ಜನತಾ ಕರ್ಫೂ: ದೇಶಾದ್ಯಂತ ರೈಲ್ವೇ ಸಂಚಾರ ಬಂದ್
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾರ್ಚ್. 22 ರಂದು ‘ಜನತಾ ಬಂದ್‘ಗೆ ಕರೆ ನೀಡಿದ್ದಾರೆ. ಇದರಿಂದಾಗಿ ಭಾರತೀಯ ರೈಲ್ವೇ ಕೂಡ ಇದಕ್ಕೆ ಬೆಂಬಲ ನೀಡಿದೆ. ಭಾನುವಾರ ದೇಶದಾದ್ಯಂತ ಯಾವುದೇ ರೈಲುಗಳ ಸಂಚಾರ ನಡೆಸದೇ ಇರಲು ರೈಲ್ವೇ ಇಲಾಖೆ ನಿರ್ಧರಿಸಿದೆ.
ಶನಿವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಭಾನಾವಾರ ರಾತ್ರಿ 10 ಗಂಟೆಯವರೆಗೆ ದೇಶದ ಯಾವುದೇ ನಿಲ್ದಾಣಗಳಿಂದ ಪ್ಯಾಸೆಂಜರ್ ರೈಲು ಹೊರಡುವುದಿಲ್ಲ. ಭಾನುವಾರ ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 10ರವರೆಗೆ ಮೇಲ್, ಎಕ್ಸ್ ಪ್ರೆಸ್ ರೈಲು ಸಂಚಾರ ಇರುವುದಿಲ್ಲ. ಅಲ್ಲದೆ, ಮಾ.22ರಿಂದ ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ ಎಲ್ಲಾ ರೀತಿಯ ಆಹಾರ ಪೂರೈಕೆ ನಿಲ್ಲಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಆದರೆ, ನಿರ್ಧಾರ ಕೈಗೊಳ್ಳಲಾಗಿರುವ ಅವಧಿಗೂ ಮುನ್ನ ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಿಗ್ಗೆಯೇ ಹೊರಡುವ ಅತಿ ಹೆಚ್ಚು ದೂರ ಕ್ರಮಿಸುವ ರೈಲುಗಳು ಸಂಚಾರದ ಕೊನೆಯ ನಿಲ್ದಾಣತಲುಪುವರೆಗೂ ಸಂಚಾರ ಮುಂದುವರೆಸಲಿವೆ ಎಂದು ಇಲಾಖೆ ತಿಳಿಸಿದೆ.
ಅಲ್ಲದೆ, ಕೊರೊನಾ ವೈರಸ್ನ ಜೀವಿತಾವಧಿ 12 ಗಂಟೆಗಳು ಮಾತ್ರ, 14 ಗಂಟೆಗೆ ಜನತಾ ಕರ್ಫೂನಿಂದ ಕೊರೊನಾ ನಾಶವಾಗಿಬಿಡುತ್ತದೆ. ಭಾರತೀಯ ಮಿಲಿಟರಿಯು ಭಾನುವಾರ ಬೆಳಗ್ಗೆ ದೇಶಾದ್ಯಂತ ಕೊರೊನಾಗೆ ವಿಮಾನಗಳಲ್ಲಿ ಔಷಧಿ ಸಿಂಪಡಿಸಲಿದೆ. ಹಾಗಾಗಿ ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂಬ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.
ವೈದ್ಯರ ಪ್ರಕಾರ, ಜನತಾ ಕರ್ಫೂನಿಂದ ಕೊರೊನಾ ನಿಯಂತ್ರಿಸಲು ಸಾಧ್ಯವಿಲ್ಲ. ಕೊರೊನಾ ಕಾಣಿಸಿಕೊಂಡು, ಸೋಂಕು ಖಚಿತವಾಗಲು ಮೂರು ದಿನಗಳ ಸಮಯ ಬೇಕು. ಹೀಗಿರುವಾಗ 14 ಗಂಟೆಗಳ ಕರ್ಫೂಯಿಂದ ಕೊರೊನಾ ನಿಯಂತ್ರವಾಗುವುದಿಲ್ಲ. ಇದು ಅವೈಜ್ಞಾನಿಕ ನಡೆ ಎಂದು ಹೇಳಲಾಗಿದೆ.