ಕೊರೊನಾದಿಂದ ಕಂಗಾಲಾದ ರಾಜ್ಯ ರೈತರು : ಸೋಂಕು ಹರಡುವ ಭೀತಿಯಲ್ಲಿ ಅನ್ನದಾತರ ಬೆಳೆ ನಾಶ
ಕೊರೊನಾ ಎಫೆಕ್ಟ್ ಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಪ್ರಾಣ ಭಯಕ್ಕೆ ಜನ ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಇರಲಿ ಮಾರುಕಟ್ಟೆವರೆಗೂ ತೆಗೆದುಕೊಂಡು ಹೋಗುವುದು ಕೂಡ ಕಷ್ಟವಾಗಿಬಿಟ್ಟಿದೆ. ಕೊರೊನಾ ಲಾಕ್ ಡೌನ್ ಗೆ ಲಕ್ಷಾಂತರ ರೈತರು ಕಂಗಾಲಾಗಿ ಹೋಗಿದ್ದಾರೆ.
ಕಟಾವಿಗೆ ಬಂದ ಕರ್ಬೂಜ ಹಣ್ಣನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ರೈತನೊಬ್ಬ ಸಂಪೂರ್ಣ ಹಾನಿಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಕೊರೊನಾ ವೈರಸ್ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಬೆಳೆದ ಬೆಳೆ ಮಾರಲಾಗದೆ ಸಂಕಷ್ಟಕ್ಕೆ ಸಿಲುಕಿದ ಮೈಸೂರಿನ ರೈತರು, ಬೆಳೆದ ಬೆಳೆಯನ್ನು ಜಾನುವಾರುಗಳಿಗೆ ತಿನ್ನಿಸಿದ್ದಾರೆ. ಇನ್ನೂ ರಾಜ್ಯದಲ್ಲಿ ಮೊದಲ ಕೊರೊನಾ ಪತ್ತೆಯಾದ ಕಲಬುರಗಿಯಲ್ಲಿ ರೈತರೊಬ್ಬರು ನೇಣಿಗೆ ಶರಣಾಗಿದ್ದಾರೆ.
ರಾಜ್ಯದಲ್ಲಿ ಕೊರೊನಾ ಭೀತಿಗೆ ಅದೆಷ್ಟೋ ರೈತರು ಮಾರುಕಟ್ಟೆಗಳತ್ತ ಕಣ್ಣಾಯಿಸಿ ನೋಡಲಾಗುತ್ತಿಲ್ಲ. ಭಯದಿಂದ ಬೆಳೆದ ದ್ರಾಕ್ಷಿ, ಟಮೊಟೋ, ಈರುಳ್ಳಿ, ತರಕಾರಿಗಳನ್ನ, ರಸ್ತೆಗೆ ಚೆಲ್ಲಿ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ನಿರ್ಘತಿಕರಿಗೆ ಕೊಡುತ್ತಿದ್ದಾರೆ.
ಕೊರೊನಾ ಹರಡುವ ಭೀತಿಯಲ್ಲಿ ಜನ ಸಾಮಾನ್ಯರು ಅಂತರ ಕಾಯ್ದುಕೊಳ್ಳಬೇಕು. ಅದರಲ್ಲೂ ಮಾರುಕಟ್ಟೆಗೆ ಬರುವ ಜನ. ಹೀಗಾಗಿ ಎಲ್ಲಾ ಮಾರುಕಟ್ಟೆಗಳನ್ನು ತೆರೆಯಲಾಗಿಲ್ಲ. ಪಾಲಿಕೆ ಸೂಚಿಸಿದ ಮಾರುಕಟ್ಟೆಗಳಲ್ಲೇ ಜನ ತರಕಾರಿಗಳನ್ನ ತೆಗೆದುಕೊಳ್ಳಬೇಕು. ಹೀಗಾಗಿ ತರಕಾರಿ ಬೆಳೆದ ರೈತ ತನಗೆ ಸೂಕ್ತ ವೆನ್ನಿಸುವ ಮಾರುಕಟ್ಟೆಗಳಿಗೆ ತಾನು ಬೆಳೆದ ತರಕಾರಿಗಳನ್ನು ಕೊಂಡೋಯ್ದು ಕೊಡಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಕೊಡಲು ಹೋದರೂ ಬೆಂಬಲ ಬೆಲೆ ಸಿಗುವುದಿಲ್ಲ. ಹೀಗಾಗಿ ರಾಜ್ಯದ ರೈತರು ಕಂಗಾಲಾಗಿ ಹೋಗಿದ್ದಾರೆ.
ಅದೇನೇ ಆಗಲಿ ರೈತರೇ ದೇಶದ ಬೆನ್ನೆಲುಬು. ರೈತರ ಸಂಕಷ್ಟಕ್ಕೆ ಸರ್ಕಾರ ಸಹಕರಿಸಬೇಕಾಗಿದೆ.