಾಗಬೇಕಿತ್ತು. ಏಕಾಏಕಿ ಈ ರೀತಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಸಾರ್ವಜನಿಕವಾಗಿ ಚರ್ಚಿಸಿ ಈ ಬಗ್ಗೆ ನಿರ್ಧರಿಸಬೇಕಿತ್ತು ಎಂದು ಅವರು ತಿಳಿಸಿದರು.
ಡಿಸಿಎಂ ಹುದ್ದೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಗಳ ಸಂಖ್ಯೆ ಹೆಚ್ಚಿಸುವುದಕ್ಕಿಂತ ಎಲ್ಲರನ್ನೂ ಡಿಸಿಎಂ ಮಾಡಿ ಬಿಡಲಿ ಎಂ. ಬಿ. ಪಾಟೀಲ ವ್ಯಂಗ್ಯವಾಡಿದರು. ಉಪಮುಖ್ಯಮಂತ್ರಿ ಹುದ್ದೆಯೇ ಸಂವಿಧಾನಿಕವೋ, ಅಸಂವಿಧಾನಿಕವೋ ಎಂಬುದು ಚರ್ಚೆಯಲ್ಲಿದೆ. ಝೀರೋ ಟ್ರಾಫಿಕ್ ಆಯಾ ಡಿಸಿಎಂ, ಸಚಿವರ ವಿವೇಚನೆಗೆ ಬಿಟ್ಟಿದ್ದು. ನಾನಂತೂ ಗೃಹ ಸಚಿವನಾಗಿದ್ದಾಗ ಝೀರೋ ಟ್ರಾಫಿಕ್ ಬಳಸಲಿಲ್ಲ ಎಂದು ಅವರು ತಿಳಿಸಿದರು. ಲಿಂಗಾಯತ ಸ್ವತಂತ್ರ ಧರ್ಮ ಕುರಿತು ಆಂದೋಲ ಸಿದ್ಧಲಿಂಗ ಸ್ವಾಮೀಜಿ ಹೇಳಿ ವಿಚಾರ ಕುರಿತು ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಎಂ. ಬಿ. ಪಾಟೀಲ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.