ಗಲಭೆಗಳಲ್ಲಿ ಭಾಗಿಯಾದ ಆರೋಪಿಗೆ ಎಲ್ಲಾ ಕೇಸು ತೆಗೆದು ಹಾಕುತ್ತೇವೆ ಎಂದ ಗೃಹ ಸಚಿವರು!

ಗಲಭೆಗಳಲ್ಲಿ ಭಾಗಿಯಾದ ಆರೋಪಿಗೆ ‘ನಿಮ್ಮ ಮೇಲೆ ಯಾವುದೇ ಕೇಸಿದ್ದರೂ, ಎಲ್ಲಾ ತೆಗೆದು ಹಾಕುತ್ತೇವೆʼ ಎಂದು ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿರುವ ವಿವಾದಾತ್ಮಕ ವಿಡಿಯೋವೊಂದನ್ನು ಅದೇ ಆರೋಪಿಯೇ ಅಕಸ್ಮಾತ್ತಾಗಿ ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ.

ಪ್ರವಾಹ ಪರಿಸ್ಥಿತಿ ಬಗ್ಗೆ ಪರಿಶೀಲಿಸಲು ಗೃಹಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿಯವರು ಉಡುಪಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಲವು ಗಲಭೆಗಳಲ್ಲಿ ಭಾಗಿಯಾಗಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್‌ ಎದುರು ‘ನೋಡ್ರಿ ನಿಮ್ಮ ಮೇಲೆ ಯಾವುದೇ ಕೇಸು ಇದ್ದರೂ ತೆಗೆದು ಹಾಕುತ್ತೇವೆ’ ಎಂದು ಹೇಳಿದ್ದಾರೆ.

ಈ ವಿಡಿಯೋವನ್ನು ಮೊದಲಿಗೆ ಶರಣ್ ಪಂಪ್‌ವೆಲ್‌ರವರೆ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ “ಡಿಜೆ ಹಳ್ಳಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು SDPI ಸಂಘಟನೆಯನ್ನು ನಿಷೇಧಿಸಬೇಕು ಮತ್ತು ಈ ಘಟನೆಯ ಹಿಂದೆ ರಾಷ್ಟ್ರವಿದ್ರೋಹಿ ಸಂಘಟನೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ, ಭಯೋದ್ಪಾದಕರ ಕೈವಾಡವಿರುದರಿಂದ ಈ ಘಟನೆಯನ್ನು ರಾಷ್ಟ್ರೀಯ ತನಿಖಾ ದಳದ (NIA) ಮುಖಾಂತರ ತನಿಖೆಗೆ ನಡೆಸಲು ಮಾನ್ಯ ಗೃಹಸಚಿವರಿಗೆ ಆಗ್ರಹಿಸಿದ್ದೇವೆ” ಎಂದು ಬರೆದಿದ್ದಾರೆ.

https://twitter.com/PumpwellSharan/status/1293485796800921600?ref_src=twsrc%5Etfw%7Ctwcamp%5Etweetembed%7Ctwterm%5E1293485796800921600%7Ctwgr%5E&ref_url=https%3A%2F%2Fnaanugauri.com%2Fwe-remove-your-all-cases-home-minister-basavaraj-bommai-to-sharan-pumpwell%2F

ಪೋಸ್ಟ್‌ನ ಆರ್ಕೈವ್ ಆವೃತ್ತಿ ಇಲ್ಲಿದೆ.

ಶರಣ್ ಪಂಪ್‌ವೆಲ್ ಮತ್ತು ಸಂಗಡಿಗರು ಪಿಎಫ್‌ಐ ಮತ್ತು ಎಸ್‌ಡಿಪಿಐ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಗೃಹ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಯಾವ ವಿಡಿಯೋ ಹಾಕಿದ್ದೇನೆ ಎಂದು ಪರಿಶೀಲಿಸದೇ, ಕ್ರಿಮಿನಲ್ ಪ್ರಕರಣದ ಆರೋಪಿಯಾದ ತನ್ನ ಮತ್ತು ಗೃಹ ಸಚಿವರ ನಡುವಿನ ‘ರಹಸ್ಯ’ ಸಂಭಾಷಣೆಯನ್ನೇ ಹಂಚಿಕೊಂಡುಬಿಟ್ಟಿದ್ದಾರೆ. ಸ್ವತಃ ಗೃಹ ಸಚಿವರೂ ಸಹಾ ಈ ಮಾತನ್ನು ಹೇಳುವಾಗ ದನಿತಗ್ಗಿಸಿ ಹೇಳುತ್ತಿರುವುದು ಕಂಡು ಬಂದಿದೆ.

ಒಂದು ಕಡೆ ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈಬಿಟ್ಟ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸದಾ ಟೀಕಿಸುವ ಬಿಜೆಪಿ ಸರ್ಕಾರ ಮತ್ತು ಅದರ ಸದಸ್ಯರು ಈಗ ಬಲಪಂಥೀಯ ಕಾರ್ಯಕರ್ತರು ಭಾಗಿಯಾದ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಅದೇ ಪಕ್ಷಕ್ಕೆ ಸೇರಿದ ಗೃಹ ಸಚಿವರೇ ಹೇಳುತ್ತಿದ್ದಾರೆ. ಹಾಗಾಗಿ ಈ ವಿಡಿಯೋಗೆ ವಿಶೇಷ ಮಹತ್ವ ಬಂದಿದೆ.

ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಯ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರುಗಳು ಮತ್ತು ಇತರರು ಇದೀಗ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಶರಣ್‌  ಪಂಪ್‌ವೆಲ್‌ ವಿರುದ್ಧದ ಕೇಸುಗಳನ್ನು ವಾಪಸ್ ಪಡೆಯುತ್ತೇವೆ ಎಂದು ಸ್ವತಃ ಗೃಹ ಸಚಿವರು ಹೇಳಿರುವುದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕು.


ಇದನ್ನೂ ಓದಿ: ಸ್ವದೇಶಿ ಎಂದರೆ ವಿದೇಶಿ ವಸ್ತುಗಳನ್ನು ತಿರಸ್ಕರಿಸುವುದಲ್ಲ! ಹೊಸ ವ್ಯಾಖ್ಯಾನ ಕೊಟ್ಟ ಮೋಹನ್ ಭಾಗವತ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights