ಕೇವಲ ಒಂದು ವಿಮಾನ ಹಾರಿಸಿ ಸುಮ್ಮನಾದ ಮೋದಿ ಪಡೆ ಕತಾರ್ ಕನ್ನಡಿಗರು ಹತಾಶ, ಅತಂತ್ರ
ಸಂಕಷ್ಟದ ಸಮಯದಲ್ಲಿ ತಾಯ್ನಾಡಿಗೆ ವಾಪಸಾಗುರವ ಕನ್ನಡಿಗರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಕತಾರ್ ಕನ್ನಡಿಗರ ನಿರೀಕ್ಷೆ ಸದ್ಯಕ್ಕೆ ಹುಸಿಯಾಗಿದೆ. ಕೇವಲ ಒಂದು ವಿಮಾನ ಹಾರಿಸಿ ಕೈತೊಳೆದುಕೊಂಡಿದೆ ಕೇಂದ್ರ, ಕತಾರ್ ಕನ್ನಡಿಗರು ಅಸಹಾಯಕರಾಗಿದ್ದಾರೆ, ಅತಂತ್ರ ಸ್ಥಿತಿಯಲ್ಲಿದ್ದಾರೆ..
ಕತಾರಿನಿಂದ ವಾಪಸಾಗಲು ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ನೋಂದಣಿ ಮಾಡಿಸಿಕೊಂಡಿದ್ದರೂ ಅವರಿಗಾಗಿ ವಿಶೇಷ ವಿಮಾನ ಹಾರಿಸಲು ಕೇಂದ್ರ ಮೀನಮೇಷ ನೋಡುತ್ತಿದೆ. 162 ಜನರನ್ನು ಹೊತ್ತ ಒಂದು ವಿಮಾನ ಬೆಂಗಳೂರಿಗೆ ತಲುಪಿದ್ದು ಬಿಟ್ಟರೇ ವಂದೇ ಭಾರತ ಅಭಿಯಾನ ಆರಂಭವಾದಾಗಿನಿಂದ ಕತಾರಿನಿಂದ ರಾಜ್ಯಕ್ಕೆ ಬೇರೆ ವಿಮಾನ ಹಾರಿಲ್ಲ.
ಇದರಿಂದಾಗಿ ಸಹಜವಾಗಿಯೇ ಅಲ್ಲಿರುವ ಕನ್ನಡಿಗರು ಹತಾಶಗೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ದುಮ್ಮಾನ ತೋಡಿಕೊಂಡಿದ್ದಾರೆ. ಇದರ ಹೊರತಾಗಿಯೂ ಕೇಂದ್ರದಿಂದ ನಿರೀಕ್ಷತ ಸ್ಪಂದನೆ ವ್ಯಕ್ತವಾಗಿಲ್ಲ. ಬೆಂಗಳೂರು ಹಾಗೂ ಮಂಗಳೂರಿಗೆ ತಲುಪಲು ವಿಶೇಷ ವಿಮಾನಕ್ಕಾಗಿ ಅವರ ಕಾಯುವಿಕೆ ಮುಂದುವರಿದಿದೆ.
ಸದ್ಯ ಹೊರಡಿಲಾಗಿರುವ ವೇಳಾಪಟ್ಟಿಯ ಪ್ರಕಾರ ಜೂನ್ ಐದರವರೆಗೆ ಕರ್ನಾಟಕಕ್ಕೆ ಕತಾರಿನಿಂದ ಯಾವುದೇ ವಿಶೇಷ ವಿಮಾನದ ವ್ಯವಸ್ಥೆ ಇಲ್ಲದಾಗಿದೆ. ಕತಾರಿನಲ್ಲಿ ಸುಮಾರು 30 ಸಾವಿರ ಮಂದಿ ಕನ್ನಡಿಗರಿದ್ದು, ಇವರಲ್ಲಿ ತಾಯ್ನಾಡಿಗೆ ವಾಪಸಾಗಲು ಸುಮಾರು 1,300 ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಬೆಂಗಳೂರು, ಮೈಸೂರು, ಮಂಡ್ಯ ಮೊದಲಾದೆಡೆ ಹೋಗುವವರು ಬೆಂಗಳೂರಿನ ಮೂಲಕ ಹೋಗುವವರಾದರೆ, ಅತ್ತ ಕಾಸರಗೋಡು, ಇತ್ತ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಭಟ್ಕಳ, ಬೈಂದೂರಿನವರೆಗೆ ಹೋಗುವವರು ಮಂಗಳೂರನ್ನು ಆಶ್ರಯಿಸಬೇಕಾಗಿದೆ.
ಆದರೆ ಏನೆಲ್ಲ ಮೊರೆ ಇಟ್ಟರೂ, ಯಾರೆಲ್ಲರಿಗೆ ದುಂಬಾಲು ಬಿದ್ದರೂ ಕತಾರ್ ಕನ್ನಡಿಗರ ಪಾಡು ಅರಣ್ಯರೋದನವಾಗಿದೆ. ಜೂನ್ ಐದರ ಬಳಿಕವಾದರೂ ಕೇಂದ್ರ ಸರಕಾರ ಇಲ್ಲಿನ ಕನ್ನಡಿಗರ ನೆರವಿಗೆ ಧಾವಿಸಬಹುದು ಎಂಬ ನಿರೀಕ್ಷೆಯೊಂದೇ ಈಗ ನಮಗೆ ಉಳಿದಿರುವುದು ಎನ್ನುತ್ತಾರೆ ಭಾರತೀಯ ಸಮುದಾಯ ಹಿತೈಷಿ ವೇದಿಕೆಯ ರಾಜ್ಯ ಪ್ರತಿನಿಧಿ ಸುಬ್ರಮಣ್ಯ ಹೆಬ್ಬಾಗಿಲು,
ಈ ನಡುವೆ ತಾಯ್ನಾಡಿಗೆ ಮರಳಲು ಯಾವುದೇ ವ್ಯವಸ್ಥೆ ಇಲ್ಲ. ವಿಮಾನ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕನ್ನಡಿಗರು ಮಾಜಿ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.