ಬಿಜೆಪಿ ಅಂದ್ರೆ ‘ಬ್ಲಾಕ್ಮೇಲರ್ಸ್ ಜನತಾ ಪಕ್ಷ’; ಬಿಜೆಪಿಗೆ ಡಿಕೆಶಿ ಟಾಂಗ್
ಬಿಜೆಪಿ ಎಂದರೆ ಬ್ಲಾಕ್ ಮೇಲರ್ಸ್ ಜನತಾ ಪಕ್ಷ ಎಂದು ಆ ಪಕ್ಷದ ನಾಯಕರೇ ಹೇಳಿಕೊಂಡಿದ್ದಾರೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಬ್ಲಾಕ್ ಮೇಲ್, ಲಂಚದ ಆರೋಪ ಕೇಳಿ ಬಂದಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ನೈತಿಕ ಹೊಣೆ ಹೊರಬೇಕು. ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
‘ಮುಖ್ಯಮಂತ್ರಿ ಯಡಿಯೂರಪ್ಪನವರೇ ನಿನ್ನೆ ಸಂಪುಟ ವಿಸ್ತರಣೆ ಮಾಡಿದ್ದೀರ. ನೀವು ಯಾರನ್ನ ಬೇಕಾದರೂ ಮಾಡಿಕೊಳ್ಳಿ. ನಮ್ಮದು ಯಾವ ಅಭ್ಯಂತರವೂ ಇಲ್ಲ. ನಿಮ್ಮವರೇ ಬ್ಲಾಕ್ ಮೇಲರ್ಸ್ ಸಂಪುಟ ಎಂದಿದ್ದಾರೆ. ನಿಮ್ಮ ಸಿಡಿಯ ಬಗ್ಗೆಯೂ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರು ಲಂಚ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದ್ಯಾವುದೂ ನನ್ನ ಹೇಳಿಕೆಯಲ್ಲ. ಇದೆಲ್ಲವೂ ಬಿಜೆಪಿಯ ಮಾತುಗಳು. ಸಿಡಿಯಲ್ಲಿ ಏನಿದೆ ಎಂಬುದು ಅದನ್ನು ನೋಡಿ, ಚರ್ಚೆ ಮಾಡಿರುವ ಬಿಜೆಪಿಯವರಿಗೆ ಗೊತ್ತಿದೆ. ನಾನು ಕಾರವಾರದಲ್ಲೇ ಸಿಡಿ ಬಗ್ಗೆ ಹೇಳಿಕೆ ಕೊಟ್ಟಿದ್ದೆ. ಅದನ್ನ ತೆಗೆದಿಡಿ ಅಂತ ಹೋಂ ಮಿನಿಸ್ಟರ್ ಹೇಳಿದ್ದರು. ಈಗ ನಿಮ್ಮವರೇ ತೆಗೆದಿಡುತ್ತಿದ್ದಾರೆ ನೋಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ‘ಸಿಡಿ ಕೋಟಾದಲ್ಲಿ ಮಂತ್ರಿಗಿರಿ’ ಬಸವನಗೌಡ ಯತ್ನಾಳ್ ಬಿಎಸ್ವೈ ವಿರುದ್ಧ ಗಂಭೀರ ಆರೋಪ!
ಎಷ್ಟು ಲಂಚ ಕೊಟ್ಟಿದ್ದಾರೆ? ಮತ್ತೊಬ್ಬ ಸಚಿವರು ಅದೆಷ್ಟೋ ಖರ್ಚು ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲದಕ್ಕೂ ಉತ್ತರ ಸಿಗಬೇಕಲ್ಲವೇ? ಇಷ್ಟೆಲ್ಲಾ ಆಗುತ್ತಿದ್ದರೂ ಇಡಿ, ಐಟಿ, ಎಸಿಬಿ ಏನು ಮಾಡ್ತಿವೆ? ಈ ಸಂಸ್ಥೆಗಳು ಯಾಕೆ ಸುಮ್ಮನಿವೆ? ಇವರೆಲ್ಲರೂ ಸುಮೋಟೋ ಕೇಸ್ ಯಾಕೆ ದಾಖಲಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಬ್ಲಾಕ್ ಮೇಲ್, ಲಂಚ ಆರೋಪದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಈ ತನಿಖೆ ನಡೆಯಬೇಕು. ಐಟಿ, ಇಡಿಯವರು ಸುಮೋಟೋ ಕೇಸ್ ಹಾಕಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮತ್ತೊಂದು ಸ್ಪೋಟಕ ಹೇಳಿಕೆ…!