ಡಿ.21ಕ್ಕೆ ಸಂವಿಧಾನ ಉಳಿವಿಗಾಗಿ ಕರ್ನಾಟಕ ಮತ್ತು ಗೌರಿ ಮೀಡಿಯಾ ಟ್ರಸ್ಟ್ ಆಯೋಜಿಸಿದ ಸೂಫಿಯಾನ ಗಾನಸಂಜೆ
ಆತ್ಮೀಯ ನಮಸ್ಕಾರಗಳು
ದೇಶದ ಪ್ರಜಾತಂತ್ರವನ್ನು ಗಟ್ಟಿಗೊಳಿಸುವ ವಿಚಾರ ಹಾಗಿರಲಿ, ಉಳಿಸಿಕೊಳ್ಳುವ ಸವಾಲು ನಮ್ಮೆಲ್ಲರ ಮುಂದಿರುವುದು ನಿಮಗೆ ಗೊತ್ತಿದೆ.
ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿರುವ ಸಂವಿಧಾನ ಉಳಿವಿಗಾಗಿ ಕರ್ನಾಟಕವು ಮಾಡುತ್ತಿರುವ ಕೆಲಸಗಳುಮತ್ತು ಗೌರಿ ಮೀಡಿಯಾ ಟ್ರಸ್ಟ್ನಿಂದ ಪರ್ಯಾಯ ಜನಮಾಧ್ಯಮ ಕಟ್ಟುವ ಕೆಲಸದಲ್ಲೂ ನೀವೆಲ್ಲರೂ ಕೈಜೋಡಿಸಿದ್ದು ಸಂತಸದ ವಿಷಯ.
ಈ ನಮ್ಮ ಪ್ರಯತ್ನಗಳ ಮುಂದುವರಿಕೆಯ ಜೊತೆಗೇ ಭಾರತದ ವೈವಿಧ್ಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದೂ ನಾವೆಲ್ಲ ಮಾಡಬೇಕಾಗಿರುವ ಕೆಲಸ. ಈ ನಿಟ್ಟಿನಲ್ಲಿ ಒಂದು ಮಹತ್ವದ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಭಾರತದ ವೈವಿಧ್ಯ ಮತ್ತು ಆಧ್ಯಾತ್ಮಿಕ ಇತಿಹಾಸವನ್ನು ಪ್ರತಿನಿಧಿಸುವ ಸೂಫಿ ಸಂಗೀತದ ಒಬ್ಬ ಶ್ರೇಷ್ಠ ಗಾಯಕರಾದ ಉಸ್ತಾದ್ ಮುಖ್ತಿಯಾರ್ ಆಲಿ ಅವರು ಇದೇ ತಿಂಗಳು 21ರಂದು ಸಂತ ಜೋಸೆಫ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ.
ಈ ಕಾರ್ಯಕ್ರಮವು ನಮ್ಮ ಮುಂದಿನ ಕೆಲಸಗಳಿಗೆ ಆರ್ಥಿಕ ಸಂಪನ್ಮೂಲವನ್ನು ರೂಢಿಸುವ ಕಾರ್ಯಕ್ರಮವೂ ಆಗಿರಲಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯವಿದೆ.
ಉಸ್ತಾದ್ ಮುಖ್ತಿಯಾರ್ ಅಲಿ ಅವರು ನಮ್ಮ ಕೆಲಸಗಳ ಬಗ್ಗೆ ತಿಳಿದುಕೊಂಡು ಯಾವುದೇ ಶುಲ್ಕವನ್ನು ಪಡೆಯದೇ ಕಾರ್ಯಕ್ರಮ ನಡೆಸಿಕೊಡಲಿದ್ದರೂ, ಕಾರ್ಯಕ್ರಮವನ್ನು ಆಯೋಜಿಸಲು ಸಾಕಷ್ಟು ಖರ್ಚು ಬರಲಿದೆ. ಹಾಗಾಗಿ ತಾವೂ ಇದರಲ್ಲಿ ಸಹಕರಿಸಬೇಕಾಗಿ ಮನವಿ.
ಈ ಕಾರ್ಯಕ್ರಮದ ನಿಮಿತ್ತ ಒಂದು ಸ್ಮರಣಸಂಚಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಸಾಮಾನ್ಯವಾಗಿ ಉದ್ದಿಮೆದಾರರು/ರಾಜಕಾರಣಿಗಳಿಂದ ಮಾತ್ರ ಜಾಹೀರಾತು ಪಡೆದು ಸ್ಮರಣ ಸಂಚಿಕೆ ತರುವುದು ವಾಡಿಕೆ. ಆದರೆ, ಈ ಸ್ಮರಣ ಸಂಚಿಕೆಯಲ್ಲಿ ಸದರಿ ಉದ್ದೇಶವನ್ನು ಅರ್ಥ ಮಾಡಿಕೊಂಡಿರುವ ಎಲ್ಲರ ಬೆಂಬಲವೂ ಇದಕ್ಕಿದೆ ಎಂಬುದನ್ನು ಕಾಣಿಸಬೇಕೆಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ.
ಹೀಗಾಗಿ ಸ್ಮರಣ ಸಂಚಿಕೆಗೆ ಕನಿಷ್ಠ 2,500 ರೂ.ಗಳಿಂದ ಗರಿಷ್ಠ 25,000 ರೂ.ಗಳವರೆಗೆ ಸಂಘಟನೆಗಳು/ಸಂಸ್ಥೆಗಳಿಂದ ಜಾಹೀರಾತಿನ ಹಣವನ್ನು ಪಡೆದು, ಅದನ್ನು ಪ್ರಕಟಿಸಬೇಕೆಂದುಕೊಂಡಿದ್ದೇವೆ.
ಹೀಗಾಗಿ ನಿಮ್ಮ ಸಂಸ್ಥೆ/ಸಂಘಟನೆಯ ವತಿಯಿಂದ ಜಾಹೀರಾತು ನೀಡಬೇಕೆಂದು ಈ ಮೂಲಕ ಕೋರುತ್ತೇವೆ.
ನಿಮ್ಮ ಉತ್ತರದ ನಿರೀಕ್ಷೆಯಲ್ಲಿ
ಸಂವಿಧಾನ ಉಳಿವಿಗಾಗಿ ಕರ್ನಾಟಕ ಮತ್ತು ಗೌರಿ ಮೀಡಿಯಾ ಟ್ರಸ್ಟ್