ಮತ್ತಷ್ಟು ಹಿಗ್ಗಿದ ನಮ್ಮ ಮೆಟ್ರೋ: ಯಲಚೇನಹಳ್ಳಿ-ಅಂಜನಾಪುರ ಮಾರ್ಗಕ್ಕೆ ಚಾಲನೆ!
ಬೆಂಗಳೂರಿನ ನಮ್ಮ ಮೆಟ್ರೋ ರೈಲು ಜಾಲ ಮತ್ತಷ್ಟು ಹಿಗ್ಗಿದ್ದು, ಯಲಚೇನಹಳ್ಳಿ-ಅಂಜನಾಪುರ ವಿಸ್ತರಿತ ಮೆಟ್ರೋ ಮಾರ್ಗಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು (ಗುರುವಾರ) ಚಾಲನೆ ನೀಡಿದ್ದಾರೆ.
6 ಕಿ.ಮೀ ಉದ್ದದ ಹೊಸ ಮೆಟ್ರೋ ಮಾರ್ಗದ ಚಾಲನಾ ಕಾರ್ಯಕ್ರಮಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಭಾಗಿಯಾಗಿ ಹಸಿರು ನಿಶಾನೆ ತೋರಿಸಿದ್ದಾರೆ.
ಮೆಟ್ರೋಗೆ ಚಾಲನೆ ನೀಡಿ ಮಾತನಾಡಿದ ಹರ್ದೀಪ್, ದೇಶದ 18 ಜಿಲ್ಲೆಗಳಲ್ಲಿ 700 ಕಿ.ಮೀ. ಮೆಟ್ರೊ ಜಾಲ ರೂಪಿಸಲಾಗಿದೆ ಎಂದು ಹೇಳಿದರು. ನಂತರ ಮಾತನಾಡಿದ ಸಿಎಂ ಬಿಎಸ್ವೈ, 2025ರ ವೇಳೆಗೆ ಬೆಂಗಳೂರಿನಲ್ಲಿ 175 ಕಿ.ಮೀ ಉದ್ದದ ಮೆಟ್ರೋ ಜಾಲ ರೂಪಿಸಲಾಗುವುದು ಎಂದು ತಿಳಿಸಿದರು.
ಈ ಮೊದಲು ನಮ್ಮ ಮೆಟ್ರೋದ ಗ್ರೀನ್ ಲೈನ್ (ಹಸಿರು ಮಾರ್ಗ) ತುಮಕೂರು ರಸ್ತೆಯಲ್ಲಿರುವ ನಾಗಸಂದ್ರದಿಂದ ಕನಕಪುರ ರಸ್ತೆಯಲ್ಲಿರುವ ಯಲಚೇನಹಳ್ಳಿಯವರೆಗೆ ಸಂಪರ್ಕ ಕಲ್ಪಿಸುತ್ತಿತ್ತು. ಇದೀಗ ಗ್ರೀನ್ ಲೈನ್ ಸಂಪರ್ಕ ಜಾಲ ವಿಸ್ತರಣೆಗೊಂಡಿದ್ದು, ಕನಕಪುರ ರಸ್ತೆಯ ಅಂಜನಾಪುರದ ವರೆಗೆ ಹಿಗ್ಗಿದೆ.
ಹೊಸ ಮೆಟ್ರೋ ಮಾರ್ಗದ ನಿಲ್ದಾಣಗಳು:
ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ, ರೇಷ್ಮೆ ಸಂಸ್ಥೆ(ಅಂಜನಾಪುರ).
ಈ ಮಾರ್ಗದಲ್ಲಿ ಕಳೆದ ಮೂರು ತಿಂಗಳಿನಿಂದ ಪ್ರಾಯೋಗಿಕ ಸಂಚಾರ ನಡೆಸಿರುವ ಮೆಟ್ರೋ ರೈಲು, ಕಳೆದ ತಿಂಗಳು ರೈಲ್ವೆ ಸೇಫ್ಟಿ ಸರ್ಟಿಫಿಕೇಟ್ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಾರ್ವಜನಿಕರ ಸಂಚಾರಕ್ಕೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: ಮುಂದುವರೆದ BJP ಅತೃಪ್ತರ ಆಕ್ರೋಶ: ಕೇಸರಿ ಪಕ್ಷದಲ್ಲಿ ಬಂಡಾಯದ ತಿರುವು?