ಡ್ರೋನ್ ಕ್ಯಾಮೆರಾ ಮೂಲಕ ಪೊಲೀಸ್ ಕಾರ್ಯಾಚರಣೆ : ಗುಂಪು ಸೇರಿದ್ರೆ ಕೇಸ್!
ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದರೂ ಜನ ಮನೆ ಬಿಟ್ಟು ಹೊರಬರುವುದು ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕದ ಕೆಲವೆಡೆ ಕಟ್ಟೆಚ್ಚರ ವಹಿಸುವ ದೃಷ್ಟಿಯಿಮದ ಡ್ರೋನ್ ಬಳಕೆ ಮಾಡಲಾಗುತ್ತಿದೆ.
ಹೌದು… ಮೈಸೂರಿನಲ್ಲಿ 47 ಸೋಂಕಿತ ಪ್ರಕರಣಗಳಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಆದರೆ ಕೆಲ ಪುಂಡರಿಂದಾಗಿ ಮನೆಯಲ್ಲಿ ಕುಳಿತು ನಿಯಮ ಪಾಲಿಸುವವರಿಗೂ ತೊಂದರೆಯಾಗಿದೆ. ಹೀಗಾಗಿ ಲಾಕ್ಡೌನ್ ಇದ್ದರೂ ಜನ ಸಂಚಾರ ನಿಲ್ಲದ ಕಾರಣ ಡ್ರೋನ್ ಕ್ಯಾಮೆರಾ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಲಾಕ್ಡೌನ್ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದ್ದು, ಡ್ರೋನ್ ಕ್ಯಾಮೆರಾ ಮೂಲಕ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ಯಾರಾದರೂ ಲಾಕ್ಡೌನ್ ಮೀರಿ ಹೊರಗೆ ಗುಂಪು ಸೇರಿದರೆ ಅವರನ್ನು ಡ್ರೋನ್ ಮೂಲಕ ಪತ್ತೆಹಚ್ಚಿ, ಕೇಸ್ ದಾಖಲಿಸಲಾಗುತ್ತದೆ. ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ. ಇಲ್ಲಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಪ್ರಕರಣ ದಾಖಲಾಗಿದೆ ಮಹದೇವಪುರ ಮುಖ್ಯ ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ನಿಂತಿದ್ದ 6 ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ 8 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 269, 270, 188ರ ಅಡಿ ಪ್ರಕರಣ ದಾಖಲಿಸಲಾಗಿದೆ.
ದಾವಣೆಗೆರೆಯಲ್ಲೂ ಇಂಥದ್ದೇ ಕಾರ್ಯಕ್ಕೆ ಮುಂದಾದ ಪೊಲೀಸರು, ಜನ ಗುಂಪಾಗುವುದನ್ನ ತಡೆಯಲು ಈ ಅಸ್ತ್ರ ಬಳಕೆ ಮಾಡಿದ್ದಾರೆ.
ದಾವಣಗೆರೆಯಲ್ಲೂ ಡ್ರೋನ್ ಕ್ಯಾಮೆರಾ ಮೂಲಕ ಎಸ್ಪಿ ಹನುಮಂತರಾಯ ನೇತೃತ್ವದ ತಂಡ ಜನರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮೊದಲ ಹಂತವಾಗಿ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಡ್ರೋನ್ ಕ್ಯಾಮೆರಾವನ್ನು ನಗರದಲ್ಲಿ ಹಾರಿಸಲಾಗಿದೆ. ಆಜಾದ್ ನಗರ, ಬಾಷಾ ನಗರ, ವೆಂಕೋಬ ಕಾಲೋನಿ ಸೇರಿದಂತೆ ಠಾಣೆ ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮೆರಾ ಹಾರಿಸಲಾಗಿದೆ. ಈ ಮೂಲಕ ಯಾರಾದರೂ ಲಾಕ್ಡೌನ್ ಉಲ್ಲಂಘಿಸಿ, ಗುಂಪಾಗಿ ಓಡಾಡಿದರೆ ಅವರ ವಿರುದ್ಧ ಕೇಸ್ ದಾಖಲಿಸಲಅಗುತ್ತಿದೆ.
ಇದೇ ರೀತಿ ರಾಜ್ಯಡೆಲ್ಲೆಡೆ ಕಟ್ಟೆಚ್ಚರ ವಹಿಸಬೇಕಾಗಿದೆ. ಪುಂಡರನ್ನ ಮಟ್ಟ ಹಾಕಲು ಇದು ಒಳ್ಳೆಯ ಉಪಾಯವಾದರೂ, ಜನ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.